ಕನ್ಹೇರಿ ಮಠದ ಶ್ರೀ ಅದೃಶ್ಯ ಕಾಡಸಿದ್ದೇಶ್ವರ ಸ್ವಾಮೀಜಿ ಅವರ ಮೇಲೆ ಹೇರಲಾಗಿರುವ ಜಿಲ್ಲಾ ಪ್ರವೇಶ ನಿರ್ಬಂಧವನ್ನು ಕೂಡಲೇ ಹಿಂತೆಗೆದುಕೊಳ್ಳಬೇಕು ಎಂದು ಆಗ್ರಹಿಸಿ, ಸ್ಥಳೀಯ ನಿವಾಸಿಗಳು ಜಿಲ್ಲಾಧಿಕಾರಿಗಳ ಮೂಲಕ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಿದ್ದಾರೆ.
ರಾಜಕೀಯ ಹಿತಾಸಕ್ತಿ ಹಾಗೂ ಎಡಪಂಥೀಯ ವಿಚಾರಧಾರೆಯ ಕೆಲವರು ಹಿಂದೂ ಧರ್ಮ ಮತ್ತು ದೇವರ ಕುರಿತು ಅವಹೇಳನ ಮಾಡುತ್ತಿರುವಾಗ, ಬಸವಣ್ಣನವರ ಹೆಸರಿನಲ್ಲಿ ಮಾಂಸ, ಮದ್ಯ ಸೇವನೆಗೆ ಪ್ರಚೋದನೆ ನೀಡುತ್ತಿರುವವರ ಕುರಿತು ಸ್ವಾಮೀಜಿಯವರು ಆಡಿದ ಮಾತುಗಳನ್ನು ಮುಂದಿಟ್ಟುಕೊಂಡು ಸರ್ಕಾರವು ಅವರಿಗೆ ಬಿಜಾಪುರ (ವಿಜಯಪುರ) ಜಿಲ್ಲೆಗೆ ಪ್ರವೇಶ ನಿಷೇಧಿಸಿರುವುದನ್ನು ಮನವಿಯಲ್ಲಿ ಖಂಡಿಸಲಾಗಿದೆ. ಕಾಡಸಿದ್ದೇಶ್ವರ ಸ್ವಾಮೀಜಿ ಅವರು ತಮ್ಮ ನೈಸರ್ಗಿಕ ಕೃಷಿ ಚಟುವಟಿಕೆಗಳು, ಜನೋಪಯೋಗಿ

ಸೇವಾ ಕಾರ್ಯಗಳು ಮತ್ತು ಗುರುಕುಲ ಪದ್ಧತಿಯ ಶಿಕ್ಷಣದ ಮೂಲಕ ರಾಜ್ಯದಾದ್ಯಂತ ಹೆಸರುವಾಸಿಯಾಗಿದ್ದಾರೆ. ಅವರು ಸಮಾಜ ನಿರ್ಮಾಣಕ್ಕೆ ನಿಸ್ವಾರ್ಥವಾಗಿ ಹಾಗೂ ಬಸವತತ್ತ್ವಕ್ಕೆ ಪೂರಕವಾಗಿ ದುಡಿಯುತ್ತಿದ್ದಾರೆ ಎಂದು ತಿಳಿಸಲಾಗಿದೆ. ಸಮಾಜಕ್ಕೆ ದುಡಿಯುತ್ತಿರುವ ಇಂತಹ ಸಂತರು ‘ದಂಗೆಗೆ ಕಾರಣವಾಗಲಿದ್ದಾರೆ’ ಎಂದು ಸರ್ಕಾರ ಆರೋಪಿಸಿರುವುದು ಗಾಬರಿ ಉಂಟುಮಾಡಿದೆ. ಸುಳ್ಳು ಆರೋಪದ ಆಧಾರದ ಮೇಲೆ ಜಿಲ್ಲಾ ಪ್ರವೇಶಕ್ಕೆ ನಿರ್ಬಂಧ ಹೇರಿರುವುದು ಅಸಹನೆ ಮೂಡಿಸಿದೆ ಮತ್ತು ಇದು ಸಮಾಜದ ಸ್ವಾಸ್ಥ್ಯವನ್ನು ಹದಗೆಡಿಸುವ ಪ್ರಯತ್ನ ಎಂದು ಡಾ. ರವಿ ಪಾಟೀಲ್ ಹೇಳಿದರು.

ಈ ಸಂದರ್ಭದಲ್ಲಿ ಧನ್ಯಕುಮಾರ್ ಪಾಟೀಲ್, ಬಸವರಾಜ್ ಕೋಲಿನ, ಸಂಜಯ್ ಪಾಟೀಲ್, ಶಿವಾನಂದ ಈರಣಗೌಡ್ರ ಸೇರಿದಂತೆ ಇನ್ನುಳಿದವರು ಭಾಗಿಯಾಗಿದ್ಧರು.

