ರಾಷ್ಟ್ರೀಯ ಹೆದ್ದಾರಿ 4 ರ ಹತ್ತರಗಿ ಟೋಲ್ ನಾಕಾ ಸಮೀಪ ತಡರಾತ್ರಿ ಭೀಕರ ರಸ್ತೆ ಅಪಘಾತ ಸಂಭವಿಸಿದೆ. ಕಂಟೇನರ್ ಚಾಲಕ ತನ್ನ ಮುಂಭಾಗದಲ್ಲಿ ಚಲಿಸುತ್ತಿದ್ದ ಟ್ರಕ್ಗೆ ಹಿಂಬದಿಯಿಂದ ಜೋರಾಗಿ ಡಿಕ್ಕಿ ಹೊಡೆದ ಪರಿಣಾಮ ತೀವ್ರವಾಗಿ ಗಾಯಗೊಂಡು ಸ್ಥಳದಲ್ಲೇ ಮೃತಪಟ್ಟಿದ್ದಾನೆ. ಯಮಕನಮರಡಿ ಪೊಲೀಸ್ ಠಾಣೆಯಲ್ಲಿ ಈ ಕುರಿತು ಪ್ರಕರಣ ದಾಖಲಾಗಿದೆ.

ಯಮಕನಮರಡಿ ಪೊಲೀಸ್ ಠಾಣಾ ವ್ಯಾಪ್ತಿಯ ಹತ್ತರಗಿ ಟೋಲ್ ನಾಕಾ ಸಮೀಪದ ಹಂಚನಾಳ ಗ್ರಾಮದ ಹದ್ದಿಯಲ್ಲಿರುವ ಶಿವಪ್ರಸಾದ್ ಹೋಟೆಲ್ ಹತ್ತಿರ ಈ ಘಟನೆ ನಡೆದಿದೆ. ತಮಿಳುನಾಡಿನ ದಿಂಡಿಗಲ್ಲು ಜಿಲ್ಲೆಯ ಕುಪೈಪಟ್ಟಿ ನಿವಾಸಿ ಜಯಕುಮಾರ್ ಎಸ್ ಸೆಲ್ಲದುರೈ (34) ಮೃತಪಟ್ಟ ದುರ್ದೈವಿ ಕಂಟೇನರ್ ಚಾಲಕನಾಗಿದ್ದಾನೆ. ಈತ ತನ್ನ ಐಚರ್ ಕಂಟೇನರ್ ವಾಹನವನ್ನು (TN 42 AS 1566) ಸಂಕೇಶ್ವರ ಕಡೆಯಿಂದ ಬೆಳಗಾವಿ ಕಡೆಗೆ ಅತಿ ವೇಗ ಮತ್ತು ನಿರ್ಲಕ್ಷ್ಯದಿಂದ ಚಲಾಯಿಸಿಕೊಂಡು ಬಂದು, ಮುಂಭಾಗದಲ್ಲಿದ್ದ ಮಹಾರಾಷ್ಟ್ರ ಮೂಲದ ಟ್ರಕ್ಗೆ (MH 12 TV 6767) ಹಿಂಬದಿಯಿಂದ ಭೀಕರವಾಗಿ ಡಿಕ್ಕಿ ಹೊಡೆಸಿದ್ದಾನೆ. ಅಪಘಾತದ ತೀವ್ರತೆಗೆ ಕಂಟೇನರ್ ಚಾಲಕ ಜಯಕುಮಾರ್ ಸ್ಥಳದಲ್ಲೇ ಸಾವನ್ನಪ್ಪಿದ್ದು, ಟ್ರಕ್ ಕ್ಲೀನರ್ ಪ್ರತಾಪ್ ಬಾಬೂರಾವ್ ತಿಡಕೆ ನೀಡಿದ ದೂರಿನ ಮೇರೆಗೆ ಯಮಕನಮರಡಿ ಸಿಪಿಐ ಜಾವೀದ್ ಮುಶಾಪುರೆ ಅವರ ನೇತೃತ್ವದಲ್ಲಿ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.

