ಮಾಜಿ ಕಾರ್ಮಿಕ ಸಚಿವ ಹಾಗೂ ಧಾರವಾಡ ಜಿಲ್ಲಾ ಉಸ್ತುವಾರಿ ಸಚಿವರಾಗಿದ್ದ ಸಂತೋಷ್ ಲಾಡ್ ಅವರಿಗೆ ನೂತನ ಸಿಎಂ ಡಿಕೆ ಶಿವಕುಮಾರ್ ಸಚಿವ ಸಂಪುಟದಲ್ಲಿ ಡಿಸಿಎಂ ಹಾಗೂ ಮಂತ್ರಿ ಸ್ಥಾನ ನೀಡಬೇಕು ಎಂದು ಆಗ್ರಹಿಸಿ, ಧಾರವಾಡದಲ್ಲಿ ಲಾಡ್ ಅಭಿಮಾನಿಗಳು ಹಾಗೂ ಕಾಂಗ್ರೆಸ್ ಕಾರ್ಯಕರ್ತರು ಬೀದಿಗೆ ಇಳಿದು ಪ್ರತಿಭಟನೆ ನಡೆಸಿ ಆಕ್ರೋಶ ಹೊರಹಾಕಿದರು.


ಧಾರವಾಡ ಜಿಲ್ಲಾಧಿಕಾರಿ ಕಚೇರಿ ಮುಂಭಾಗದಲ್ಲಿ ಪ್ರತಿಭಟನೆ ಮಾಡಿದ ನೂರಾರು ಲಾಡ್ ಅಭಿಮಾನಿಗಳು ಹಾಗೂ ಕಾರ್ಯಕರ್ತರು, ಸಚಿವ ಸ್ಥಾನ ಜತೆಗೆ ಡಿಸಿಎಂ ಸ್ಥಾನ ನೀಡಲು ಆಗ್ರಹಿಸಿ ಧಿಕ್ಕಾರ ಕೂಗಿ ತಮ್ಮ ಆಕ್ರೋಶ ವ್ಯಕ್ತಪಡಿಸಿದರು. ಈ ಹಿಂದೆ ಮಾಜಿ ಸಿಎಂ ಸಿದ್ದರಾಮಯ್ಯ ಕ್ಯಾಬಿನೆಟನಲ್ಲಿ ಎರಡು ಬಾರಿ ಮಂತ್ರಿ ಸ್ಥಾನ ನೀಡಲಾಗಿದೆ. ಆದರೆ ಈಗ ನಾಯಕತ್ವ ಬದಲಾವಣೆ ನಂತರ ನೂತನ ಸಿಎಂ ಆಗಿ ಡಿಕೆಶಿಯವರು ಅಧಿಕಾರವಹಿಸಿಕೊಂಡಿದ್ದಾರೆ. ಆದರೆ ಮೊದಲ 13 ಜನ ಪಟ್ಟಿಯಲ್ಲಿ ಸಂತೋಷ ಲಾಡ್ ಹೆಸರು ಕೈ ಬಿಡಲಾಗಿದೆ. ಇದೂ ಕಲಘಟಗಿ ಮತಕ್ಷೇತ್ರದ ಕಾಂಗ್ರೆಸ್ ಕಾರ್ಯಕರ್ತರು ಸೇರಿಲಾಡ್ ಅಭಿಮಾನಿಗಳಿಗೆ ತೀವ್ರ ನೋವುಂಟು ಮಾಡಿದೆ. ಹಾಗಾಗಿ ನೂತನ ಸಿಎಂ ಡಿಕೆಶಿ ಕ್ಯಾಬಿನೆಟನಲ್ಲಿ ಲಾಡ್ ಅವರಿಗೆ ಡಿಸಿಎಂ ಸ್ಥಾನದ ಜತೆಗೆ ಮಂತ್ರಿ ಸ್ಥಾನವನ್ನು ಪಕ್ಷದ ರಾಜ್ಯ ಹಾಗೂ ದೆಹಲಿ ನಾಯಕರು ನೀಡಬೇಕು ಎಂದು ಆಗ್ರಹಿಸಿದರು. ಒಂದು ವೇಳೆ ನೀಡದಿದ್ದಲ್ಲಿ ಪಕ್ಷಕ್ಕೆ ದೊಡ್ಡ ಮಟ್ಟದ ಹಾನಿ ಧಾರವಾಡ ಭಾಗದಲ್ಲಿ ಆಗಲಿದೆ ಎಂದು ಎಚ್ಚರಿಕೆ ನೀಡಿದರು.

