ಧಾರವಾಡದಲ್ಲಿ ಲೋಕಾಯುಕ್ತ ಪೊಲೀಸರು ಮಿಂಚಿನ ಕಾರ್ಯಾಚರಣೆ ನಡೆಸಿ, ಮೂವರು ಪೊಲೀಸ್ ಹೆಡ್ ಕಾನ್ಸ್ಟೇಬಲ್ಗಳು ಹಾಗೂ ಒಬ್ಬ ಹೋಮ್ ಗಾರ್ಡ್ ಅವರನ್ನು ಖೆಡ್ಡಾಕ್ಕೆ ಕೆಡುವುವಲ್ಲಿ ಶುಕ್ರವಾರ ಯಶಸ್ವಿಯಾಗಿದ್ದಾರೆ.

ಧಾರವಾಡ ಲೋಕಾಯುಕ್ತ ಎಸ್ಪಿ ಸಿದ್ಧಲಿಂಗಪ್ಪ ನೇತೃತ್ವದಲ್ಲಿ ನಡೆದ ಕಾರ್ಯಾಚರಣೆಯಲ್ಲಿ ಧಾರವಾಡ ಶಹರ ಪೊಲೀಸ್ ಠಾಣೆಯ ಹೆಡ್ ಕಾನ್ಸ್ಟೇಬಲ್ ಹಸನ್ಸಾಬ ನದಾಫ್, ಸಂಚಾರ ಠಾಣೆಯ ಹೆಡ್ ಕಾನ್ಸ್ಟೇಬಲ್ ಇಮಾಮ್ ಅತ್ತಾರ್, ಹುಬ್ಬಳ್ಳಿ ಗ್ರಾಮೀಣ ಠಾಣೆಯ ಹೆಡ್ ಕಾನ್ಸ್ಟೇಬಲ್ ಗಿರೀಶ ಮನ್ಸೂರು ಹಾಗೂ ಹೋಮ್ ಗಾರ್ಡ್ ಇಕ್ಬಾಲ್ ನದಾಫ್ ಅವರನ್ನು ಬಂಧಿಸಲಾಗಿದೆ. ಬಂಧಿತರಿಂದ ಹಣ ಪಡೆದಿದ್ದ ದಾಖಲೆ ಹಾಗೂ ಎಲ್ಲಾ ಆರೋಪಿಗಳ ಮೊಬೈಲ್ ವಶಕ್ಕೆ ಪಡೆಯಲಾಗಿದ್ದು, ತನಿಖೆ ಮುಂದುವರಿದಿದೆ. ಕೊಪ್ಪಳದ ಲಾರಿ ಚಾಲಕ ಹನುಮಂತನಿಗೆ ಹುಬ್ಬಳ್ಳಿ-ಧಾರವಾಡ ಅವಳಿ ನಗರದಲ್ಲಿ ಲಾರಿ ಸಂಚರಿಸಲು ಲಂಚದ ಬೇಡಿಕೆ ಇಟ್ಟಿದ್ದರು. ಮರಳು ಲಾರಿ ಚಾಲಕನಿಂದ 30 ಸಾವಿರ ರೂಪಾಯಿ ಫೋನ್ ಪೇ ಮೂಲಕ ಹಣ ಪಡೆದಿದ್ದ ಆರೋಪಿಗಳ ವಿರುದ್ಧ ಲೋಕಾ ಪೊಲೀಸರಿಗೆ ದೂರು ನೀಡಿದ್ದ ಹನುಮಂತ ಆಡಿಯೋ ಹಾಗೂ ವೀಡಿಯೋ ನೀಡಿದ್ದ ಎನ್ನಲಾಗಿದೆ. ಇದರಲ್ಲಿ ಯಾರಿಗೆ ಎಷ್ಟು ಅಂತ ಪೊಲೀಸ್ ಬಾಯಿ ಬಿಟ್ಟಿದ್ದು ಗೊತ್ತಾಗಿದೆ.
