ಶಿಕ್ಷಕ ಹಾಗೂ ವಿದ್ಯಾರ್ಥಿಗಳ ನಡುವಿನ ಪವಿತ್ರ ಬಾಂಧವ್ಯಕ್ಕೆ ಸಾಕ್ಷಿಯಾಗುವಂತಹ ಅಪರೂಪದ ಘಟನೆಯೊಂದು ಬೆಳಗಾವಿ ಜಿಲ್ಲೆಯಲ್ಲಿ ನಡೆದಿದೆ. ಮೂರು ದಶಕಗಳ ಕಾಲ ಜ್ಞಾನ ದಾಸೋಹ ನೀಡಿದ ನೆಚ್ಚಿನ ಗುರುವಿಗೆ ಗ್ರಾಮಸ್ಥರು ಹಾಗೂ ವಿದ್ಯಾರ್ಥಿಗಳು ತಾಯ್ನಾಡಿನಲ್ಲಿ ಅಭೂತಪೂರ್ವ ಬೀಳ್ಕೊಡುಗೆ ನೀಡಿದ್ದಾರೆ.”


ಬೆಳಗಾವಿ ಜಿಲ್ಲೆಯ ಗೋಕಾಕ ತಾಲೂಕಿನ ಬೆಣಚಿನಮರಡಿ ಗ್ರಾಮದಲ್ಲಿ ಗುರು-ಶಿಷ್ಯರ ಪವಿತ್ರ ಬಾಂಧವ್ಯವನ್ನು ಎತ್ತಿಹಿಡಿಯುವಂತಹ ಹೃದಯಸ್ಪರ್ಶಿ ಘಟನೆಯೊಂದು ಜರುಗಿದೆ. ಕಳೆದ 30 ವರ್ಷಗಳಿಂದ ಸತತವಾಗಿ ಅಕ್ಷರ ಸೇವೆ ಸಲ್ಲಿಸಿ ನಿವೃತ್ತರಾದ ಬಾಳಪ್ಪ ಪಾಶ್ಚಾಪುರಿ ಎಂಬ ನೆಚ್ಚಿನ ಶಿಕ್ಷಕರಿಗೆ ಗ್ರಾಮಸ್ಥರು ಹಾಗೂ ವಿದ್ಯಾರ್ಥಿಗಳು ಸೇರಿ ಅತ್ಯಂತ ಅದ್ಧೂರಿಯಾಗಿ ಬೀಳ್ಕೊಡುಗೆ ಸಮಾರಂಭವನ್ನು ಆಯೋಜಿಸಿದ್ದರು. ಶಾಲಾ ಆವರಣದಿಂದ ಆರಂಭವಾದ ಈ ಕಾರ್ಯಕ್ರಮವು ಇಡೀ ಗ್ರಾಮದಾದ್ಯಂತ ಹಬ್ಬದ ವಾತಾವರಣವನ್ನು ನಿರ್ಮಿಸಿತ್ತು.

ತಮಗೆ ಜ್ಞಾನದಾರಿ ತೋರಿದ ನೆಚ್ಚಿನ ಗುರುವಿನ ನಿವೃತ್ತಿಯನ್ನು ಸ್ಮರಣೀಯವಾಗಿಸಲು ಗ್ರಾಮಸ್ಥರು ಬಾಳಪ್ಪ ಅವರನ್ನು ಅತ್ಯಂತ ಸುಂದರವಾಗಿ ಅಲಂಕರಿಸಿದ ಎತ್ತಿನ ಬಂಡಿಯಲ್ಲಿ ಕುಳ್ಳಿರಿಸಿ ಗ್ರಾಮದ ಪ್ರಮುಖ ರಸ್ತೆಗಳಲ್ಲಿ ಮೆರವಣಿಗೆ ಮಾಡಿದರು. ಮೆರವಣಿಗೆಯುದ್ದಕ್ಕೂ ಹಳೆಯ ಹಾಗೂ ಪ್ರಸ್ತುತ ವಿದ್ಯಾರ್ಥಿಗಳು ತಮ್ಮ ನೆಚ್ಚಿನ ಶಿಕ್ಷಕನಿಗೆ ಪುಷ್ಪವೃಷ್ಠಿ ಕರೆದು, ಪಟಾಕಿ ಸಿಡಿಸಿ ಗೌರವ ಸಲ್ಲಿಸಿದರು. ವಿದ್ಯಾರ್ಥಿಗಳು ಹಾಗೂ ಊರಿನ ಹಿರಿಯರು ತೋರಿದ ಈ ಅದಮ್ಯ ಪ್ರೀತಿ, ಗೌರವ ಹಾಗೂ ಅಭಿಮಾನವನ್ನು ಕಂಡು ನಿವೃತ್ತ ಶಿಕ್ಷಕ ಬಾಳಪ್ಪ ಪಾಶ್ಚಾಪುರಿ ಅವರು ಭಾವುಕರಾಗಿ ಆನಂದಭಾಷ್ಪ ಹರಿಸಿದರು.

