ದಾವಣಗೆರೆ ಜಿಲ್ಲೆಯ ಹರಿಹರ ತಾಲೂಕಿನಲ್ಲಿ ಘೋರ ಘಟನೆಯೊಂದು ತಡವಾಗಿ ಬೆಳಕಿಗೆ ಬಂದಿದೆ. ದಿನನಿತ್ಯದ ಕುಡಿತ ಮತ್ತು ಗಲಾಟೆಯಿಂದ ಬೇಸತ್ತ ಪತ್ನಿಯೊಬ್ಬಳು, ಮಗನ ಸಹಾಯದೊಂದಿಗೆ ಪತಿಯನ್ನೇ ಹತ್ಯೆ ಮಾಡಿ ಸಿಕ್ಕಿಬಿದ್ದಿರುವ ಘಟನೆ ಹರಿಹರ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.


ಹರಿಹರ ತಾಲೂಕಿನ ಚಿಕ್ಕಬಿದರಿ ಗ್ರಾಮದಲ್ಲಿ ಜೂನ್ 23 ರಂದು ಜಮೀನು ಕೆಲಸ ಮಾಡಿಕೊಂಡಿದ್ದ ಶಿವಪ್ಪ (42) ಎಂಬುವವರ ಕೊಲೆಯಾಗಿದ್ದು, ತನಿಖೆಯ ವೇಳೆ ಪತ್ನಿ ಸಾವಿತ್ರಿ (40) ಹಾಗೂ ಪುತ್ರ ಹನುಮೇಗೌಡ (20) ಸೇರಿ ಹತ್ಯೆ ಮಾಡಿರುವುದು ಪತ್ತೆಯಾಗಿದೆ. ಪ್ರತಿದಿನ ಕುಡಿದು ಬಂದು ಗಲಾಟೆ ಮಾಡುತ್ತಿದ್ದ ಪತಿಯೊಂದಿಗೆ ಜಗಳವಾಡಿದ ಸಾವಿತ್ರಿ, ಕೋಪದಲ್ಲಿ ತಲೆಗೆ ಕಲ್ಲಿನಿಂದ ಜಜ್ಜಿ ಆತನನ್ನು ಕೊಂದಿದ್ದಾಳೆ. ಕೊಲೆಯಾದ ಸಮಯದಲ್ಲಿ ಸ್ಥಳದಲ್ಲಿಲ್ಲದಿದ್ದ ಪುತ್ರ ಹನುಮೇಗೌಡ, ತದನಂತರ ತಾಯಿಯೊಂದಿಗೆ ಸೇರಿ ತಂದೆಯ ರಕ್ತಸಿಕ್ತ ಶವವನ್ನು ಮನೆಯ ಹಿಂಭಾಗಕ್ಕೆ ಸಾಗಿಸಲು ನೆರವಾಗಿದ್ದಾನೆ. ಸ್ಥಳಕ್ಕೆ ಭೇಟಿ ನೀಡಿದ್ದ ಸುಕೋ ಟೀಮ್, ಬೆರಳಚ್ಚು ತಜ್ಞರು ಹಾಗೂ ಶ್ವಾನದಳದ ನೆರವಿನಿಂದ ಹರಿಹರ ಗ್ರಾಮಾಂತರ ಠಾಣೆ ಪೊಲೀಸರು ಚುರುಕಿನ ತನಿಖೆ ನಡೆಸಿ, ಕೊಲೆ ಆರೋಪಿಗಳಾದ ತಾಯಿ-ಮಗನನ್ನು ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ.
