ಪದ್ಮಶ್ರೀ ಪುರಸ್ಕøತ ಇಬ್ರಾಹಿಂ ಸುತಾರ್ ಅವರ ನಿಧನದಿಂದ ಇಡೀ ರಾಜ್ಯದಲ್ಲಿಯೇ ಶೋಕದ ವಾತಾವರಣ ನಿರ್ಮಾಣವಾಗಿದೆ. ಅದರಲ್ಲಿಯೂ ಅವರ ಹುಟ್ಟೂರು ಮಹಾಲಿಂಗಪುರ ಪಟ್ಟಣದಲ್ಲಿ ನೀರವ ಮೌನ ಆವರಿಸಿದೆ.ಕನ್ನಡದ ಕಬೀರ, ಸರ್ವ ಧರ್ಮಗಳ ಹರಿಕಾರ, ಇಡೀ ನಾಡಿಗೆ ಭಾವೈಕ್ಯತೆಯ ಸಂದೇಶ ಸಾರಿದ ಖ್ಯಾತ ಪ್ರವಚನಕಾರ ಇಬ್ರಾಹಿಂ ಸುತಾರ್ ಅವರ ಅಗಲಿಕೆಯಿಂದ ಬಾಗಲಕೋಟೆ ಜಿಲ್ಲೆಯ ರಬಕವಿ ಬನಹಟ್ಟಿ ತಾಲೂಕಿನ ಮಹಾಲಿಂಗಪುರ ಪಟ್ಟಣದಲ್ಲಿ ಅಕ್ಷರಶಃ ದುಃಖ ಮಡುಗಟ್ಟಿದೆ. ಅದರಲ್ಲಿಯೂ ಅವರ ಮನೆಯಲ್ಲಿಯಂತೂ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ.

ಮಹಾಲಿಂಗಪುರದ ಭಾವೈಕ್ಯತೆ ಹೆಸರಿನ ಅವರ ಮನೆಯಲ್ಲಿ ಕುಟುಂಬಸ್ಥರು ಇಬ್ರಾಹಿಂ ಸುತಾರ್ ಅವರ ಪಾರ್ಥಿವ ಶರೀರದ ಮುಂದೆ ಅವರನ್ನು ನೆನೆದು ಬಿಕ್ಕಿ ಬಿಕ್ಕಿ ಅಳುತ್ತಿದ್ದರು.

ಇನ್ನು ಇಡೀ ಮಹಾಲಿಂಗಪುರ ಪಟ್ಟಣದಲ್ಲಿ ಶೋಕದ ವಾತಾವರಣ ನಿರ್ಮಾಣವಾಗಿದ್ದು. ಅಘೋಷಿತ ಬಂದ್ ಕಂಡು ಬಂದಿದೆ. ಹುಟ್ಟಿದ್ದು ಮುಸ್ಲಿಂ ಸಮಾಜದಲ್ಲಿಯಾದ್ರೂ ಎಲ್ಲಾ ಜಾತಿ, ಧರ್ಮಗಳ ಜನರ ನಡುವಿನ ಕೊಂಡಿಯಾಗಿ ಭಾವೈಕ್ಯತೆಯ ಹರಿಕಾರನಾಗಿ ಗುರುತಿಸಿಕೊಂಡಿದ್ದ ಇಬ್ರಾಹಿಂ ಸುತಾರ್ ವ್ಯಕ್ತಿತ್ವ ನಿಜಕ್ಕೂ ಅದ್ಭುತ.