ಬೆಳಗಾವಿ ಗ್ರಾಮೀಣ ಕ್ಷೇತ್ರದ ಬೆಳಗುಂದಿ ರಸ್ತೆ ಹದಗೆಟ್ಟಿದ್ದನ್ನು ವಿರೋಧಿಸಿ ಬಿಜೆಪಿ ಸರ್ಕಾರದ ವಿರುದ್ಧ ಬಿಜೆಪಿಯವರೇ ಪ್ರತಿಭಟನೆ ಮಾಡಿದ್ದರು. ಆದರೆ ಕೆಲಸ ಮಾತ್ರ ಮಾಡಲಿಲ್ಲ. ಅವರದ್ದೇ ಸರ್ಕಾರ, ಅವರದ್ದೇ ಲೋಕಸಭೆ ಸದಸ್ಯರು, ವಿಧಾನಪರಿಷತ್ ಸದಸ್ಯರು ಇದ್ದರೂ ಕೂಡ ಅವರಿಂದ ಕೆಲಸ ಆಗಿರಲಿಲ್ಲ. ಇದೀಗ ನಾನು 3 ಕೋಟಿ ರೂ. ಅನುದಾನದಲ್ಲಿ ರಸ್ತೆ ಕಾಮಗಾರಿಗೆ ಚಾಲನೆ ಕೊಟ್ಟಿದ್ದೇನೆ ಎಂದು ವಿರೋಧಿಗಳಿಗೆ ಶಾಸಕಿ ಲಕ್ಷ್ಮೀ ಹೆಬ್ಬಾಳ್ಕರ್ ಟಾಂಗ್ ಕೊಟ್ಟಿದ್ದಾರೆ.

ಹೌದು ಬೆಳಗುಂದಿ ರಸ್ತೆ ಹದಗೆಟ್ಟಿರುವ ವಿಚಾರಕ್ಕೆ ಶಾಸಕಿ ಲಕ್ಷ್ಮೀ ಹೆಬ್ಬಾಳ್ಕರ್ ವಿರುದ್ಧ ಬಿಜೆಪಿ ನಾಯಕರು ಪ್ರತಿಭಟನೆ ನಡೆಸಿದ್ದರು. ಈ ವಿಚಾರ ಸಾಕಷ್ಟು ಚರ್ಚೆಗೆ ಗ್ರಾಸವಾಗಿತ್ತು. ಇದೀಗ ಈ ರಸ್ತೆ ಕಾಮಗಾರಿಗೆ ಕಾಲ ಕೂಡಿ ಬಂದಿದ್ದು. ಮಂಗಳವಾರ ಪಿಡಬ್ಲುಡಿ, ಪಿಆರ್ಡಿ, ಶಾಸಕರ ನಿಧಿ ಸೇರಿ ಒಟ್ಟು 3 ಕೋಟಿ ರೂಪಾಯಿ ಅನುದಾನದಲ್ಲಿ ಮಹಾರಾಷ್ಟ್ರ ಗಡಿಯಿಂದ ರಾಕಸಕೊಪ್ಪ ಸುತಗಟ್ಟಿ ರಸ್ತೆಗೆ ಶಾಸಕಿ ಲಕ್ಷ್ಮೀ ಹೆಬ್ಬಾಳ್ಕರ್ ಭೂಮಿ ಪೂಜೆ ಸಲ್ಲಿಸಿದರು.

ನಂತರ ಮಾಧ್ಯಮಗಳ ಜೊತೆಗೆ ಮಾತನಾಡಿದ ಲಕ್ಷ್ಮೀ ಹೆಬ್ಬಾಳ್ಕರ್ ಬಹಳಷ್ಟು ದಿನಗಳಿಂದ ಮಳೆ, ಪ್ರವಾಹದಿಂದ ಎರಡು ಕಿ.ಮೀ. ರಸ್ತೆ ಕಾಮಗಾರಿ ಉಳಿದುಕೊಂಡಿತ್ತು. ಐದು ಕಿ.ಮೀ. ರಸ್ತೆ ಕಾಮಗಾರಿ ನಾನು ಮಾಡಿಸಿದ್ದೆ. ಅನುದಾನ ಕೊರತೆಯಿಂದ ಇದು ಉಳಿದುಕೊಂಡಿತ್ತು. ಬಹಳಷ್ಟು ಜನ ನಮ್ಮ ರಾಜಕೀಯ ವಿರೋಧಿಗಳು ಅವರದ್ದೇ ಬಿಜೆಪಿ ಸರ್ಕಾರ ಇದ್ದರೂ ಕೂಡ ಇಲ್ಲಿಗೆ ಬಂದು ಬುಟ್ಟಿಗಳಿಂದ ಮಣ್ಣನ್ನು ಹಾಕಿ ಪ್ರತಿಭಟನೆ ಮಾಡಿದ್ದರು. ಬಿಜೆಪಿ ಸರ್ಕಾರದ ವಿರುದ್ಧ ಬಿಜೆಪಿಯವರೇ ಪ್ರತಿಭಟನೆ ಮಾಡಿದರು. ಆದರೆ ಕೆಲಸ ಮಾತ್ರ ಮಾಡಿಸಲಿಲ್ಲ. ಈ ಭಾಗದಲ್ಲಿ ಅವರದ್ದೇ ಸರ್ಕಾರವಿದೆ. ಅವರದ್ದೇ ಲೋಕಸಭೆ ಸದಸ್ಯರು, ವಿಧಾನಪರಿಷತ್ ಸದಸ್ಯರು ಇದ್ದರೂ ಕೂಡ ಅವರಿಂದ ಕೆಲಸ ಆಗಿರಲಿಲ್ಲ. ಈಗ ನಾವು ಸರ್ಕಾರದ ಅನೇಕ ಸಚಿವರನ್ನು ಭೇಟಿಯಾಗಿ ಕ್ಷೇತ್ರದ ಸಮಸ್ಯೆಯನ್ನು ನಾನು ಹೇಳಿಕೊಂಡು ಕ್ಷೇತ್ರದ ಜನರ ಆಶೀರ್ವಾದದೊಂದಿಗೆ 3 ಕೋಟಿ ರೂಪಾಯಿ ಅನುದಾನದ ರಸ್ತೆ ಕಾಮಗಾರಿಗೆ ಚಾಲನೆ ಕೊಟ್ಟಿದ್ದೇವೆ ಎಂದರು.
ಬೆಳಗುಂದಿ ಗ್ರಾಮವನ್ನು ಬಹಳಷ್ಟು ಸುಧಾರಣೆ ಮಾಡಬೇಕು ಎಂಬ ಕನಸು ಇಟ್ಟುಕೊಂಡಿದ್ದೇನೆ. ಸುಮಾರು 8 ಕೋಟಿ ರೂಪಾಯಿ ಅನುದಾನದಲ್ಲಿ ಪುರಮಾಳ ಸೇತುವೆ, ಮಂದಿರಗಳು, ಶಾಲಾ ಕಟ್ಟಡಗಳು, ಬೋರವ್ಹೆಲ್ಗಳು, ರಸ್ತೆ, ಗಟಾರ್ ಸೇರಿದಂತೆ ಎಲ್ಲ ರೀತಿಯ ಕೆಲಸ ಮಾಡಲಾಗುವುದು. ಅದೇ ರೀತಿ ಬೆಳಗುಂದಿ ಜಿಲ್ಲಾ ಪಂಚಾಯತಿ ವ್ಯಾಪ್ತಿಯಲ್ಲಿ ಬರುವ ಬಿಜಗರ್ಣಿ, ಎಳೆಬೈಲ್, ಸೊನೊಳ್ಳಿ, ರಾಕಸಕೊಪ್ಪ ಸೇರಿದಂತೆ ಈ ಎಲ್ಲಾ ಗ್ರಾಮಗಳ ಸುಧಾರಣೆ ಮಾಡುವ ಪ್ರಯತ್ನ ಮಾಡುತ್ತೇನೆ. ಈಗಾಗಲೇ ಅನೇಕ ಕಾಮಗಾರಿಗಳು ಆಗಿವೆ, ಇನ್ನು ಅನೇಕ ಕಾಮಗಾರಿಗಳು ಆಗಬೇಕಿವೆ, ಅವುಗಳನ್ನು ಮುಂಬರುವ ಒಂದು ವರ್ಷದಲ್ಲಿ ಮಾಡುವ ಕೆಲಸ ಮಾಡುತ್ತೇನೆ. ಸರ್ಕಾರದ ಯಾವುದೇ ಮೂಲೆ, ಇಲಾಖೆಯಲ್ಲಿ ಅನುದಾನ ಬರುತ್ತಿದ್ದರೂ ಅದನ್ನು ತೆಗೆದುಕೊಂಡು ಅಭಿವೃದ್ಧಿ ಮಾಡುತ್ತೇನೆ ಎಂದರು.
ಇನ್ನು ಸಿಎಂ ಪರಿಹಾರ ನಿಧಿಯಿಂದ ಆರೋಗ್ಯ ಚಿಕಿತ್ಸೆಗೆ ಪ್ರತಿವಾರ ಪರಿಹಾರ ಚೆಕ್ ತೆಗೆದುಕೊಂಡು ಬರುತ್ತಿದ್ದೆ. ಎರಡು ವಾರ ಬೆಂಗಳೂರು ಹಾಗೂ ಗೋವಾ ಚುನಾವಣೆ ಪ್ರಚಾರದಲ್ಲಿ ಇದ್ದಿದ್ದರಿಂದ ಈ ವಾರ ಸುಮಾರು 23 ಲಕ್ಷ ರೂಪಾಯಿಯ 25 ಚೆಕ್ಗಳು ಬಂದಿವೆ. ನಾಳೆ ಅಥವಾ ನಾಡಿದ್ದು ಎಂಎಲ್ಸಿ ಚನ್ನರಾಜ್ ಹಟ್ಟಿಹೊಳಿ, ಯುವರಾಜ್ ಕದಂ ಸೇರಿದಂತೆ ಕಾಂಗ್ರೆಸ್ ನಾಯಕರು ಫಲಾನುಭವಿಗಳಿಗೆ ಚೆಕ್ ವಿತರಿಸಲಿದ್ದಾರೆ ಎಂದರು. ಬರೀ ರಸ್ತೆ, ಗಟಾರ್, ಶಾಲೆ ಕೆಲಸ ಮಾಡೋದು ಅಷ್ಟೇ ಅಲ್ಲ. ಜನರ ಆರೋಗ್ಯದ ಜವಾಬ್ದಾರಿಯನ್ನು ಕ್ಷೇತ್ರದÀ ಮನೆ ಮಗಳಾಗಿ ತೆಗೆದುಕೊಳ್ಳುತ್ತೇನೆ ಎಂದರು.
ಈ ಸಂದರ್ಭದಲ್ಲಿ ಎಪಿಎಂಸಿ ಅಧ್ಯಕ್ಷ ಯುವರಾಜ್ ಕದಂ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಯಲ್ಲಪ್ಪ ಢೇಕೋಳ್ಕರ್ ಸೇರಿದಂತೆ ಸ್ಥಳೀಯರು ಉಪಸ್ಥಿತರಿದ್ದರು.