ಬೆಳಗಾವಿಯ ಯೂನಿಯನ್ ಜಿಮ್ಖಾನಾ ಕ್ಲಬ್ನಲ್ಲಿ ನಡೆದ ಗುಂಡಿನ ದಾಳಿಯನ್ನು ಗಂಭೀರವಾಗಿ ಪರಿಗಣಿಸಿರುವ ಕ್ಯಾಂಟೋನ್ಮೆಂಟ್ ಬೋರ್ಡ್ ಅಧಿಕಾರಿಗಳು, ಮಿಲಿಟರಿ ಸೈನಿಕರ ಬಂದೋಬಸ್ತ್ನಲ್ಲಿ ಜಿಮ್ಖಾನಾವನ್ನು ಸೀಲ್ ಮಾಡಿದ್ದಾರೆ.

ಸುರೇಶ್ ಜಾಲಗಾರ್ ಎಂಬ ಯುವಕ ಕ್ಲಬ್ನಲ್ಲಿ ರಮ್ಮಿ ಆಡುತ್ತಿದ್ದಾಗ, ಹಳೇ ವೈಷಮ್ಯದ ಹಿನ್ನೆಲೆಯಲ್ಲಿ ಐದು ಜನರ ತಂಡ ಆತನ ಮೇಲೆ ಬಂದೂಕಿನಿಂದ ಗುಂಡು ಹಾರಿಸಿತು. ಆದರೆ, ಸುರೇಶ್ ಸಮಯಪ್ರಜ್ಞೆಯಿಂದ ಹಲ್ಲೆಕೋರನನ್ನು ಪಕ್ಕಕ್ಕೆ ತಳ್ಳಿ ಅಲ್ಲಿಂದ ಓಡಿಹೋದ ಕಾರಣ ಅದೃಷ್ಟವಶಾತ್ ಬದುಕುಳಿದಿದ್ದಾನೆ. ಇದರ ಬೆನ್ನಲ್ಲೇ ಹಲ್ಲೆಕೋರರು ಹೊರಬಂದು ಮತ್ತೆರಡು ಸುತ್ತು ಗುಂಡು ಹಾರಿಸಿ ಪರಾರಿಯಾಗಿದ್ದಾರೆ. ಘಟನೆಯ ಮಾಹಿತಿ ತಿಳಿಯುತ್ತಲೇ ಪೊಲೀಸ್ ಕಮಿಷನರ್ ಭೂಷಣ್ ಬೋರಸೆ ಅವರು ಯೂನಿಯನ್ ಜಿಮ್ಖಾನಾ ಕ್ಲಬ್ಗೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ವಿಧಿವಿಜ್ಞಾನ (ಫೊರೆನ್ಸಿಕ್) ತಂಡವೂ ಸ್ಥಳದಿಂದ ಸಾಕ್ಷ್ಯಾಧಾರಗಳನ್ನು ಸಂಗ್ರಹಿಸಿದೆ. ಪೊಲೀಸರು ಸಂತ್ರಸ್ತ ಸುರೇಶ್ನನ್ನು ವಿಚಾರಣೆಗೆ ಒಳಪಡಿಸಿ ಮುಂದಿನ ತನಿಖೆ ಕೈಗೊಂಡಿದ್ದಾರೆ.

ಈ ಆಘಾತಕಾರಿ ಗುಂಡಿನ ದಾಳಿಯ ನಂತರ ಕ್ಯಾಂಟೋನ್ಮೆಂಟ್ ಬೋರ್ಡ್ ಅಧಿಕಾರಿಗಳು ಮಿಲಿಟರಿ ಸೈನಿಕರೊಂದಿಗೆ ಕಾರ್ಯಾಚರಣೆ ನಡೆಸಿದ್ದು, ಸೇನೆಯ ಕಟ್ಟುನಿಟ್ಟಿನ ಭದ್ರತೆಯಲ್ಲಿ ಜಿಮ್ಖಾನಾಗೆ ಬೀಗ ಜಡಿದು ಸೀಲ್ ಮಾಡಿದ್ದಾರೆ. ಈ ಕಾರ್ಯಾಚರಣೆಯ ಭಾಗವಾಗಿ ಜಿಮ್ಖಾನಾದ ಮುಖ್ಯ ನಾಮಫಲಕಕ್ಕೂ ಬಣ್ಣ ಬಳಿದು ಸಂಪೂರ್ಣವಾಗಿ ಮುಚ್ಚಲಾಗಿದ್ದು, ಪರಿಸರದಲ್ಲಿ ಪೊಲೀಸ್ ಮತ್ತು ಮಿಲಿಟರಿಯ ಬಿಗಿ ಬಂದೋಬಸ್ತ್ ನಿಯೋಜಿಸಲಾಗಿದೆ.
