ವಿಜಯಪುರ ಜಿಲ್ಲೆಯಲ್ಲಿನ ಆದಿಲ್ಶಾಹಿ ಕಾಲದ ಐತಿಹಾಸಿಕ ಮಮದಾಪುರ ಕೆರೆ ಮತ್ತೆ ನೀರಿನಿಂದ ತುಂಬಿ ಕಂಗೊಳಿಸುತ್ತಿದೆ. ರಾಜ್ಯದ ಮೂರನೇ ಅತಿ ದೊಡ್ಡ ಕೆರೆಯಾಗಿರುವ ಈ ಜಲಾಶಯಕ್ಕೆ ನೀರು ಹರಿಸಿರುವ ಪರಿಣಾಮ, ಸುತ್ತಮುತ್ತಲಿನ ಗ್ರಾಮಗಳಿಗೆ ಕುಡಿಯುವ ನೀರಿನ ಭರವಸೆ ಮೂಡಿದ್ದು, ಜಿಲ್ಲೆಯ ಅಂತರ್ಜಲ ಮಟ್ಟವೂ ಸುಧಾರಿಸುವ ನಿರೀಕ್ಷೆ ಹೆಚ್ಚಾಗಿದೆ. ವಿಜಯಪುರ ಜಿಲ್ಲೆಯ ಐತಿಹಾಸಿಕ ಮಮದಾಪುರ ಕೆರೆಗೆ ನೀರು ಹರಿಸುವಂತೆ ಸಚಿವ ಎಂ.ಬಿ. ಪಾಟೀಲ ಸೂಚನೆ ನೀಡಿದ ಹಿನ್ನೆಲೆಯಲ್ಲಿ ಅಧಿಕಾರಿಗಳು ಕೆರೆಗೆ ನೀರು ಹರಿಸಿದ್ದಾರೆ.


ಪರಿಣಾಮವಾಗಿ ಹಲವು ತಿಂಗಳುಗಳ ಬಳಿಕ ಕೆರೆ ಮತ್ತೆ ನೀರಿನಿಂದ ಕಂಗೊಳಿಸುತ್ತಿದ್ದು, ಜನರಲ್ಲಿ ಸಂತಸ ಮನೆ ಮಾಡಿದೆ. ಆದಿಲ್ಶಾಹಿ ಕಾಲದಲ್ಲಿ ನಿರ್ಮಾಣಗೊಂಡ ಮಮದಾಪುರ ಕೆರೆ ಕರ್ನಾಟಕದ ಮೂರನೇ ಅತಿ ದೊಡ್ಡ ಕೆರೆ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. ಈ ಕೆರೆ ಸುತ್ತಮುತ್ತಲಿನ 32 ಗ್ರಾಮಗಳಿಗೆ ಕುಡಿಯುವ ನೀರಿನ ಪ್ರಮುಖ ಆಧಾರವಾಗಿದ್ದು, ವಿಜಯಪುರ ಜಿಲ್ಲೆಯ ಬಹುಭಾಗದಲ್ಲಿ ಅಂತರ್ಜಲ ಮಟ್ಟ ಹೆಚ್ಚಿಸುವಲ್ಲಿ ಮಹತ್ವದ ಪಾತ್ರ ವಹಿಸುತ್ತಿದೆ. ಕೆರೆಗೆ ನೀರು ಬಂದಿರುವುದರಿಂದ ಗ್ರಾಮೀಣ ಪ್ರದೇಶಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ತಗ್ಗುವ ನಿರೀಕ್ಷೆ ಮೂಡಿದೆ. ಜೊತೆಗೆ ಬಾವಿ, ಕೊಳವೆಬಾವಿಗಳಲ್ಲಿ ನೀರಿನ ಮಟ್ಟ ಏರಿಕೆಯಾಗುವ ಸಾಧ್ಯತೆ ಇದ್ದು, ರೈತರು ಹಾಗೂ ಸಾರ್ವಜನಿಕರಲ್ಲಿ ಆಶಾಭಾವನೆ ಮೂಡಿದೆ.

