ಬೆಳಗಾವಿ ನಗರದ ಮರಾಠಾ ಲೈಟ್ ಇನ್ಫ್ಯಾಂಟ್ರಿ ರೆಜಿಮೆಂಟಲ್ ಸೆಂಟರ್ನಲ್ಲಿ (ಮರಾಠಾ ಎಲ್ಐಆರ್ಸಿ) ಶ್ರೀಕೃಷ್ಣ ಜನ್ಮಾಷ್ಟಮಿಯನ್ನು ಭಕ್ತಿ, ಉತ್ಸಾಹ ಮತ್ತು ಸಾಂಪ್ರದಾಯಿಕ ಸಂಭ್ರಮದೊಂದಿಗೆ ಆಚರಿಸಲಾಯಿತು.

ಸೆ. 4ರಂದು ಮಿಲಿಟರಿ ಮಹಾದೇವ ಮಂದಿರದಲ್ಲಿ ನಡೆದ ವಿಶೇಷ ಪೂಜೆ ಹಾಗೂ ಪ್ರಾರ್ಥನೆಯಲ್ಲಿ ಮರಾಠಾ ಎಲ್ಐಆರ್ಸಿ ಕಮಾಂಡೆಂಟ್ ಬ್ರಿಗೇಡಿಯರ್ ಗಿರೀಶ್ ಉಪಾಧ್ಯಾಯ, ಎಸ್ಎಂ**, ವಿಎಸ್ಎಂ ಹಾಗೂ ಕುಟುಂಬ ಕಲ್ಯಾಣ ಸಂಸ್ಥೆಯ ಅಧ್ಯಕ್ಷೆ ಶ್ರೀಮತಿ ವೇದಾ ಉಪಾಧ್ಯಾಯ ಪಾಲ್ಗೊಂಡರು. ಅಧಿಕಾರಿಗಳು, ಜೆಸಿಒಗಳು, ಇತರೆ ಸಿಬ್ಬಂದಿ ಹಾಗೂ ಕುಟುಂಬದ ಸದಸ್ಯರು ಉಪಸ್ಥಿತರಿದ್ದು, ಶ್ರೀಕೃಷ್ಣನ ಜನ್ಮದಿನದ ಅಂಗವಾಗಿ ವಿಶೇಷ ಪೂಜೆ ಸಲ್ಲಿಸಿ ಪ್ರಾರ್ಥನೆ ನೆರವೇರಿಸಿದರು.
ದಹಿ ಹಂಡಿ ಸ್ಪರ್ಧೆ
ಜನ್ಮಾಷ್ಟಮಿ ಅಂಗವಾಗಿ ಸೆ. 5ರಂದು ಬೆಳಗ್ಗೆ ಬೆಟಾಲಿಯನ್ಗಳ ನಡುವೆ ಅಂತರ-ಬೆಟಾಲಿಯನ್ ದಹಿ ಹಂಡಿ ಸ್ಪರ್ಧೆ ನಡೆಯಿತು. ವಿವಿಧ ಬೆಟಾಲಿಯನ್ಗಳ ತಂಡಗಳು ಉತ್ಸಾಹ, ಶಕ್ತಿ ಮತ್ತು ಸ್ಪರ್ಧಾ ಮನೋಭಾವದಿಂದ ಪಾಲ್ಗೊಂಡು ಗಮನ ಸೆಳೆದವು. ತಂಡದ ಸಮನ್ವಯ, ಧೈರ್ಯ, ದೃಢಸಂಕಲ್ಪ ಹಾಗೂ ಪರಸ್ಪರ ಸಹಕಾರದ ಮೂಲಕ ಸ್ಪರ್ಧೆ ರೋಮಾಂಚನ ಮೂಡಿಸಿತು.
ದಹಿ ಹಂಡಿ ಸ್ಪರ್ಧೆಯಲ್ಲಿ ರೆಕಾರ್ಡ್ಸ್ ದಿ ಮರಾಠಾ ಲೈಟ್ ಇನ್ಫ್ಯಾಂಟ್ರಿ ತಂಡ ಪ್ರಥಮ ಬಹುಮಾನ ಹಾಗೂ ಟ್ರೈನಿಂಗ್ ಬೆಟಾಲಿಯನ್ ತಂಡ ದ್ವಿತೀಯ ಬಹುಮಾನ ಪಡೆದುಕೊಂಡಿತು.
ಜನ್ಮಾಷ್ಟಮಿ ಆಚರಣೆಯು ಧಾರ್ಮಿಕ ಭಕ್ತಿ, ಸಾಂಪ್ರದಾಯಿಕ ಆಚರಣೆ ಹಾಗೂ ಸೈನಿಕರ ರೆಜಿಮೆಂಟಲ್ ಉತ್ಸಾಹದ ಸಮ್ಮಿಲನಕ್ಕೆ ಸಾಕ್ಷಿಯಾಯಿತು. ಸೈನಿಕರು ಮತ್ತು ಕುಟುಂಬಗಳ ನಡುವಿನ ಬಾಂಧವ್ಯವನ್ನು ಮತ್ತಷ್ಟು ಗಟ್ಟಿಗೊಳಿಸುವುದರ ಜೊತೆಗೆ, ಭಾರತದ ಶ್ರೀಮಂತ ಸಾಂಸ್ಕೃತಿಕ ಪರಂಪರೆಯನ್ನು ಹೆಮ್ಮೆಯಿಂದ ಆಚರಿಸುವ ಅವಕಾಶವೂ ಒದಗಿಸಿತು.
