State

ಸಂಪುಟ ವಿಸ್ತರಣೆ ಕಿಚ್ಚು; ಸಿದ್ದು-ಡಿಕೆಶಿ ನಡುವೆ ‘ಮಂತ್ರಿ’ ಸ್ಥಾನದ ಹಗ್ಗಜಗ್ಗಾಟ!

Share

ರಾಜ್ಯ ರಾಜಕಾರಣದಲ್ಲಿ ಸಂಪುಟ ವಿಸ್ತರಣೆಯ ಕಸರತ್ತು ತೀವ್ರಗೊಂಡಿದ್ದು, ಬೆಳಗಾವಿ ಜಿಲ್ಲೆಗೆ ಸಿಗಲಿರುವ ಒಂದು ಸ್ಥಾನಕ್ಕಾಗಿ ಈಗ ಮೂವರು ಪ್ರಭಾವಿ ನಾಯಕರ ನಡುವೆ ಜಿದ್ದಾಜಿದ್ದಿ ಶುರುವಾಗಿದೆ. ಮಾಜಿ ಸಿಎಂ ಸಿದ್ದರಾಮಯ್ಯ ಹಾಗೂ ಸಿಎಂ ಡಿಕೆ ಶಿವಕುಮಾರ್ ಅವರ ನಡುವೆ ತಮ್ಮ ಆಪ್ತರಿಗೆ ಸ್ಥಾನ ಕೊಡಿಸುವ ವಿಚಾರದಲ್ಲಿ ಶೀತಲ ಸಮರ ಏರ್ಪಟ್ಟಿದ್ದು, ಕುಂದಾನಗರಿ ಪಾಲಿಟಿಕ್ಸ್ ಈಗ ದೆಹಲಿ ಮೆಟ್ಟಿಲೇರಿದೆ.

ಬೆಳಗಾವಿ ಜಿಲ್ಲೆಗೆ ಈ ಬಾರಿ ಸಂಪುಟ ವಿಸ್ತರಣೆಯಲ್ಲಿ ಇನ್ನೊಂದು ಸಚಿವ ಸ್ಥಾನ ಸಿಗುವುದು ಬಹುತೇಕ ಖಚಿತವಾಗಿದ್ದು, ಆ ಒಂದು ಸ್ಥಾನಕ್ಕಾಗಿ ಮೂವರು ಶಾಸಕರ ನಡುವೆ ತೀವ್ರ ಪೈಪೋಟಿ ಆರಂಭವಾಗಿದೆ. ರಾಮದುರ್ಗ ಶಾಸಕ, ತಮ್ಮ ಅತ್ಯಾಪ್ತ ಅಶೋಕ ಪಟ್ಟಣ್‌ ಅವರಿಗೆ ಮಂತ್ರಿ ಸ್ಥಾನ ನೀಡಲೇಬೇಕೆಂದು ಸಿದ್ದರಾಮಯ್ಯ ಅವರು ಸಿಎಂ ಹಾಗೂ ರಾಜ್ಯ ಉಸ್ತುವಾರಿ ಸುರ್ಜೇವಾಲಾ ಮೇಲೆ ಒತ್ತಡ ಹೇರುತ್ತಿದ್ದಾರೆ. ಸಿದ್ದರಾಮಯ್ಯ ಅವರ ಈ ಪಟ್ಟಿನಿಂದಾಗಿ ಸಿಎಂ ಡಿಕೆ ಶಿವಕುಮಾರ್ ಅವರು ಇಕ್ಕಟ್ಟಿಗೆ ಸಿಲುಕಿದ್ದು, ಹೈಕಮಾಂಡ್ ಮಟ್ಟದಲ್ಲಿ ಯಾರು ಮೇಲುಗೈ ಸಾಧಿಸುತ್ತಾರೆ ಎಂಬ ಕುತೂಹಲ ಮೂಡಿದೆ.

ಮತ್ತೊಂದೆಡೆ ಸಿಎಂ ಡಿಕೆ ಶಿವಕುಮಾರ್ ಅವರು ತಮ್ಮ ಆಪ್ತರಾದ ಲಕ್ಷ್ಮಿ ಹೆಬ್ಬಾಳ್ಕರ್ ಅಥವಾ ಲಕ್ಷ್ಮಣ ಸವದಿ ಅವರಿಗೆ ಅವಕಾಶ ನೀಡಲು ಒಲವು ವ್ಯಕ್ತಪಡಿಸಿದ್ದಾರೆ. ಮಹಿಳಾ ಹಾಗೂ ಲಿಂಗಾಯತ ಕೋಟಾದಡಿ ಸ್ಥಾನ ಗಿಟ್ಟಿಸಲು ಹೆಬ್ಬಾಳ್ಕರ್ ಈಗಾಗಲೇ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರನ್ನು ಭೇಟಿ ಮಾಡಿ ಲಾಬಿ ನಡೆಸುತ್ತಿದ್ದಾರೆ. ಆದರೆ, ಕೊಟ್ಟ ಮಾತಿನಂತೆ ಈ ಬಾರಿಯಾದರೂ ತಮಗೆ ಸಚಿವ ಸ್ಥಾನ ನೀಡಬೇಕೆಂದು ಲಕ್ಷ್ಮಣ ಸವದಿ ಕೂಡ ಪಟ್ಟು ಹಿಡಿದಿದ್ದು, ಡಿಕೆಶಿ ಹಾಗೂ ಸುರ್ಜೇವಾಲಾ ಮೇಲೆ ಒತ್ತಡ ತರುತ್ತಿದ್ದಾರೆ. ಒಟ್ಟಿನಲ್ಲಿ ಬೆಳಗಾವಿಯ ಈ ‘ಮಿನಿಸ್ಟರ್’ ಗಾದಿ ಯಾರ ಪಾಲಾಗಲಿದೆ ಎಂಬುದು ಇಡೀ ರಾಜ್ಯದ ಗಮನ ಸೆಳೆದಿದೆ.

Tags:

error: Content is protected !!