
ಬೆಳಗಾವಿಯ ಹೊಸ ಕೋರ್ಟ್ ಸಂಕೀರ್ಣದಲ್ಲಿ ಬೆಳಗಾವಿ ಬಾರ್ ಅಸೋಸಿಯೇಷನ್ ವತಿಯಿಂದ ನೂತನ ಬಾರ್ ಕೌನ್ಸಿಲ್ ಸದಸ್ಯರಿಗೆ ಅಭಿನಂದನಾ ಸಮಾರಂಭವನ್ನು ಆಯೋಜಿಸಲಾಗಿತ್ತು. ಈ ಕಾರ್ಯಕ್ರಮದಲ್ಲಿ ಮಾತನಾಡಿದ ಬಾರ್ ಅಸೋಸಿಯೇಷನ್ ಅಧ್ಯಕ್ಷ ಬಿ. ಜೆ. ಗಂಗಾಯಿ ಅವರು, ವಕೀಲರ ಹಿತರಕ್ಷಣೆ ಹಾಗೂ ಸೌಲಭ್ಯಗಳ ಹೆಚ್ಚಳಕ್ಕಾಗಿ ಬಾರ್ ಕೌನ್ಸಿಲ್ ತಕ್ಷಣವೇ ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಬಲವಾಗಿ ಆಗ್ರಹಿಸಿದರು.

ಕರ್ನಾಟಕ ರಾಜ್ಯ ಬಾರ್ ಕೌನ್ಸಿಲ್ಗೆ ನೂತನವಾಗಿ ಆಯ್ಕೆಯಾದ ವಕೀಲರಾದ ಐ. ಎಮ್. ಪಾಟೀಲ, ಕಲ್ಮೇಶ್ ಕಿವಡ, ಎ. ಎ. ಮಗದುಮ್, ಬಿ. ವಿ. ಕೋರಿಮಠ ಹಾಗೂ ವಿ. ಡಿ. ಕಾಮರೆಡ್ಡಿ ಅವರಿಗೆ ಬೆಳಗಾವಿಯ ಹೊಸ ಕೋರ್ಟ್ ಸಂಕೀರ್ಣದ ವಕೀಲರ ಸಮುದಾಯ ಭವನದಲ್ಲಿ ಅದ್ಧೂರಿ ಅಭಿನಂದನಾ ಸಮಾರಂಭ ಜರುಗಿತು. ಬೆಳಗಾವಿ ಬಾರ್ ಅಸೋಸಿಯೇಷನ್ ಆಯೋಜಿಸಿದ್ದ ಈ ಕಾರ್ಯಕ್ರಮವನ್ನು ಅಧ್ಯಕ್ಷರಾದ ಬಿ. ಜೆ. ಗಂಗಾಯಿ, ಪ್ರಧಾನ ಕಾರ್ಯದರ್ಶಿ ಸಚಿನ್ ಶಿವಣ್ಣವರ, ಉಪಾಧ್ಯಕ್ಷರಾದ ಪವನ್ ಪಾಟೀಲ್ ಹಾಗೂ ಜಯಶ್ರೀ ಮಂಡ್ರೊಳ್ಳಿ, ಜಂಟಿ ಕಾರ್ಯದರ್ಶಿ ಪ್ರಶಾಂತ್ ಪಾಟೀಲ್, ಖಜಾಂಚಿ ನಿರ್ಮಲಾ ಆರ್. ಪಾಟೀಲ್, ಹಾಗೂ ವ್ಯವಸ್ಥಾಪಕ ಸಮಿತಿ ಸದಸ್ಯರಾದ ಅಭಿಷೇಕ್ ಎನ್. ತಾರಿಹಾಳ್, ಎಮ್. ಎಮ್. ಹೊಳಿ, ಜಿ. ಎ. ಹಿರೇಮಠ, ವಸಂತ್ ಎಮ್. ಅಕ್ಕೇನ್ನವರ್, ದೀಪಾ ಮರಡಿ ಮತ್ತು ರಾಜೇಶ್ವರಿ ಪಾಟೀಲ್ ಸೇರಿದಂತೆ ಎಲ್ಲಾ ಗೌರವಾನ್ವಿತ ಪದಾಧಿಕಾರಿಗಳು ಭಾಗವಹಿಸಿ ಯಶಸ್ವಿಗೊಳಿಸಿದರು.

ಸಭೆಯನ್ನುದ್ದೇಶಿಸಿ ಮಾತನಾಡಿದ ಅಧ್ಯಕ್ಷ ಬಿ. ಜೆ. ಗಂಗಾಯಿ ಅವರು, ವಕೀಲರ ಕ್ಷೇಮಾಭಿವೃದ್ಧಿಗಾಗಿ ಇನ್ನೂ ಸಾಕಷ್ಟು ಕೆಲಸಗಳು ಬಾಕಿ ಇವೆ ಎಂದು ಹೇಳಿದರು. ಪ್ರಸ್ತುತ ನೀಡಲಾಗುತ್ತಿರುವ 8 ರಿಂದ 12 ಲಕ್ಷ ರೂಪಾಯಿ ಪರಿಹಾರ ಧನವನ್ನು 15 ರಿಂದ 20 ಲಕ್ಷ ರೂಪಾಯಿಗೆ ಹೆಚ್ಚಿಸಬೇಕು ಮತ್ತು ವಕೀಲರ ವೆಲ್ಫೇರ್ ಫಂಡ್ ಕೊಡುಗೆಯನ್ನು ಸರಿಯಾಗಿ ಬಳಸಿಕೊಂಡು ತುರ್ತು ವೈದ್ಯಕೀಯ ಸೇವೆ ಹಾಗೂ ಅಗತ್ಯ ನೆರವು ನೀಡಲು ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು. ಇದಲ್ಲದೆ, ಬಾರ್ ಅಸೋಸಿಯೇಷನ್ನಲ್ಲಿ ಜಾಗದ ಕೊರತೆಯಿದ್ದು, ಕೇವಲ ಬೆಂಗಳೂರಿಗೆ ಮಾತ್ರ ಸೀಮಿತವಾಗಿರುವ ಎಲ್ಲಾ ಮೂಲಭೂತ ಸೌಲಭ್ಯಗಳನ್ನು ಉತ್ತರ ಕರ್ನಾಟಕ ಭಾಗದ ವಕೀಲರಿಗೂ ವಿಸ್ತರಿಸಲು ನೂತನ ಬಾರ್ ಕೌನ್ಸಿಲ್ ಸದಸ್ಯರು ಮುಂದಾಗಬೇಕೆಂದು ಅವರು ಮನವಿ ಮಾಡಿದರು.

ಈ ವೇಳೆ ಬಾರ ಅಸೋಸಿಯೇಷನ್ ಸದಸ್ಯರು ಭಾಗಿಯಾಗಿದ್ಧರು.
