ಬೆಳಗಾವಿಯ ಗಣೇಶಪುರದ ಶ್ರೀ ಶಿವಶಕ್ತಿ ಮಹಾಕಾಳೇಶ್ವರ ದೇವಾಲಯದಲ್ಲಿ ಇಂದು ಅತ್ಯಂತ ಭಾವಪೂರ್ಣ ಸನ್ನಿವೇಶವೊಂದು ಜರುಗಿದೆ. ಕಳೆದ 12 ವರ್ಷಗಳಿಂದ ದೇವಾಲಯದ ಸಾನಿಧ್ಯದಲ್ಲಿದ್ದ ‘ಗೋಮತಿ’ ಎಂಬ ಗೋಮಾತೆಯು ಪವಿತ್ರ ಗುರುಪೂರ್ಣಿಮೆಯ ದಿನದಂದೇ ಪ್ರಾಣತ್ಯಾಗ ಮಾಡಿದೆ. ಪೂಜಾರಿ ರೋಶ್ನಿ ಅಮ್ಮಾಜಿ ಹಾಗೂ ಸ್ಥಳೀಯ ಗಣ್ಯರ ಸನ್ನಿಧಿಯಲ್ಲಿ ಗೋಮಾತೆಗೆ ವಿಧಿವಿಧಾನಗಳೊಂದಿಗೆ ಅಂತ್ಯಸಂಸ್ಕಾರ ನೆರವೇರಿಸಲಾಯಿತು.

ಬೆಳಗಾವಿಯ ಅಯೋಧ್ಯಾನಗರ ಗಣೇಶಪುರದ ಶ್ರೀ ಶಿವ ಶಕ್ತಿ ಮಾನವ ಕಲ್ಯಾಣ ಸೇವಾ ಸಂಸ್ಥೆಯ ಮಹಾಕಾಳೇಶ್ವರ ದೇವಾಲಯದಲ್ಲಿ ಜುಲೈ 29ರ ಗುರುಪೂರ್ಣಿಮೆಯ ಪಾವನ ಪರ್ವದಂದು ಬೆಳಿಗ್ಗೆ 8:15ಕ್ಕೆ, ಕಳೆದ 12 ವರ್ಷಗಳಿಂದ ದೇವಾಲಯದಲ್ಲೇ ಸೇವೆಯಲ್ಲಿದ್ದ ‘ಗೋಮತಿ’ ಗೋಮಾತೆಯು ಪ್ರಾಣತ್ಯಾಗ ಮಾಡಿದ್ದು, ಇದನ್ನು ಅತ್ಯಂತ ದಿವ್ಯ ಘಟನೆ ಎಂದು ಭಕ್ತರು ಸ್ಮರಿಸಿದ್ದಾರೆ. ಈ ಪವಿತ್ರ ಸಂದರ್ಭದಲ್ಲಿ ದೇವಾಲಯದ ಪೂಜಾರಿ ರೋಶ್ನಿ ಅಮ್ಮಾಜಿ, ಬೆನಕನಹಳ್ಳಿ ಪಂಚಾಯತ್ ಅಧ್ಯಕ್ಷ ಉಮೇಶ್ ಚೋಪಡೆ, ಗೌರಕ್ಷಕ ನಿಲೇಶ್ ಹಾಗೂ ಪ್ರಮುಖ ಸೇವಾದಾರರಾದ ಪದ್ಮಪ್ರಸಾದ್ ಹೋಳಿ, ನಿಖಿತಾ, ರಂಜಿತ್, ಹಾರೂನ್, ನಯೀಮ್, ರಾಹುಲ್, ಚಿನ್ನಾ, ಸಿದ್ಧು, ಅಭಯ್ ಸೇರಿದಂತೆ ನೂರಾರು ಭಕ್ತಾದಿಗಳು ಉಪಸ್ಥಿತರಿದ್ದು ಸಂಪೂರ್ಣ ಧಾರ್ಮಿಕ ವಿಧಿವಿಧಾನಗಳು ಮತ್ತು ಗೌರವಗಳೊಂದಿಗೆ ಗೋಮಾತೆಯ ಅಂತಿಮ ಸಂಸ್ಕಾರವನ್ನು ನೆರವೇರಿಸಿ ಶ್ರದ್ಧಾಂಜಲಿ ಸಲ್ಲಿಸಿದರು.
