ಪ್ರತಿಭೆಗೆ ಬಡತನವಾಗಲಿ ಅಥವಾ ಭೌಗೋಳಿಕ ಹಿನ್ನೆಲೆಯಾಗಲಿ ಎಂದಿಗೂ ಅಡ್ಡಿಯಾಗುವುದಿಲ್ಲ ಎಂಬುದನ್ನು ಬೆಳಗಾವಿ ಜಿಲ್ಲೆಯ ಖಾನಾಪುರದ ಹೆಣ್ಣುಮಗಳೊಬ್ಬಳು ಸಾಬೀತುಪಡಿಸಿದ್ದಾಳೆ. ತಾಲೂಕಿನ ಅತ್ಯಂತ ದುರ್ಗಮ ಪ್ರದೇಶದ ಸರ್ಕಾರಿ ಶಾಲೆಯ ವಿದ್ಯಾರ್ಥಿನಿ ಈಗ ಅಂತರರಾಷ್ಟ್ರೀಯ ಮಟ್ಟದಲ್ಲಿ ಮಿಂಚಲು ಜಪಾನ್ ದೇಶಕ್ಕೆ ಹೆಜ್ಜೆ ಇಟ್ಟಿದ್ದಾಳೆ.

ಖಾನಾಪುರ ತಾಲೂಕಿನ ದಟ್ಟ ಅರಣ್ಯ ಪ್ರದೇಶದ ಪಾಲಿ ಗ್ರಾಮದ ಉನ್ನತ ಪ್ರಾಥಮಿಕ ಶಾಲೆಯ ವಿದ್ಯಾರ್ಥಿನಿ ಅಕ್ಷರಾ ದೂಳಬಾ ಮಾಳಿಕ್ ಜಪಾನ್ನಲ್ಲಿ ನಡೆಯಲಿರುವ ಪ್ರತಿಷ್ಠಿತ ‘ಇನ್ಸ್ಪೈರ್ ಅವಾರ್ಡ್’ (Inspire Award) ಸ್ಪರ್ಧೆಗೆ ಆಯ್ಕೆಯಾಗಿದ್ದು, ಇತ್ತೀಚೆಗಷ್ಟೇ ಜಪಾನ್ಗೆ ರವಾನೆಯಾಗಿದ್ದಾಳೆ. ಖಾನಾಪುರ ಬಸ್ ನಿಲ್ದಾಣಕ್ಕೆ ಆಗಮಿಸಿದ ವಿದ್ಯಾರ್ಥಿನಿಯನ್ನು ತಾಲೂಕು ಕ್ಷೇತ್ರ ಶಿಕ್ಷಣಾಧಿಕಾರಿ ಪಿ. ರಾಮಪ್ಪ, ವಿವಿಧ ಇಲಾಖಾಧಿಕಾರಿಗಳು ಹಾಗೂ ಪ್ರಾಥಮಿಕ ಶಿಕ್ಷಕರ ಸಂಘದ ಪದಾಧಿಕಾರಿಗಳು ಆತ್ಮೀಯವಾಗಿ ಸನ್ಮಾನಿಸಿ ಜಪಾನ್ ಪ್ರವಾಸಕ್ಕೆ ಬೀಳ್ಕೊಟ್ಟರು. ಅಕ್ಷರಾಳ ಈ ಜಾಗತಿಕ ಸಾಧನೆಯನ್ನು ಪ್ರೋತ್ಸಾಹಿಸಲು ಖಾನಾಪುರದ ಜನಪ್ರಿಯ ಶಾಸಕರು ಆಕೆಯ ಸಂಪೂರ್ಣ ಪ್ರವಾಸ ಹಾಗೂ ದೆಹಲಿಯ ವಾಸ್ತವ್ಯದ ವೆಚ್ಚವನ್ನು ವೈಯಕ್ತಿಕವಾಗಿ ಭರಿಸಿದ್ದಾರೆ. ಇದರೊಂದಿಗೆ ಕ್ಷೇತ್ರ ಶಿಕ್ಷಣಾಧಿಕಾರಿಗಳು 10,000 ರೂಪಾಯಿ ನಗದು ಪ್ರೋತ್ಸಾಹ ಧನ ನೀಡಿದ್ದು, ಶಿರೋಲಿ ಕೇಂದ್ರದ ಶಿಕ್ಷಕರು ಮತ್ತು ಶಿಕ್ಷಕರ ಸಂಘವು ಆರ್ಥಿಕ ನೆರವು ನೀಡಿ, ವಿದ್ಯಾರ್ಥಿನಿ ಜಾಗತಿಕ ಮಟ್ಟದಲ್ಲಿ ತಾಲೂಕಿನ ಕೀರ್ತಿ ಬೆಳಗಲಿ ಎಂದು ಶುಭ ಹಾರೈಸಿದ್ದಾರೆ.
