• ಸಿಂದಗಿ ಠಾಣೆಗೆ ಮುತ್ತಿಗೆ ಹಾಕಿದ ಬಂದಾಳ ಗ್ರಾಮಸ್ಥರು
• ಯುವತಿ ಜಯಶ್ರೀ ಆತ್ಮಹತ್ಯೆಗೆ ನ್ಯಾಯ ಸಿಗಲು ಆಗ್ರಹ
• ಆರೋಪಿ ಶ್ರೀಶೈಲ ಬಂಧನಕ್ಕೆ ವಿಳಂಬ; ಜನರ ಆಕ್ರೋಶ
• ಪೊಲೀಸ್ ಇನ್ಸ್’ಪೆಕ್ಟರ್ ಭರವಸೆ ಬಳಿಕ ಪ್ರತಿಭಟನೆ ಅಂತ್ಯ

ವಿಜಯಪುರ ಜಿಲ್ಲೆಯ ಸಿಂದಗಿ ತಾಲ್ಲೂಕಿನ ಬಂದಾಳ ಗ್ರಾಮದ ಯುವತಿ ಜಯಶ್ರೀ ಭಗವಂತ್ರಾಯ ಬಿರಾದಾರ ಮಾಗಣಗೇರಿ ಬಾವಿಗೆ ಜಿಗಿದು ಆತ್ಮಹತ್ಯೆ ಮಾಡಿಕೊಳ್ಳಲು ಕಾರಣ ಎಂದು ಹೇಳಲಾದ ಆರೋಪಿ ಶ್ರೀಶೈಲ ಚಂದ್ರಕಾಂತ ಬಡಾನೂರ ಎಂಬಾತನನ್ನು ಬಂಧಿಸುವಂತೆ ಆಗ್ರಹಿಸಿ ಗ್ರಾಮಸ್ಥರು ಪೊಲೀಸ್ ಠಾಣೆಗೆ ಮಂಗಳವಾರ ಸಾಯಂಕಾಲ ಮುತ್ತಿಗೆ ಹಾಕಿದರು.
ಕಾಂಗ್ರೆಸ್ ಧುರೀಣ ರಾಕೇಶ ಕಲ್ಲೂರ, ಗಾಣಿಗ ಸಮಾಜ ಯುವ ಸಮಿತಿ ರಾಜ್ಯ ಘಟಕದ ಅಧ್ಯಕ್ಷ ನಂದು ಗಡಗಿ, ಬಂದಾಳ ಶಾಲಾ ಎಸ್ಡಿಎಂಸಿ ಅಧ್ಯಕ್ಷ ನಿಂಗನಗೌಡ ಬಿರಾದಾರ, ಪ್ರಶಾಂತ ಬಿರಾದಾರ, ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷ ಶ್ರೀಶೈಲ ಬಿರಾದಾರ, ಜಗನ್ನಾಥ ದೇವರಮನಿ, ಗೊಲ್ಲಾಳಪ್ಪ ದೇವರಮನಿ, ಲಕ್ಷ್ಮೀಂಬಾಯಿ ಬಿರಾದಾರ, ಭಾಗಮ್ಮ ಬಿರಾದಾರ, ನಾಗಪ್ಪ ನಿಂಗಪ್ಪ ಬಿರಾದಾರ ಹಾಗೂ ಹೋರಾಟಕ್ಕೆ ಬೆಂಬಲಿಸಿ ದಲಿತ ಸಂಘಟನೆಗಳ ಪ್ರಮುಖರಾದ ಶ್ರೀನಿವಾಸ ಓಲೇಕಾರ, ಶಿವೂ ನಾಟೀಕಾರ, ರಾಕೇಶ ಕಾಂಬಳೆ ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು. ಮೃತ ಕುಟುಂಬಕ್ಕೆ ನ್ಯಾಯ ಸಿಗಬೇಕು, ಘಟನೆ ನಡೆದು ಮೂರು ದಿನಗಳಾದರೂ ಆರೋಪಿಯನ್ನು ಬಂಧಿಸಿಲ್ಲ. ಕೂಡಲೇ ಆರೋಪಿಯನ್ನು ಬಂಧಿಸಬೇಕು. ಆರೋಪಿಯನ್ನು ಪೊಲೀಸರು ಬಂಧಿಸದೇ ಇರಲು ರಾಜಕೀಯ ಕುಮ್ಮಕ್ಕು ಇದೆ ಎಂದು ಆರೋಪಿಸಿದರು.ಸರ್ಕಲ್ ಇನ್ಸಪೆಕ್ಟರ್ ನಾನಾಗೌಡ ಪೊಲೀಸ ಪಾಟೀಲ ಆರೋಪಿಯನ್ನು ಆದಷ್ಟು ಬೇಗನೇ ಬಂಧಿಸುವುದಾಗಿ ಭರವಸೆ ನೀಡಿದ ಹಿನ್ನೆಲೆಯಲ್ಲಿ ಪ್ರತಿಭಟನಕಾರರು ಪ್ರತಿಭಟನೆ ಕೈಬಿಟ್ಟು ತೆರಳಿದರು.
