ರಾಯಬಾಗ ತಾಲೂಕಿನ ಕುಡಚಿ ಪಟ್ಟಣದಲ್ಲಿ ಕುಡಿಯುವ ನೀರಿಗಾಗಿ ಜನ ತೀವ್ರ ಸಂಕಷ್ಟ ಎದುರಿಸುತ್ತಿದ್ದಾರೆ. ಕಳೆದ ನಾಲ್ಕು ತಿಂಗಳಿಂದ ಹನಿ ನೀರಿಗೂ ಪರದಾಡುವ ಪರಿಸ್ಥಿತಿ ನಿರ್ಮಾಣವಾಗಿದೆ. ಬೇಸಿಗೆಯ ಈ ಕಠಿಣ ಸಮಯದಲ್ಲಿ ಜನರಿಗೆ ನೀರು ಕೊಡಬೇಕಾದ ಪುರಸಭೆ ಅಧಿಕಾರಿಗಳು ಮಾತ್ರ ಕುಂಭಕರ್ಣ ನಿದ್ರೆಗೆ ಜಾರಿದ್ದಾರೆ. ಇತ್ತ ಜನ ನೀರಿಲ್ಲದೆ ಪರದಾಡುತ್ತಿದ್ದರೆ, ಅತ್ತ ಪೈಪ್ ಲೀಕೇಜ್ನಿಂದ ಸಾವಿರಾರು ಲೀಟರ್ ನೀರು ರಸ್ತೆ ಪಾಲಾಗುತ್ತಿದೆ ಈ ಕುರಿತು ಒಂದು ವರದಿ ಇಲ್ಲಿದೆ ನೋಡಿ.


ಕಳೆದ ನಾಲ್ಕು ತಿಂಗಳಿಂದ ಇಲ್ಲಿನ ಜನ ನೀರಿಗಾಗಿ ತೀವ್ರ ಸಂಕಷ್ಟ ಅನುಭವಿಸುತ್ತಿದ್ದಾರೆ. ಮಳೆಯ ಕೊರತೆಯಿಂದಾಗಿ ಈಗಾಗಲೇ ರೈತರು, ಸಾರ್ವಜನಿಕರು ಆತಂಕದಲ್ಲಿದ್ದರೆ, ಇತ್ತ ಕುಡಿಯುವ ನೀರಿಗೂ ಗಂಭೀರ ಸಮಸ್ಯೆ ಎದುರಾಗಿದೆ.ಬೇಸಿಗೆಯಲ್ಲಿ ನೀರಿನ ತೊಂದರೆ ತಪ್ಪಿಸಲು ಗ್ರಾಮೀಣ ಪ್ರದೇಶದ ಹಾಳದಿಂದ ಬರೋಬ್ಬರಿ 3 ಕೋಟಿ 11 ಲಕ್ಷ ರೂಪಾಯಿ ವೆಚ್ಚದಲ್ಲಿ ಪರ್ಯಾಯ ಪೈಪ್ಲೈನ್ ನಿರ್ಮಿಸಲಾಗಿತ್ತು. ಆದರೆ ಅಧಿಕಾರಿಗಳ ಅವೈಜ್ಞಾನಿಕ ಯೋಜನೆ ಹಾಗೂ ತಾಂತ್ರಿಕ ದೋಷಗಳಿಂದಾಗಿ ಈ ಕೋಟ್ಯಂತರ ರೂಪಾಯಿ ಯೋಜನೆ ಸಾರ್ವಜನಿಕರಿಗೆ ಯಾವುದೇ ನಿರೀಕ್ಷಿತ ಫಲಿತಾಂಶ ನೀಡಿಲ್ಲ.

ಸದ್ಯ ಹಳೆಯ ಪೈಪ್ಲೈನ್ ಮೂಲಕವೇ ಪಟ್ಟಣಕ್ಕೆ ನೀರು ಸರಬರಾಜು ಮಾಡಲಾಗುತ್ತಿದೆ. ಅದು ಕೂಡ ಐದರಿಂದ ಆರು ದಿನಕ್ಕೊಮ್ಮೆ ಮಾತ್ರ ನೀರು ಬಿಡಲಾಗುತ್ತಿದ್ದು, ಕುಡಚಿ ಪಟ್ಟಣದ ಜನತೆ ಸಂಕಷ್ಟದ ಸುಳಿಯಲ್ಲಿ ಸಿಲುಕಿದ್ದಾರೆ. ಲಭ್ಯವಿರುವ ನೀರನ್ನೇ ಈ ರೀತಿಯಾಗಿ ವ್ಯರ್ಥಗೊಳಿಸುತ್ತಿರುವುದಕ್ಕೆ ಸಾರ್ವಜನಿಕರು ಆಕ್ರೋಶ ಹೊರಹಾಕುತ್ತಿದ್ದಾರೆ.
ಇನ್ನಾದರೂ ಸಂಬಂಧಪಟ್ಟ ಪುರಸಭೆ ಅಧಿಕಾರಿಗಳು ಎಚ್ಚೆತ್ತುಕೊಂಡು, ತಕ್ಷಣವೇ ಪೈಪ್ ಲೀಕೇಜ್ ಸಮಸ್ಯೆಯನ್ನು ಪರಿಹರಿಸಿ, ಪಟ್ಟಣದ ಜನರಿಗೆ ಸಮರ್ಪಕವಾಗಿ ನೀರು ಪೂರೈಸುತ್ತಾರಾ ಎಂಬುದನ್ನು ಕಾದು ನೋಡಬೇಕಾಗಿದೆ.
ಡಿ.ಕೆ.ಉಪ್ಪಾರ ಇನ್ ನ್ಯೂಸ್ ಚಿಕ್ಕೋಡಿ..
