State

ನನ್ನ ಮತ್ತು ಸಿದ್ದರಾಮಯ್ಯ ನಡುವೆ ಭಿನ್ನಾಭಿಪ್ರಾಯವಿಲ್ಲ,

Share

ರಾಜ್ಯ ಕಾಂಗ್ರೆಸ್‌ನಲ್ಲಿ ನಾಯಕತ್ವ ಬದಲಾವಣೆ ಬೆನ್ನಲ್ಲೇ ಕೇಳಿ ಬರುತ್ತಿರುವ ವದಂತಿಗಳಿಗೆ ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೊಳಿ ಅವರು ತೆರೆ ಎಳೆದಿದ್ದಾರೆ.”ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ನನ್ನ ನಡುವೆ ಯಾವುದೇ ಭಿನ್ನಾಭಿಪ್ರಾಯವಿಲ್ಲ” ಎಂದು ಬೆಂಗಳೂರಿನಲ್ಲಿ ಮಾಧ್ಯಮಗಳೊಂದಿಗೆ ಮಾತನಾಡುವಾಗ ಅವರು ಸ್ಪಷ್ಟಪಡಿಸಿದ್ದಾರೆ.

ತಮ್ಮ ಮತ್ತು ಸಿದ್ದರಾಮಯ್ಯ ಅವರ ನಡುವಿನ ಸಂಬಂಧದ ಕುರಿತು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿರುವ ಸುದ್ದಿಗಳ ಬಗ್ಗೆ ಪ್ರತಿಕ್ರಿಯಿಸಿದ ಸಚಿವರು, “ನಮ್ಮ ನಡುವೆ ಗೊಂದಲ ಸೃಷ್ಟಿಸಲು ಕೆಲವು ಐಟಿ ಸೆಲ್‌ಗಳವರು ಇಲ್ಲದ ಅಪಪ್ರಚಾರ ಮಾಡುತ್ತಿದ್ದಾರೆ. ನಮಗೆ ಪರಿಚಯವಿರುವ ಐಟಿ ಸೆಲ್‌ಗಳೇ ಈ ವಿಚಾರದಲ್ಲಿ ಹೆಚ್ಚಿನ ಪ್ರಚಾರ ನೀಡಿವೆ. ಆದರೆ, ಮೊದಲಿನಿಂದಲೂ ನಾನು ಹೇಳುತ್ತಿರುವಂತೆ ನಮ್ಮ ನಡುವೆ ಅತ್ಯುತ್ತಮ ಬಾಂಧವ್ಯವಿದ್ದು, ಯಾವುದೇ ಭಿನ್ನಾಭಿಪ್ರಾಯಗಳಿಲ್ಲ. ಈ ಕುರಿತಾದ ಚರ್ಚೆಗಳು ಸಂಪೂರ್ಣ ಅನಾವಶ್ಯಕ” ಎಂದಿದ್ದಾರೆ.

ಅಹಿಂದ ಸಂಘಟನೆ ಮುಂದುವರಿಕೆ: ರಾಜ್ಯದಲ್ಲಿ ‘ಅಹಿಂದ’ (ಅಲ್ಪಸಂಖ್ಯಾತ, ಹಿಂದುಳಿದ ಮತ್ತು ದಲಿತ ವರ್ಗಗಳು) ನಾಯಕತ್ವದ ಕುರಿತಾದ ಪ್ರಶ್ನೆಗೆ ಉತ್ತರಿಸಿದ ಜಾರಕಿಹೊಳಿ, “ಅಹಿಂದ ಸಂಘಟನೆ ಸದಾ ಇದ್ದೇ ಇರುತ್ತದೆ. ಸಿದ್ದರಾಮಯ್ಯ ಅವರ ಮಾರ್ಗದರ್ಶನದಲ್ಲೇ ಈ ಸಂಘಟನೆಯನ್ನು ಹಾಗೂ ಅದರ ಧ್ವಜವನ್ನು ನಾನೇ ಮುಂದೆ ಕೊಂಡೊಯ್ಯಲಿದ್ದೇನೆ” ಎಂದು ದೃಢವಾಗಿ ಹೇಳಿದ್ದಾರೆ. ಅಹಿಂದ ವರ್ಗದಲ್ಲಿ ನೂರಾರು ಜಾತಿಗಳಿದ್ದು, ಅವರ ಹಕ್ಕುಗಳಿಗಾಗಿ ಹೊಸ ನಾಯಕತ್ವದ ಅಗತ್ಯವಿದೆ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.

ಸ್ಥಾನಮಾನಕ್ಕೆ ಸದ್ಯ ಆತುರವಿಲ್ಲ: ಕೆಪಿಸಿಸಿ ಅಧ್ಯಕ್ಷ ಸ್ಥಾನ ಅಥವಾ ಇತರ ಪ್ರಮುಖ ಜವಾಬ್ದಾರಿಗಳ ಕುರಿತು ಮಾತನಾಡಿದ ಸಚಿವರು, “ಸದ್ಯ ನನಗೆ ಸಿಕ್ಕಿರುವ ಸ್ಥಾನಕ್ಕೆ ನಾನು ತೃಪ್ತನಾಗಿದ್ದೇನೆ. ಕಾಂಗ್ರೆಸ್ ಪಕ್ಷದಲ್ಲಿ ತಾಳ್ಮೆಯಿಂದ ಕಾಯುವುದು ಬಹಳ ಮುಖ್ಯ. ಕಾಯ್ದವರಿಗೆ ಸೂಕ್ತ ಸಮಯದಲ್ಲಿ ಎಲ್ಲವೂ ಸಿಗುತ್ತದೆ. ನಾನು ಕೂಡ ಮುಂದಿನ ದಿನಗಳವರೆಗೆ ತಾಳ್ಮೆಯಿಂದ ಕಾಯಲು ಸಿದ್ಧನಿದ್ದೇನೆ” ಎಂದು ತಿಳಿಸಿದ್ದಾರೆ.

ಧರಂ ಸಿಂಗ್ ಕಾಲದಲ್ಲೇ ಕ್ರೀಡಾ ಖಾತೆ ಕೇಳಿದ್ದೆ, ಈಗ ಕೊಟ್ಟಿದ್ದರೂ ಕ್ರಾಂತಿ ಮಾಡುತ್ತಿದ್ದೆ: ಈ ಹಿಂದೆ ಧರಂ ಸಿಂಗ್ ಮುಖ್ಯಮಂತ್ರಿಯಾಗಿದ್ದ ಅವಧಿಯಲ್ಲೇ ನಾನು ಕ್ರೀಡಾ ಖಾತೆ ಕೇಳಿದ್ದೆ” ಎಂದು ಸಚಿವ ಸತೀಶ್‌ ಜಾರಕಿಹೊಳಿ ಅವರು ಸ್ಮರಿಸಿದ್ದಾರೆ.

ತಮ್ಮ ಆರಂಭಿಕ ರಾಜಕೀಯ ದಿನಗಳನ್ನು ನೆನೆದ ಸಚಿವರು, “2004ರಲ್ಲಿ ಎನ್. ಧರಂ ಸಿಂಗ್ ಅವರ ನೇತೃತ್ವದ ಸಮ್ಮಿಶ್ರ ಸರ್ಕಾರವಿದ್ದಾಗ ನಾನು ಸಚಿವನಾಗಿ ಪ್ರಮಾಣ ವಚನ ಸ್ವೀಕರಿಸಿದ್ದೆ. ಆ ಸಮಯದಲ್ಲಿ ನನಗೆ ಯುವ ಸಬಲೀಕರಣ ಮತ್ತು ಕ್ರೀಡಾ ಖಾತೆ ನೀಡುವಂತೆ ಹಿರಿಯರಲ್ಲಿ ಮನವಿ ಮಾಡಿದ್ದೆ. ಆದರೆ ಕೆಲವು ರಾಜಕೀಯ ಲೆಕ್ಕಾಚಾರಗಳಿಂದಾಗಿ ನನಗೆ ಜವಳಿ ಖಾತೆಯ ಜವಾಬ್ದಾರಿ ಸಿಕ್ಕಿತು. ಅಂದಿನಿಂದಲೂ ನನಗೆ ಕ್ರೀಡಾ ಇಲಾಖೆಯ ಮೇಲೆ ವಿಶೇಷ ಒಲವಿತ್ತು” ಎಂದು ತಿಳಿಸಿದರು.

ಈಗ ಕೊಟ್ಟಿದ್ದರೂ ಕ್ರಾಂತಿ ಮಾಡುತ್ತಿದ್ದೆ: ಪ್ರಸ್ತುತ ತಮಗೆ ನೀಡಿರುವ ಲೋಕೋಪಯೋಗಿ ಖಾತೆಯ ಬಗ್ಗೆ ತೃಪ್ತಿಯಿದೆ ಎಂದು ಹೇಳುತ್ತಲೇ ಕ್ರೀಡಾ ಕ್ಷೇತ್ರದ ಸುಧಾರಣೆಯ ಬಗ್ಗೆ ಮಾತನಾಡಿದ ಸತೀಶ್‌ ಜಾರಕಿಹೊಳಿ ಅವರು, “ಈಗಿನ ಸರ್ಕಾರದಲ್ಲೂ ಒಂದು ವೇಳೆ ನನಗೆ ಕ್ರೀಡಾ ಖಾತೆಯನ್ನು ವಹಿಸಿಕೊಟ್ಟಿದ್ದರೆ, ನಾನು ಇಲಾಖೆಯಲ್ಲಿ ದೊಡ್ಡ ಕ್ರಾಂತಿಯನ್ನೇ ಮಾಡುತ್ತಿದ್ದೆ. ಗ್ರಾಮೀಣ ಭಾಗದ ಪ್ರತಿಭೆಗಳನ್ನು ಗುರುತಿಸಿ ಒಲಿಂಪಿಕ್ಸ್ ಮಟ್ಟಕ್ಕೆ ಕೊಂಡೊಯ್ಯುವ ಬಲಿಷ್ಠ ಯೋಜನೆಗಳನ್ನು ಜಾರಿಗೆ ತರುತ್ತಿದ್ದೆ” ಎಂದರು.

ಕ್ರೀಡೆಯಲ್ಲಿ ಸಕ್ರಿಯವಾಗಿರುವ ಸಚಿವರು: ಸತೀಶ್ ಜಾರಕಿಹೊಳಿ ಅವರು ಕೇವಲ ರಾಜಕಾರಣಿಯಷ್ಟೇ ಅಲ್ಲದೆ, ವೈಯಕ್ತಿಕವಾಗಿಯೂ ಕ್ರೀಡಾ ಚಟುವಟಿಕೆಗಳಲ್ಲಿ ಹೆಚ್ಚು ಗುರುತಿಸಿಕೊಂಡಿದ್ದಾರೆ. ತಮ್ಮ ‘ಸತೀಶ್ ಶುಗರ್ಸ್’ ಸಂಸ್ಥೆಯ ಮೂಲಕ ಪ್ರತಿ ವರ್ಷ ರಾಜ್ಯ ಹಾಗೂ ರಾಷ್ಟ್ರ ಮಟ್ಟದ ಬಾಡಿ ಬಿಲ್ಡಿಂಗ್ (ದೇಹದಾರ್ಢ್ಯ) ಸ್ಪರ್ಧೆಗಳು, ಮ್ಯಾರಾಥಾನ್ ಹಾಗೂ ಗ್ರಾಮೀಣ ಕ್ರೀಡಾಕೂಟಗಳನ್ನು ಆಯೋಜಿಸುತ್ತಾ ಬಂದಿರುವುದನ್ನು ಇಲ್ಲಿ ಸ್ಮರಿಸಬಹುದು.

Tags:

error: Content is protected !!