ಬಾಗಲಕೋಟೆ ಜಿಲ್ಲೆಯಲ್ಲಿ ಸೂರ್ಯನ ಪ್ರತಾಪ ದಿನದಿಂದ ದಿನಕ್ಕೆ ಏರುತ್ತಲೇ ಇದೆ. ಈ ಸುಡುಬಿಸಿಲಿನ ನಡುವೆ ವಿಶ್ವಪ್ರಸಿದ್ಧ ಪುಣ್ಯಕ್ಷೇತ್ರ ಕೂಡಲಸಂಗಮಕ್ಕೆ ಬರುವ ಭಕ್ತರ ಹಿತರಕ್ಷಣೆಗಾಗಿ ದೇವಸ್ಥಾನದ ಆಡಳಿತ ಮಂಡಳಿ ಈಗ ವಿಶೇಷ ಮುನ್ನೆಚ್ಚರಿಕಾ ಕ್ರಮ ಕೈಗೊಂಡಿದೆ.
ಬಾಗಲಕೋಟೆ ಜಿಲ್ಲೆಯಾದ್ಯಂತ ಬಿಸಿಲಿನ ತಾಪಮಾನ ಭೀಕರವಾಗಿದ್ದು, ಇಂದು ಬರೋಬ್ಬರಿ 39 ಡಿಗ್ರಿ ಸೆಲ್ಸಿಯಸ್ ತಾಪಮಾನ ದಾಖಲಾಗಿದೆ. ಈ ಉರಿಬಿಸಿಲಿನಿಂದಾಗಿ ಹುನಗುಂದ ತಾಲ್ಲೂಕಿನ ಕೂಡಲಸಂಗಮದ ಸಂಗಮೇಶ್ವರ ದೇಗುಲಕ್ಕೆ ಬರುವ ಭಕ್ತರ ಕಾಲುಗಳು ಸುಡಬಾರದೆಂಬ ಉದ್ದೇಶದಿಂದ ದೇವಸ್ಥಾನದ ಸುತ್ತಮುತ್ತಲಿನ ನೆಲಕ್ಕೆ ‘ವೈಟ್ ಪೇಂಟ್’ ಲೇಪನ ಮಾಡಲಾಗಿದೆ. ದರ್ಶನಕ್ಕಾಗಿ ಸಾಲಿನಲ್ಲಿ ನಿಲ್ಲುವ ಭಕ್ತಾದಿಗಳಿಗೆ ನೆಲದ ಶಾಖ ತಟ್ಟದಿರಲಿ ಎಂದು ಆಡಳಿತ ಮಂಡಳಿಯು ದೇಗುಲದ ಆವರಣದಾದ್ಯಂತ ಬಿಳಿ ಬಣ್ಣದ ಲೇಪನ ಮಾಡಿಸುವ ಮೂಲಕ ಭಕ್ತರ ಪಾದಗಳಿಗೆ ತಂಪು ನೀಡುವ ವ್ಯವಸ್ಥೆ ಮಾಡಿದೆ. ಜಿಲ್ಲೆಯ ಸುಡುಬಿಸಿಲಿಗೆ ಕಂಗೆಟ್ಟಿದ್ದ ಪ್ರವಾಸಿಗರು ಮಂಡಳಿಯ ಈ ಜನಪರ ಕಾರ್ಯಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

