ಕರ್ನಾಟಕ ಸಿಇಟಿ ಫಲಿತಾಂಶ ಪ್ರಕಟವಾಗಿದ್ದು, ಸಾಂಸ್ಕೃತಿಕ ನಗರಿ ಧಾರವಾಡದ ವಿದ್ಯಾರ್ಥಿಯೊಬ್ಬರು ಸಾಲುಸಾಲು ರ್ಯಾಂಕ್ ಪಡೆಯುವ ಮೂಲಕ ಜಿಲ್ಲೆಗೆ ಕೀರ್ತಿ ತಂದಿದ್ದಾರೆ. ಧಾರವಾಡದ ಅರ್ಜುನ್ ಪಿಯು ಕಾಲೇಜಿನ ವಿದ್ಯಾರ್ಥಿ ಅನ್ಮೋಲ್ ಪ್ರಭು ಅವರ ಈ ಅದ್ಭುತ ಸಾಧನೆಯಿಂದಾಗಿ ಕಾಲೇಜು ಮಂಡಳಿ, ಶಿಕ್ಷಕರು ಹಾಗೂ ಕುಟುಂಬಸ್ಥರಲ್ಲಿ ಸಂತಸ ಮನೆಮಾಡಿದ್ದು, ಕಾಲೇಜಿನಲ್ಲಿ ವಿಜಯೋತ್ಸವ ಆಚರಿಸಲಾಗಿದೆ.

ಧಾರವಾಡದ ಸತ್ತೂರು ನಗರದ ನಿವಾಸಿಯಾದ ಅನ್ಮೋಲ್ ಪ್ರಭು ಸಿಇಟಿ ಪರೀಕ್ಷೆಯಲ್ಲಿ ಅತ್ಯದ್ಭುತ ಸಾಧನೆ ಮಾಡಿದ್ದು, ಕೃಷಿ (ಅಗ್ರಿ) ಮತ್ತು ವೆಟರನರಿ (ಪಶುವೈದ್ಯಕೀಯ) ವಿಭಾಗದಲ್ಲಿ ರಾಜ್ಯಕ್ಕೆ ಎರಡನೇ ರ್ಯಾಂಕ್ ಮುಡಿಗೇರಿಸಿಕೊಂಡಿದ್ದಾರೆ. ಇದರೊಂದಿಗೆ ನರ್ಸಿಂಗ್ ವಿಭಾಗದಲ್ಲಿ 8ನೇ ರ್ಯಾಂಕ್, ಯೋಗ ಮತ್ತು ನ್ಯಾಚುರೋಪತಿಯಲ್ಲಿ 9ನೇ ರ್ಯಾಂಕ್ ಹಾಗೂ ವೆಟರನರಿ ಪ್ರತ್ಯೇಕ ವಿಭಾಗದಲ್ಲಿ 10ನೇ ರ್ಯಾಂಕ್ ಪಡೆಯುವ ಮೂಲಕ ವಿವಿಧ ವಿಭಾಗಗಳ ಟಾಪ್ 10 ಪಟ್ಟಿಯಲ್ಲಿ ಸ್ಥಾನ ಪಡೆದು ಅಸಾಧಾರಣ ಸಾಧನೆ ಮಾಡಿದ್ದಾರೆ. ಧಾರವಾಡದ ಪ್ರಸಿದ್ಧ ವೈದ್ಯ ದಂಪತಿಗಳಾದ ಡಾ. ಅವಿನಾಶ್ ಪ್ರಭು ಹಾಗೂ ಡಾ. ಮೃದುಲಾ ಪ್ರಭು ಅವರ ಪುತ್ರನಾಗಿರುವ ಅನ್ಮೋಲ್ ಅವರ ಈ ಯಶಸ್ಸಿನ ಹಿನ್ನೆಲೆಯಲ್ಲಿ, ತಾವು ಓದಿದ ಧಾರವಾಡದ ಅರ್ಜುನ್ ಪಿಯು ಕಾಲೇಜಿನಲ್ಲಿ ಹಬ್ಬದ ವಾತಾವರಣ ನಿರ್ಮಾಣವಾಗಿತ್ತು. ಕಾಲೇಜು ಆಡಳಿತ ಮಂಡಳಿ, ಸಹಪಾಠಿಗಳು ಮತ್ತು ಶಿಕ್ಷಕರು ವಿಜೇತ ವಿದ್ಯಾರ್ಥಿ ಅನ್ಮೋಲ್ ಪ್ರಭು ಹಾಗೂ ಅವರ ತಾಯಿಗೆ ಸಿಹಿ ತಿನ್ನಿಸಿ, ಹೂಗುಚ್ಛ ನೀಡಿ ಅತ್ಯಂತ ಸಡಗರದಿಂದ ಸಂಭ್ರಮಾಚರಣೆ ನಡೆಸಿದರು.

