ತಾಲೂಕಿನ ಕರೋಶಿ ಗ್ರಾಮದಲ್ಲಿ ಮನೆ ಮಾಲೀಕರು ಊರಿಗೆ ಹೋಗಿದ್ದನ್ನು ಬಂಡವಾಳ ಮಾಡಿಕೊಂಡ ಕಳ್ಳರು, ಬೀಗ ಒಡೆದು ಒಳನುಗ್ಗಿ ಚಿನ್ನಾಭರಣ, ನಗದು ಹಾಗೂ ಬೆಲೆಬಾಳುವ ಸಾಮಗ್ರಿಗಳನ್ನು ದೋಚಿರುವ ಘಟನೆ ನಡೆದಿದೆ.


ಕರೋಶಿ ನಿವಾಸಿಗಳಾದ ರಾಜು ಬಡಿಗೇರ ಮತ್ತು ಮಂಗಳ ಬಡಿಗೇರ ದಂಪತಿಗಳು ಕೆಲಸದ ನಿಮಿತ್ತ ಊರಿಗೆ ಹೋಗಿದ್ದಾಗ ಈ ಕೃತ್ಯ ನಡೆದಿದೆ. ಮನೆಯ ಮುಖ್ಯ ಬಾಗಿಲು ಹಾಗೂ ಒಳಗಿದ್ದ ಕಬ್ಬಿಣದ ಪೆಟ್ಟಿಗೆಯ ಬೀಗ ಮುರಿದಿರುವ ಅಜ್ಞಾತ ಕಳ್ಳರು, ಎರಡು ಬೋರ್ಮಾಳ ಸೇರಿದಂತೆ 3 ತೊಲೆ ಚಿನ್ನದ ಆಭರಣಗಳು 2,000 ರೂಪಾಯಿ ನಗದು ಮತ್ತು ಒಂದು ದುಬಾರಿ ಡ್ರಿಲ್ ಮಷಿನ್ ಕಳವು ಮಾಡಿಕೊಂಡು ಪರಾರಿಯಾಗಿದ್ದಾರೆ. ದಂಪತಿಗಳು ಊರಿನಿಂದ ಮರಳಿ ಬಂದಾಗ ಕಳ್ಳತನವಾಗಿರುವುದು ಬೆಳಕಿಗೆ ಬಂದಿದೆ.

ಘಟನಾ ಸ್ಥಳಕ್ಕೆ ಚಿಕ್ಕೋಡಿ ಪಿಎಸ್ಐ ಬಸಗೌಡ ನೇರ್ಲಿ ಹಾಗೂ ಸಿಬ್ಬಂದಿ ಭೇಟಿ ನೀಡಿ ಪಂಚನಾಮೆ ನಡೆಸಿದ್ದು ಪ್ರಕರಣ ದಾಖಲಿಸಿಕೊಂಡಿದ್ದಾರೆ.ಕಳ್ಳರ ಸುಳಿವು ಪತ್ತೆಹಚ್ಚಲು ಸ್ಥಳಕ್ಕೆ ಶ್ವಾನ ದಳವನ್ನು ಕರೆಸಲಾಗಿತ್ತು.
ಈ ಘಟನೆಯಿಂದಾಗಿ ಸ್ಥಳೀಯ ಸಾರ್ವಜನಿಕರಲ್ಲಿ ಭೀತಿ ನಿರ್ಮಾಣವಾಗಿದ್ದು, ಕಳ್ಳರ ಪತ್ತೆಗಾಗಿ ಚಿಕ್ಕೋಡಿ ಪೊಲೀಸರು ತನಿಖೆಯನ್ನು ಚುರುಕುಗೊಳಿಸಿದ್ದಾರೆ.
