ಬೆಳಗಾವಿಯ ಕೆಎಲ್ಎಸ್ ಗೋಗಟೆ ತಾಂತ್ರಿಕ ಮಹಾವಿದ್ಯಾಲಯದಲ್ಲಿ ವಿಟಿಯು ಸಂಯೋಜಿತ ಕಾಲೇಜುಗಳ ಬೋಧಕ ಹಾಗೂ ಬೋಧಕೇತರ ಸಿಬ್ಬಂದಿಗಾಗಿ ಆಯೋಜಿಸಲಾಗಿದ್ದ ಶಟಲ್ ಬ್ಯಾಡ್ಮಿಂಟನ್ ಪಂದ್ಯಾವಳಿಯು ಯಶಸ್ವಿಯಾಗಿ ಮುಕ್ತಾಯಗೊಂಡಿದೆ. ಕ್ರೀಡಾಕೂಟದ ಸಮಾರೋಪ ಸಮಾರಂಭದಲ್ಲಿ ವಿಜೇತ ತಂಡಗಳಿಗೆ ಹಾಗೂ ಅತ್ಯುತ್ತಮ ಆಟಗಾರರಿಗೆ ಪ್ರಶಸ್ತಿ ಮತ್ತು ಪಾರಿತೋಷಕಗಳನ್ನು ವಿತರಿಸಲಾಯಿತು.

ಕೆಎಲ್ಎಸ್ ಗೋಗಟೆ ತಾಂತ್ರಿಕ ಮಹಾವಿದ್ಯಾಲಯ (ಜಿಐಟಿ) ಆಯೋಜಿಸಿದ್ದ ಈ ಕ್ರೀಡಾಕೂಟದಲ್ಲಿ ವಿವಿಧ ಕಾಲೇಜುಗಳ ಸಿಬ್ಬಂದಿ ಅತ್ಯಂತ ಉತ್ಸಾಹದಿಂದ ಪಾಲ್ಗೊಂಡು ಕ್ರೀಡಾಸ್ಪೂರ್ತಿಯನ್ನು ಮೆರೆದರು. ಪುರುಷರ ವಿಭಾಗದಲ್ಲಿ ಬೆಳಗಾವಿಯ ಅಂಗಡಿ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ ತಂಡವು ಪ್ರಥಮ ಸ್ಥಾನ ಗಳಿಸಿ ವಿಜೇತವಾಗಿ ಹೊರಹೊಮ್ಮಿದರೆ, ಕೆಎಲ್ಎಸ್ ಜಿಐಟಿ ತಂಡವು ದ್ವಿತೀಯ ಸ್ಥಾನ ಪಡೆಯಿತು. ಮಹಿಳಾ ವಿಭಾಗದಲ್ಲಿ ಕೆಎಲ್ಎಸ್ ಜಿಐಟಿ ‘ಎ’ ತಂಡ ಪ್ರಥಮ ಹಾಗೂ ಕೆಎಲ್ಎಸ್ ಜಿಐಟಿ ‘ಬಿ’ ತಂಡ ದ್ವಿತೀಯ ಸ್ಥಾನವನ್ನು ತನ್ನದಾಗಿಸಿಕೊಂಡವು. ಪುರುಷರ ವಿಭಾಗದ ಅತ್ಯುತ್ತಮ ಆಟಗಾರ ಪ್ರಶಸ್ತಿಯನ್ನು ಅಂಗಡಿ ಇನ್ಸ್ಟಿಟ್ಯೂಟ್ನ ಪ್ರೊ. ಮಂಜುನಾಥ ಪಾಟೀಲ ಪಡೆದುಕೊಂಡರೆ, ಮಹಿಳಾ ವಿಭಾಗದಲ್ಲಿ ಕೆಎಲ್ಎಸ್ ಜಿಐಟಿಯ ಸಹಾಯಕ ಪ್ರಾಧ್ಯಾಪಕಿ ಸ್ನೇಹಲ್ ರಾಯ್ಕರ್ ಹಾಗೂ ಭುವನೇಶ್ವರಿ ಜಂಟಿಯಾಗಿ ಕ್ರೀಡಾಪಟು ಪ್ರಶಸ್ತಿಗೆ ಭಾಜನರಾದರು. ಸಂಸ್ಥೆಯ ದೈಹಿಕ ಶಿಕ್ಷಣ ನಿರ್ದೇಶಕ ಡಾ. ಜಾರ್ಜ್ ಟಿ. ರೊಡ್ರಿಗಸ್, ದೈಹಿಕ ಶಿಕ್ಷಣ ಬೋಧಕರಾದ ಶುಭಾಸ್ವ ಶಿಕ್ರೆ ಮತ್ತು ಶಿವಾನಿ ಕರಾಳೆ ಅವರ ನೇತೃತ್ವದಲ್ಲಿ ನಡೆದ ಈ ಪಂದ್ಯಾವಳಿಯ ವಿಜೇತರಿಗೆ ಸಂಸ್ಥೆಯ ಆಡಳಿತ ಮಂಡಳಿ ಹಾಗೂ ಪ್ರಾಂಶುಪಾಲರು ಅಭಿನಂದನೆ ಸಲ್ಲಿಸಿದ್ದಾರೆ.
