ಶ್ರೀಕ್ಷೇತ್ರ ಸವದತ್ತಿಯ ಯಲ್ಲಮ್ಮನಗುಡ್ಡದಲ್ಲಿ ಬುಧವಾರ ಭಾರತ ಹುಣ್ಣಿಮೆ ಅಂಗವಾಗಿ ಬೃಹತ್ ಜಾತ್ರೆ ಜರುಗಲಿದ್ದು, ದೇಶದ ನಾನಾ ಭಾಗಗಳಿಂದ ಲಕ್ಷಾಂತರ ಭಕ್ತರ ದಂಡೇ ಹರಿದಿಬಂದಿದೆ. ಮಂಗಳವಾರದಿಂದಲೇ ಯಲ್ಲಮ್ಮನ ದರ್ಶನಕ್ಕೆ ಭಕ್ತರು ಬರತೊಡಗಿದ್ದಾರೆ.

ಕೋವಿಡ್–19 ಹಿನ್ನೆಲೆಯಲ್ಲಿ ಕಳೆದ ವರ್ಷ ಭಾರತ ಹುಣ್ಣಿಮೆ ವೇಳೆ, ಯಲ್ಲಮ್ಮ ದೇವಿ ದರ್ಶನಕ್ಕೆ ಭಕ್ತರಿಗೆ ನಿರ್ಭಂಧ ವಿಧಿಸಲಾಗಿತ್ತು. ಈ ಬಾರಿ ದೇವಿ ದರ್ಶನಕ್ಕೆ ಅವಕಾಶ ಸಿಕ್ಕಿದ್ದರಿಂದ ಭಕ್ತ ವಲಯದಲ್ಲಿ ಸಂಭ್ರಮ ಇಮ್ಮಡಿಗೊಂಡಿದೆ. ಈ ಜಾತ್ರೆಗೆ ಲಕ್ಷಾಂತರ ಭಕ್ತರು ವಾಹನಗಳ ಜೊತೆಗೆ ಚಕ್ಜಡಿಗಳಲ್ಲೂ ಬಂದಿದ್ದಾರೆ. ಜೋಗುಳಬಾವಿ ಬಳಿ ಮಲಪ್ರಭಾ ನದಿ ದಂಡೆ ಹಾಗೂ ಯಲ್ಲಮ್ಮನಗುಡ್ಡದಲ್ಲಿರುವ ವಿಶಾಲವಾದ ಜಾಗದಲ್ಲಿ ಬಿಡಾರ ಹೂಡಿದ್ದಾರೆ. ಉಧೋ ಉಧೋ ಯಲ್ಲಮ್ಮ ನಿನ್ಹಾಲ್ಕ ಉಧೋ ಎಂಬ ಜೈಕಾರ ಮುಗಿಲು ಮುಟ್ಟಿವೆ.

ಭಾರತ ಹುಣ್ಣಿಮೆ ಅಂಗವಾಗಿ ಅಂಗಡಿ–ಮುಂಗಟ್ಟುಗಳು ಸಿಂಗಾರಗೊಂಡಿವೆ. ಕುಂಕುಮ–ಭಂಡಾರ, ಕಾಯಿ, ಕರ್ಪೂರ, ಬಾಳೆಹಣ್ಣು, ಸೀರೆ–ಕುಪ್ಪಸ, ಮಿಠಾಯಿ ಅಂಗಡಿಗಳಲ್ಲಿ ಕೋಟ್ಯಂತರ ರೂ. ವಹಿವಾಟು ನಡೆಯುವ ನಿರೀಕ್ಷೆ ಇದೆ. ಭಾರತ ಹುಣ್ಣಿಮೆಗೆ ಬರುವ ಪ್ರತಿಯೊಬ್ಬ ಮಹಿಳೆ ಹಸಿರು ಬಳೆ ಧರಿಸುವುದು ಹಿಂದಿನಿಂದಲೂ ಬಂದ ಸಂಪ್ರದಾಯ. ಹಾಗಾಗಿ ನಾನಾ ವಿನ್ಯಾಸಗಳ ಬಳೆಗಳ ಅಂಗಡಿಗಳು ತಲೆ ಎತ್ತಿವೆ. ಮಹಿಳೆಯರು ಮುತ್ತೈದೆದನದ ಸಂಕೇತವಾದ ಹಸಿರು ಬಳೆ ಧರಿಸಿ ಸಂಭ್ರಮಿಸಲಿದ್ದಾರೆ.
ಯಲ್ಲಮ್ಮನಗುಡ್ಡಕ್ಕೆ ಸಂಪರ್ಕ ಕಲ್ಪಿಸುವ ಉಗರಗೋಳ, ಜೋಗುಳಬಾವಿ ಹಾಗೂ ನೂಲಿನ ಗಿರಣಿ ಮಾರ್ಗದಲ್ಲಿ ಬ್ಯಾರಿಕೇಡ್ ಅಳವಡಿಸಲಾಗಿದೆ. ಸುಕ್ಷೇತ್ರ ಯಲ್ಲಮ್ಮನಗುಡ್ಡದಲ್ಲಿ ಭದ್ರತೆಗಾಗಿ ಹೆಚ್ಚಿನ ಪೆÇಲೀಸರನ್ನು ನಿಯೋಜಿಸಲಾಗಿದೆ. 52 ಸಿಸಿಟಿವಿ ಕ್ಯಾಮೆರಾ ಸುಸ್ಥಿತಿಯಲ್ಲಿ ಇಡಲಾಗಿದೆ. ಭಾರತ ಹುಣ್ಣಿಮೆ ಅಂಗವಾಗಿ ಯಲ್ಲಮ್ಮನಗುಡ್ಡಕ್ಕೆ ಲಕ್ಷಾಂತರ ಭಕ್ತರು ಆಗಮಿಸುತ್ತಾರೆ.
ಅವರಿಗೆ ಶುದ್ಧ ಕುಡಿಯುವ ನೀರು, ವಿದ್ಯುತ್, ವಸತಿ, ಶೌಚಗೃಹ ಮತ್ತಿತರ ಮೂಲಸೌಕರ್ಯ ಒದಗಿಸಲಾಗುವುದು ಎಂದು ಯಲ್ಲಮ್ಮ ದೇವಿ ದೇವಸ್ಥಾನ ಪ್ರಭಾರ ಕಾರ್ಯನಿರ್ವಾಹಕ ಅಧಿಕಾರಿಗಳಾದ ಡಾ. ಈಶ್ವರ ಉಳ್ಳಾಗಡ್ಡಿ ತಿಳಿಸಿದ್ದಾರೆ.
ಇನ್ನು ಜಾತ್ರೆಗೆ ನಾಡಿನ ವಿವಿಧ ಭಾಗಗಳಿಂದ ಬಂಧಿರುವ ಭಕ್ತರು ಅಲ್ಲಲ್ಲಿ ಬಿಡಾರಗಳನ್ನು ಹೂಡಿಕೊಂಡು ದೇವಿಯ ದರ್ಶನಕ್ಕೆ ಮುಂದಾಗಿದ್ದಾರೆ. ಇನ್ನು ತಾಯಿ ಜಗನ್ಮಾತೆಯ ಸನ್ನಿಧಿಯಲ್ಲಿ ಸಾರ್ವಜನಿಕರು ಸ್ವಚ್ಛತೆ ಕಾಪಾಡಬೇಕೆಂದು ಕೋರಲಾಗಿದೆ.