ವಿವಾಹ ವಿಚ್ಛೇದನಕ್ಕೆ ಸಂಬಂಧಿಸಿದಂತೆ ನ್ಯಾಯಾಲಯಕ್ಕೆ ಹಾಜರಾಗಿ ವಾಪಸ್ ಬರುತ್ತಿದ್ದ ವೇಳೆ ವ್ಯಕ್ತಿಯೊಬ್ಬನ ಮೇಲೆ ಸುಮಾರು ಆರು ಜನ ಮಾರಕಾಸ್ತ್ರಗಳಿಂದ ಮಾರಣಾಂತಿಕ ಹಲ್ಲೆ ನಡೆಸಿರುವ ಘಟನೆ ಧಾರವಾಡದ ಎಸ್ಬಿಐ ಮುಖ್ಯ ಬ್ರಾಂಚ್ ಬಳಿ ಹಾಡುಹಗಲೇ ನಡೆದಿದೆ.

ಧಾರವಾಡ ಮೆಹಬೂಬ್ನಗರ ನಿವಾಸಿಯಾಗಿರುವ ಶಶಿಧರ ಶಿರಾಳೆ ಎಂಬಾತನೇ ಹಲ್ಲೆಗೊಳಗಾದ ವ್ಯಕ್ತಿ. ಶಶಿಧರ ಪತ್ನಿ ವಿಚ್ಛೇದನಕ್ಕಾಗಿ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದಳು. ಈ ಹಿನ್ನೆಲೆ ಶಶಿಧರ ನ್ಯಾಯಾಲಯಕ್ಕೆ ಹಾಜರಾಗಿ ವಾಪಸ್ ಬರುತ್ತಿದ್ದ ವೇಳೆ ಸುಮಾರು ಆರು ಜನ ಶಶಿಧರ್ ಮೇಲೆ ಮಾರಕಾಸ್ತ್ರಗಳಿಂದ ಮಾರಣಾಂತಿಕ ಹಲ್ಲೆ ನಡೆಸಿದ್ದಾರೆ ಎಂದು ಆರೋಪಿಸಲಾಗಿದೆ. ಶಶಿಧರ್ ಹಾಗೂ ಆತನ ಪತ್ನಿ ಪ್ರೀತಿಸಿ ಮದುವೆಯಾಗಿದ್ದರು. ಕೆಲ ದಿನಗಳ ನಂತರ ಹುಡುಗಿಯ ಮನೆಯವರು ವಿಚ್ಛೇದನಕ್ಕಾಗಿ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದರು. ಆದರೆ, ಶಶಿಧರ ತನಗೆ ವಿಚ್ಛೇದನ ಬೇಡ ನನಗೆ ನನ್ನ ಪತ್ನಿ ಬೇಕು ಎನ್ನುತ್ತಿದ್ದ. ಹೀಗಾಗಿಯೇ ಈ ರೀತಿ ಆಗಾಗ ಜಗಳ ನಡೆಯುತ್ತಲೇ ಇತ್ತು. ಎರಡೂರು ಬಾರಿ ಆ ಯುವತಿಯ ಮನೆಯವರು ಶಶಿಧರ್ ಮೇಲೆ ಹಲ್ಲೆ ನಡೆಸಿದ್ದಾರೆ. ಪೊಲೀಸರು ಕೂಡ ದೂರು ದಾಖಲಿಸಿಕೊಳ್ಳುತ್ತಿಲ್ಲ ಎಂದು ಶಶಿಧರ್ ಮನೆಯವರಿಂದ ಆರೋಪ ಕೇಳಿ ಬಂದಿದೆ. ಜತೆಗೆ ಆ ಹುಡುಗಿಯ ಮನೆಯವರು ವಿಚ್ಛೇದನ ಕೊಡು ಎಂದು ಶಶಿಧರ್ ಮೇಲೆ ಈ ರೀತಿ ಹಲ್ಲೆ ನಡೆಸುತ್ತಿದ್ದಾರೆ ಎಂದು ಆರೋಪಿಸಲಾಗಿದೆ. ಶಶಿಧರ್ ಮಾತ್ರ ತನಗೆ ತನ್ನ ಪತ್ನಿ ಬೇಕು ಎಂದು ಪಟ್ಟು ಹಿಡಿದಿದ್ದಾನೆ. ಹೀಗಾಗಿ ಈ ರೀತಿ ಆಗಾಗ ಜಗಳ ಹಾಗೂ ಹಲ್ಲೆಗಳು ನಡೆಯುತ್ತಲೇ ಇವೆ ಎಂದು ಶಶಿಧರ್ ಕುಟುಂಬಸ್ಥರು ಇದೀಗ ಆರೋಪಿಸಿ ತಮಗೆ ನ್ಯಾಯ ದೊರಕಿಸಿಕೊಡಬೇಕು ಎಂದು ಒತ್ತಾಯಿಸುತ್ತಿದ್ದಾರೆ. ಹಾಡಹಗಲೇ ಶಶಿಧರ್ ಮೇಲೆ ಈ ರೀತಿ ಹಲ್ಲೆ ನಡೆದಿರುವುದು ಜನಬೆಚ್ಚಿ ಬೀಳುವಂತೆ ಮಾಡಿದೆ. ಧಾರವಾಡ ಉಪನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.
