ಬೆಳಗಾವಿಯಲ್ಲಿ ಮುಂಬರುವ ಗಣೇಶೋತ್ಸವದ ಸಂಭ್ರಮಕ್ಕೆ ಈಗಿನಿಂದಲೇ ಚಾಲನೆ ಸಿಕ್ಕಿದೆ. ಚವ್ಹಾಟ ಗಲ್ಲಿಯ ಶ್ರೀ ಶಿವಶಂಬು ಢೋಲ್-ತಾಶಾ ಪಥಕವು ಮಾಜಿ ಶಾಸಕ ಅನಿಲ್ ಬೆನಕೆ ಹಾಗೂ ಹಲವು ಗಣ್ಯರ ಸಮ್ಮುಖದಲ್ಲಿ ಸಾಂಪ್ರದಾಯಿಕ ಶಿಸ್ತಿನೊಂದಿಗೆ ವಾದ್ಯಪೂಜೆ ನೆರವೇರಿಸಿ, ಗಣೇಶೋತ್ಸವದ ನಾದನಮನಕ್ಕೆ ಅದ್ಧೂರಿ ಚಾಲನೆ ನೀಡಿದೆ.
ಬೆಳಗಾವಿಯ ಚವ್ಹಾಟ್ ಗಲ್ಲಿಯ ‘ಜಾಲಗಾರ ಮಾರುತಿ ಮಂಗಳ ಕಾರ್ಯಾಲಯ’ದಲ್ಲಿ ಶ್ರೀ ಶಿವಶಂಬು ಢೋಲ್-ತಾಶಾ ಪಥಕದ ವಾದ್ಯಪೂಜಾ ಸಮಾರಂಭವು ಮಾಜಿ ಶಾಸಕ ಅನಿಲ್ ಬೆನಕೆ ಅವರ ಸಮ್ಮುಖದಲ್ಲಿ ವಿಜೃಂಭಣೆಯಿಂದ ನೆರವೇರಿತು. ಕಾರ್ಯಕ್ರಮದಲ್ಲಿ ಗಜಾನನ ಮಿಸಾಳೆ, ಪ್ರತಾಪ ಮೋಹಿತೆ, ಉತ್ತಮ್ ನಾಕಾಡಿ, ದಿಗಂಬರ ಪವಾರ್, ವಿಶ್ವಜೀತ್ ಹಸವೇ, ಸುನಿಲ್ ಜಾಧವ್, ಭಾಸ್ಕರ್ ಚವಾಣ್, ಬಾಳು ನಾಯಕ್, ಶಂಕರ್ ಕಾಂಬಳೆ, ಶ್ರೀನಾಥ್ ಪವಾರ್, ರಘು ಉರ್ವಿನ್, ಪ್ರಫುಲ್ಲ ಶಿರ್ವಳ್ಕರ್ ಹಾಗೂ ಪಥಕದ ಅಧ್ಯಕ್ಷ ಪವನ್ ಕಿಲ್ಲೇಕರ್ ಸೇರಿದಂತೆ ಹಲವು ಗಣ್ಯರು ಉಪಸ್ಥಿತರಿದ್ದರು. ಧೋಲ್ ಹಾಗೂ ತಾಶಾಗಳಿಗೆ ಪೂಜೆ ಸಲ್ಲಿಸಿದ ಬಳಿಕ ಮಾತನಾಡಿದ ಅನಿಲ್ ಬೆನಕೆ, “ಇದು ಕೇವಲ ವಾದ್ಯಪೂಜೆಯಲ್ಲ, ಯುವಕರ ವಜ್ರಮುಷ್ಟಿಯ ಸಂಕೇತ” ಎಂದು ಶ್ಲಾಘಿಸಿದರು.
ಕಳೆದ ಹತ್ತು ವರ್ಷಗಳಿಂದ ಗಡಿಭಾಗದಲ್ಲಿ ಕಲಾ ಸೇವೆ ಸಲ್ಲಿಸುತ್ತಿರುವ ಈ ಪಥಕವು ಸಂಸ್ಕೃತಿಯ ಜೊತೆಗೆ ಸಾಮಾಜಿಕ ಬದ್ಧತೆಯನ್ನೂ ಕಾಯ್ದುಕೊಂಡು ಬಂದಿದೆ. ವಾರ್ಷಿಕ ಆದಾಯದಲ್ಲಿ ವೆಚ್ಚ ಕಳೆದು ಉಳಿದ ಹಣವನ್ನು ಸಾಮಾಜಿಕ ಕಾರ್ಯಗಳಿಗೆ ಬಳಸುವ ಈ ಪಥಕವು, ಈ ಬಾರಿ ಶೇಕಡಾ ೮೦ಕ್ಕಿಂತ ಹೆಚ್ಚು ಅಂಕ ಗಳಿಸಿದ ಪಥಕದ ವಿದ್ಯಾರ್ಥಿಗಳನ್ನು ಗಣ್ಯರ ಹಸ್ತದಿಂದ ಗೌರವಿಸಿ ಪ್ರೋತ್ಸಾಹಿಸಿತು. ಜೊತೆಗೆ ಪಥಕದ ಪ್ರತಿಯೊಬ್ಬ ಕಾರ್ಯಕರ್ತನ ಕೊಡುಗೆಯನ್ನು ಸ್ಮರಿಸಿ ಸನ್ಮಾನಿಸಲಾಯಿತು. ಶಿಸ್ತು, ಒಗ್ಗಟ್ಟು ಮತ್ತು ಸಾಮಾಜಿಕ ಕಾಳಜಿಯೊಂದಿಗೆ ನೆರವೇರಿದ ಈ ವಾದ್ಯಪೂಜೆಯು ಮುಂಬರುವ ಗಣೇಶೋತ್ಸವದ ಸಿದ್ಧತೆಗೆ ನಾದಮಯ ಚಾಲನೆ ನೀಡಿದೆ.

