ಖಾನಾಪೂರ ತಾಲೂಕಿನ ಜಾಂಬೋಟಿಯಲ್ಲಿ ಕಟ್ಟಡ ಕಾರ್ಮಿಕರಿಗಾಗಿ ನೂತನ ಸಂಘದ ಕಚೇರಿ ಲೋಕಾರ್ಪಣೆಗೊಂಡಿದೆ. ಕಾರ್ಮಿಕರು ಸರ್ಕಾರದ ಸೌಲಭ್ಯಗಳನ್ನು ಸದುಪಯೋಗಪಡಿಸಿಕೊಳ್ಳುವಂತೆ ಲೈಲಾ ಶುಗರ್ಸ್ ಎಂಡಿ ಸದಾನಂದ ಪಾಟೀಲ ಕರೆ ನೀಡಿದ್ದಾರೆ.

ಲೈಲಾ ಶುಗರ್ಸ್ ವ್ಯವಸ್ಥಾಪಕ ನಿರ್ದೇಶಕ ಸದಾನಂದ ಪಾಟೀಲ ಅವರು ಖಾನಾಪೂರ ತಾಲೂಕಿನ ಪಶ್ಚಿಮ ಭಾಗದ ಪ್ರಮುಖ ವಲಯವಾದ ಜಾಂಬೋಟಿಯಲ್ಲಿ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಸಂಘದ ನೂತನ ಘಟಕದ ಕಚೇರಿಯನ್ನು ರಿಬ್ಬನ್ ಕತ್ತರಿಸಿ ಉದ್ಘಾಟಿಸಿದರು. ಈ ವೇಳೆ ಮಾತನಾಡಿದ ಅವರು, ಪಶ್ಚಿಮ ಭಾಗದ ಕಾರ್ಮಿಕರಿಗೆ ಉದ್ಯೋಗದ ಮಾಹಿತಿ ಹಾಗೂ ಸರ್ಕಾರಿ ಸೌಲಭ್ಯಗಳನ್ನು ಪಡೆಯಲು ಈ ನೂತನ ಕಚೇರಿಯು ಅತ್ಯಂತ ಅನುಕೂಲಕರವಾಗಲಿದೆ ಎಂದರು. ಕಾರ್ಮಿಕರು ಇಲ್ಲಿಂದಲೇ ಅಗತ್ಯ ಮಾಹಿತಿ ಪಡೆದು ತಮ್ಮ ಹೆಸರನ್ನು ನೊಂದಾಯಿಸಿಕೊಂಡು ವೃತ್ತಿಜೀವನಕ್ಕೆ ಭದ್ರವಾದ ಬುನಾದಿ ಹಾಕಿಕೊಳ್ಳಬೇಕೆಂದು ಕಿವಿಮಾತು ಹೇಳಿದರು. ಸಂಘದ ಅಧ್ಯಕ್ಷ ಶಿವಾ ಬಾಗವಾಡಕರ ಸೇರಿದಂತೆ ವಿವಿಧ ಪ್ರಮುಖ ಪದಾಧಿಕಾರಿಗಳು ಹಾಗೂ ಜಾಂಬೋಟಿ ಭಾಗದ ಗಣ್ಯರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದು ಶುಭ ಹಾರೈಸಿದರು.
