ಮಧ್ಯವರ್ತಿ ಮಹಾರಾಷ್ಟ್ರ ಏಕೀಕರಣ ಸಮಿತಿ ನೇತೃತ್ವದಲ್ಲಿ ಜೂನ್ 22ರಂದು ಹಮ್ಮಿಕೊಳ್ಳಲಾಗಿರುವ ಕನ್ನಡ ಕಡ್ಡಾಯ ನೀತಿ ವಿರೋಧಿ ಮಹಾಮೋರ್ಚಾದ ಜಾಗೃತಿಗಾಗಿ ಯೆಳ್ಳೂರಿನಲ್ಲಿ ನೂರಾರು ಕಾರ್ಯಕರ್ತರು ಮಶಾಲು ಮೆರವಣಿಗೆ ನಡೆಸಿದ್ದಾರೆ.
ಯೆಳ್ಳೂರು ಎಂಇಎಸ್ ಸಮಿತಿಯ ನೂತನ ಅಧ್ಯಕ್ಷ ವಾಮನ ಪಾಟೀಲ್ ಹಾಗೂ ಮುಖಂಡರಾದ ರಮಾಕಾಂತ್ ಕೊಂಡೂಸ್ಕರ್, ಪ್ರಕಾಶ್ ಅಷ್ಟೇಕರ್ ನೇತೃತ್ವದಲ್ಲಿ ಮಶಾಲುಗಳನ್ನು ಬೆಳಗಿಸಿ ಶಿವಸೇನಾ ಚೌಕದಿಂದ ಮಹಾರಾಷ್ಟ್ರ ಚೌಕದವರೆಗೆ ಪ್ರತಿಭಟನಾ ರ್ಯಾಾಲಿ ಹಮ್ಮಿಕೊಳ್ಳಲಾಗಿತ್ತು.
ಈ ಸಂದರ್ಭದಲ್ಲಿ ಮಾತನಾಡಿದ ಮುಖಂಡರು, ಕರ್ನಾಟಕ ಸರ್ಕಾರ ಮರಾಠಿ ಭಾಷಿಕರ ಮೇಲೆ ಸಾಂವಿಧಾನಿಕ ದೌರ್ಜನ್ಯ ಎಸಗುತ್ತಿದೆ ಎಂದು ಆರೋಪಿಸಿದರಲ್ಲದೆ, ಬೆಳಗಾವಿ, ಕಾರವಾರ, ನಿಪಾಣಿ, ಬೀದರ್ ಮತ್ತು ಭಾಲ್ಕಿ ಭಾಗಗಳನ್ನು ಒಳಗೊಂಡ ಸಂಯುಕ್ತ ಮಹಾರಾಷ್ಟ್ರ ರಚನೆಯಾಗಬೇಕು ಎಂದು ಘೋಷಣೆಗಳನ್ನು ಕೂಗಿದರು.
ಈ ವೇಳೆ ಪ್ರಕಾಶ್ ಮಾಲುಚೆ, ಅನಿಲ್ ಹುಂದರೆ ಸೇರಿದಂತೆ ನೂರಾರು ಎಂಇಎಸ್ ಕಾರ್ಯಕರ್ತರು ಈ ಮೆರವಣಿಗೆಯಲ್ಲಿ ಪಾಲ್ಗೊಂಡಿದ್ದರು.

