ಸ್ವಚ್ಛತೆ,ನೀರು, ರಸ್ತೆಗೆ ಸಂಬಂಧಿಸಿದ ಸಮಸ್ಯೆಗಳಿರುವ ನಗರದ ಕೆಲವು ಬಡಾವಣೆಗಳಿಗೆ ಮಹಾನಗರ ಪಾಲಿಕೆ ಆಯುಕ್ತ ಕಾರ್ತಿಕ್ ಎಂ. ಅವರು ಮಂಗಳವಾರ ಭೇಟಿ ನೀಡಿ ಪರಿಶೀಲಿಸಿದರು.
ಸುಭಾಷ್ ನಗರ, ಅಶೋಕ್ ನಗರ ಸೇರಿದಂತೆ ನಗರದ ವಿವಿಧೆಡೆ ಭೇಟಿ ನೀಡಿದ ಆಯುಕ್ತರು, ಕೆಯುಡಿಎಫ್ಸಿ ನೀರು ಸರಬರಾಜು ಯೋಜನೆಗೆ ಸಂಬಂಧಿಸಿದಂತೆ ಪರಿಶೀಲಿಸಿದರು. ಕೆಲವು ಕಡೆ ಕುಡಿಯುವ ನೀರಿನ ಪೈಪ್ ಗೆ ಚರಂಡಿ ನೀರು ಸೇರುತ್ತಿರುವ ಬಗ್ಗೆ ಮಾಹಿತಿ ಪಡೆದು ಸರಿಪಡಿಸಬೇಕೆಂದು ಹೇಳಿದರು. ಎಲ್ ಅಂಡ್ ಟಿ
ಕಂಪನಿಯವರು ನೀರು ಸರಬರಾಜಿಗಾಗಿ ಪೈಪ್ ಲೈನ್ ಅಳವಡಿಸಲು ತೋಡಿದ ಗುಂಡಿಗಳನ್ನು ಬೇಗ ಕಾರ್ಯ ಮುಗಿಸಿ ಮುಚ್ಚುವಂತೆ ತಾಕಿತು ಮಾಡಿದರು. ಮಳೆಯಿಂದಾಗಿ ತೀರಾ ಹದಿಗೆಟ್ಟಿರುವ ಕೆಲ ರಸ್ತೆಗಳ ದುರಸ್ತಿಗೆ ಸೂಚಿಸಿದರು. ಕಸದ ರಾಶಿ ಸೃಷ್ಟಿಯಾಗಿರುವ ಕೆಲ ಸ್ಥಳಗಳನ್ನು ನೋಡಿ ಬೇಗ ವಿಲೇವಾರಿ ಮಾಡಲು ಮತ್ತು ಕಸ ಚೆಲ್ಲದಂತೆ ಸಾರ್ವಜನಿಕರಿಗೆ ಎಚ್ಚರಿಕೆ ನೀಡಲು ಸಿಬ್ಬಂದಿಗೆ ಆದೇಶಿಸಿದರು.
ಈ ಸಂದರ್ಭದಲ್ಲಿ ಸಾರ್ವಜನಿಕರೂ ಸಹ ಕೆಲ ಸಮಸ್ಯೆಗಳನ್ನು ಆಯುಕ್ತರ ಗಮನಕ್ಕೆ ತಂದು ಬಗೆಹರಿಸಲು ಮನವಿ ಮಾಡಿದರು.
ಈ ಎಲ್ಲ ಸಮಸ್ಯೆಗಳನ್ನು ಶೀಘ್ರ ಬಗೆಹರಿಸಿ ಸಾರ್ವಜನಿಕರಿಗೆ ಅನುಕೂಲ ಮಾಡಿಕೊಡಬೇಕೆಂದು ಸ್ಥಳದಲ್ಲಿ ಅಧಿಕಾರಿಗಳಿಗೆ ಆಯುಕ್ತರು ಸೂಚನೆ ನೀಡಿದರು.
ಪಾಲಿಕೆ ಅಭಿಯಂತರುಗಳಾದ ಅನೂಪ ಕನೋಜ, ಆದಿಲ್ ಖಾನ್ ಪಠಾಣ್, ಕೆಯುಐ ಡಿಎಫ್ ಸಿ ಹಾಗೂ ಎಲ್ ಅಂಡ್ ಟಿ ಕಂಪನಿ ಅಧಿಕಾರಿಗಳು, ವಿವೇಕ ಮಠದ ಸೇರಿದಂತೆ ಪಾಲಿಕೆ ಅಧಿಕಾರಿಗಳು ಸಿಬ್ಬಂದಿ ಉಪಸ್ಥಿತರಿದ್ದರು.

