ಉತ್ತರ ಪ್ರದೇಶ ಹಾಗೂ ಬಿಹಾರ ರಾಜ್ಯಗಳ ಮಾದರಿಯಲ್ಲೇ ರಿಯಲ್ ರಿಯಲ್ ಎಸ್ಟೇಟ್ ಉದ್ಯಮಿ, ಗ್ರಾಮ ಪಂಚಾಯಿತಿ ಸದಸ್ಯನನ್ನು ಹತ್ಯೆ ಮಾಡಲಾಗಿತ್ತು. ಮೊದಲಿಗೆ ಟಿಪ್ಪರ್ ಮೂಲಕ ಡಿಕ್ಕಿ ಹೊಡೆಸಿ ಬಳಿಕ ಫೈರಿಂಗ್ ಮಾಡಿ ಕೊಲ್ಲಲಾಗಿತ್ತು. ಈ ಪ್ರಕರಣ ಇಡೀ ವಿಜಯಪುರ ಜಿಲ್ಲೆಯನ್ನು ಬೆಚ್ಚಿ ಬಿಳಿಸಿತ್ತು.ಇದೀಗ ಪೊಲೀಸರು ಪ್ರಕರಣಕ್ಕೆ ಸಂಬಂಧಿಸಿದಂತೆ ಆರು ಜನ ಆರೋಪಿಗಳನ್ನು ಬಂಧಿಸಿದ್ದಾರೆ. ಈ ಕುರಿತು ಇಲ್ಲಿದೆ ಒಂದು ವರದಿ…

ರಿಯಲ್ ಎಸ್ಟೇಟ್ ಉದ್ಯಮಿ, ಗ್ರಾಮ ಪಂಚಾಯಿತಿ ಮಾಜಿ ಸದಸ್ಯ ಚಲಿಸುತ್ತಿದ್ದ ಜೀಪಿಗೆ ಟಿಪ್ಪರ್ ಡಿಕ್ಕಿ ಹೊಡೆಸಿ, ಬಳಿಕ ಗುಂಡು ಹೊಡೆದು ದುಷ್ಕರ್ಮಿಗಳು ಭೀಕರವಾಗಿ ಹತ್ಯೆಗೈದಿರುವ ಘಟನೆ ವಿಜಯಪುರ ನಗರದ ಹೊರ ವಲಯದ ಅಲಿಯಾಬಾದ್ನಲ್ಲಿ ಮಂಗಳವಾರ ನಡೆದಿತ್ತು. ಅಲಿಯಬಾದ್ ಗ್ರಾಮ ಪಂಚಾಯಿತಿ ಮಾಜಿ ಸದಸ್ಯ, ಗೊಡಂದಡ್ಡಿ ಗ್ರಾಮದ ನಿವಾಸಿ ರಾಜು ಬಾಪು ಖರೆ (48) ದುಷ್ಕರ್ಮಿಗಳಿಂದ ಹತ್ಯೆಯಾಗಿದ್ದರು. ಅಂದು ಮದ್ಯಾಹ್ನ ಟಿಪ್ಪರ್ನಲ್ಲಿ ಬಂದಿದ್ದ ದುಷ್ಕರ್ಮಿಗಳು ಮೊದಲು ಥಾರ್ ವಾಹನಕ್ಕೆ ಡಿಕ್ಕಿ ಹೊಡೆದಿದ್ದಾರೆ. ಬಳಿಕ ಟಿಪ್ಪರ್ನಿಂದ ಇಳಿದ ಆರೋಪಿಗಳು ಕಾರಿನ ಮೇಲೆ ಮನಬಂದಂತೆ ಗುಂಡಿನ ದಾಳಿ ನಡೆಸಿದ್ದರು. ಕಾರ್ ಡೋರ್ ಓಪನ್ ಆಗದಿದ್ದಕ್ಕೆ ಕಲ್ಲು ಎತ್ತಿ ಹಾಕಿ ರಾಜು ಖರೆಯನ್ನು ಬರ್ಬರವಾಗಿ ಹತ್ಯೆ ಮಾಡಲಾಗಿತ್ತು.
ಅಂದು ನಡೆದ ಕೊಲೆ ಪ್ರಕರಣ ಇಡೀ ವಿಜಯಪುರ ಜಿಲ್ಲೆಯನ್ನೆ ಬೆಚ್ಚಿ ಬಿಳಿಸಿತ್ತು. ಪೊಲೀಸರು ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿ ತನಿಖೆ ಕೈಗೊಂಡಿದ್ದರು. ಇದೀಗ ಆರು ಜನ ಆರೋಪಿಗಳನ್ನು ಬಂಧಿಸಿ ಜೈಲಿಗೆ ಅಟ್ಟಿದ್ದಾರೆ. ಪ್ರೊಬೆಷನರಿ ಐಪಿಎಸ್ ಇಶಿತಾ ಗುಪ್ತಾ, ವಿಜಯಪುರ ಗ್ರಾಮೀಣ ಡಿವೈಎಸ್ಪಿ ಟಿ. ಎಸ್. ಸುಲ್ಪಿ, ಸೇರಿದಂತೆ ಅಧಿಕಾರಿಗಳು ಹಾಗೂ ಸಿಬ್ಬಂದಿ ಜನರನ್ನೊಳಗೊಂಡ 2 ಪ್ರತ್ಯೇಕ ತಂಡಗಳನ್ನು ರಚಿಸಲಾಗಿತ್ತು. ಕೊಲೆಯ ಪ್ರಮುಖ ಆರೋಪಿ ಅಬುಶ್ಯಾ ತಂ. ಸೋಪಾನ್ ಕೊಡ್ಲೇಕರ, ಅಬಾಶ್ಯಾ ತಂ. ಬಾಳು ಮಾನೆ, ವಾಗೀಶ ತಂ. ಶಂಕರ ಪೋಳ, ಜಾಲಿಂದರ್ @ ಪೋಪಟ್ ತಂ. ಮಲ್ಲಾರಿ ಹಕ್ಕೆ, ಖಂಡೂಬಾ @ ಅಜೀತ್ ತಂ. ಗುಂಡಿಬಾ ತಾಂಬೆ @ ಹಕ್ಕೆ, ಹಾಗೂ
ಮುರಗು @ ಮರಗು ತಂ. ಉತ್ತಮ ಹಕ್ಕೆ, ಎಂಬುವವರನ್ನು ಬಂಧಿಸಲಾಗಿದೆ. ಆರೋಪಿತರು ಬಬಲೇಶ್ವರ ತಾಲ್ಲೂಕಿನ ಖಿಲಾರಹಟ್ಟಿ ಗ್ರಾಮದಲ್ಲಿ ಮತ್ತು ಇಂಡಿ ತಾಲ್ಲೂಕಿನ ಕ್ಯಾತನಕೇರಿ ಗ್ರಾಮಗಳಲ್ಲಿ ಇರುವ ಬಗ್ಗೆ ದೊರೆತ ಖಚಿತ ಮಾಹಿತಿ ಮೇರೆಗೆ ವಶಕ್ಕೆ ಪಡೆದು ಆರೋಪಿಗಳಿಂದ 2 ಲೈಸನ್ಸ ಇಲ್ಲದ ಕಂಟ್ರಿ ಪಿಸ್ತೂಲ್ ಗಳು, 7 ಮೋಬೈಲ್ ಗಳು , ಕೃತ್ಯಕ್ಕೆ ಬಳಸಿದ 2 ಮೋಟಾರ್ ಸೈಕಲ್ ಗಳು ಕೃತ್ಯಕ್ಕೆ ಬಳಸಿದ 1 ಟಿಪ್ಪರ್ ವಾಹನ ಹಾಗೂ 1 ಕಾರ್ ಆರೋಪಿತರಿಂದ ವಸ್ತುಗಳನ್ನು ವಶಪಡಿಸಿಕೊಂಡಿದ್ದಾರೆ. ಕೊಲೆಯಾದ ರಾಜು ರಾಜು ಖರೆ ರಿಯಲ್ ಎಸ್ಟೇಟ್ ಉದ್ಯಮಿಯಾಗಿದ್ದರು. ಜೊತೆಗೆ ದ್ರಾಕ್ಷಿ ಕೃಷಿಕರಾಗಿದ್ದರು. ಕೌಟುಂಬಿಕ ಆಸ್ತಿ ವಿವಾದ ಇತ್ತು ಈ ಹಿನ್ನೆಲೆಯಲ್ಲಿ ಕೊಲೆ ಮಾಡಲಾಗಿದೆ ಎಂದು ಎಸ್ಪಿ ಲಕ್ಷ್ಮಣ ನಿಂಬರಗಿ ತಿಳಿಸಿದ್ದಾರೆ.
ಒಟ್ಟಾರೆ ಪೊಲೀಸರು ಅತಿ ಕಡಿಮೆ ಅವಧಿಯಲ್ಲಿ ಆರೋಪಿಗಳನ್ನು ಬಂಧಿಸಿದ್ದಾರೆ. ಕೊಲೆಯಲ್ಲಿ ಕಂಟ್ರಿ ಪಿಸ್ತೂಲ್ ಬಳಕೆಯಾಗಿದ್ದು ಜಿಲ್ಲೆಯಲ್ಲಿ ಅಕ್ರಮ ಕಂಟ್ರಿ ಪಿಸ್ತೂಲ್ ದಂಧೆ ಜೋರಾಗಿದೆ ಎಂಬುದು ಕಂಡು ಬರುತ್ತಿದ್ದು ಪೊಲೀಸರು ತಕ್ಷಣವೇ ಕಡಿವಾಣ ಹಾಕಬೇಕಿದೆ.
