ನಿಸ್ವಾರ್ಥ ಸೇವೆ ಹಾಗೂ ಶ್ರಾವಣ ಮಾಸದ ಅನ್ನದಾಸೋಹದ ಮೂಲಕ ನಡೆದಾಡುವ ದೇವರೆಂದು ಖ್ಯಾತರಾದ ರೇಣುಕಾ ಆಶ್ರಮದ ಮಾತೋಶ್ರೀ ಗಂಗಾಮಾತಾ ಮಾಸ್ತಿ ಅವರಿಗೆ, ಅಲೈನ್ಸ್ ಅಂತರಾಷ್ಟ್ರೀಯ ಸೇವಾ ಸಂಸ್ಥೆ ವತಿಯಿಂದ ‘ಜೀವಮಾನ ಸಾಧನೆ ಪ್ರಶಸ್ತಿ’ ನೀಡಿ ಗೌರವಿಸಲಾಯಿತು.

ಬೆಳಗಾವಿಯ ಅಜಮನಗರದ ರೇಣುಕಾ ಆಶ್ರಮ ಚಾರಿಟೆಬಲ್ ಟ್ರಸ್ಟ್ನ ಮಾತೋಶ್ರೀ ಗಂಗಾಮಾತಾ ಮಾಸ್ತಿ ಅವರು ಆಧುನಿಕ ಯುಗದಲ್ಲಿ ಭಕ್ತಿ, ಶ್ರದ್ಧೆ ಹಾಗೂ ಬಾಂಧವ್ಯದೊಂದಿಗೆ ನಡೆಸುತ್ತಿರುವ ಸಮಾಜಮುಖಿ ಸೇವೆಯನ್ನು ಗುರುತಿಸಿ, ಅಲೈನ್ಸ್ ಅಂತರಾಷ್ಟ್ರೀಯ ಸೇವಾ ಸಂಸ್ಥೆಯ ವತಿಯಿಂದ ಅಂತಾರಾಷ್ಟ್ರೀಯ ಅಧ್ಯಕ್ಷರ ಪ್ರಶಸ್ತಿಯಾದ ‘ಜೀವಮಾನ ಸಾಧನೆ ಪ್ರಶಸ್ತಿ’ಯನ್ನು ಪ್ರದಾನ ಮಾಡಲಾಯಿತು. ಬೆಳಗಾವಿ ಮಹಾನಗರ ಪಾಲಿಕೆ ಆಯುಕ್ತರಾದ ಕಾರ್ತಿಕ ಎಂ ಹಾಗೂ ಅಲೈನ್ಸ್ ಅಂತರಾಷ್ಟ್ರೀಯ ಸಂಸ್ಥೆಯ ಸಂಸ್ಥಾಪಕ ಜಿಲ್ಲಾ ಅಧ್ಯಕ್ಷ ದಿನಕರ ಶೆಟ್ಟಿ ಅವರ ಅಮೃತಹಸ್ತದಿಂದ ಶಾಲು ಹೊದಿಸಿ, ಫಲಪುಷ್ಪ ಹಾಗೂ ಕಿರುಕಾಣಿಕೆ ನೀಡಿ ಸತ್ಕರಿಸಲಾಯಿತು. ಈ ಸಮಾರಂಭದಲ್ಲಿ ಸುಜೀತ್ ಮುಳಗುಂದ, ಗಜಾನನ ಮೇದಾರ, ದಿವ್ಯಾ ಎಸ್. ಅಂಗಡಿ ಸೇರಿದಂತೆ ನೂರಾರು ಶರಣರು ಹಾಗೂ ಶರಣೆಯರು ಉಪಸ್ಥಿತರಿದ್ದರು.
