ತಮ್ಮ ಸಮಾಜದವರಿಂದ ಸಿಗುವ, ಸಹಾಯ ಮತ್ತು ಸಹಕಾರದ ಸದುಪಯೋಗಪಡಿಸಿಕೊಂಡು ಪ್ರತಿಭಾವಂತ ಬಡ ವಿದ್ಯಾರ್ಥಿಗಳು ಉನ್ನತ ವ್ಯಾಸಂಗ ಪೂರ್ಣಗೊಳಿಸುವ ಜತಗೆ ಭವಿಷಯದಲ್ಲಿ ಇತರರಿಗೂ ಸಹಾಯವಾಗುವ ರೀತಿಯಲ್ಲಿ ಬೆಳೆಯಬೇಕು ಎಂದು ಹೆಸ್ಕಾಂ ನಗರ ವಿಭಾಗದ ನೂತನ ಕಾರ್ಯನಿರ್ವಾಹಕ ಇಂಜಿನಿಯರ್ ಅರವಿಂದ ಗದಗಕರ ಹೇಳಿದರು.


ವಿಶ್ವಕರ್ಮ ವಿದ್ಯಾವರ್ಧಕ ಸಂಘದಿಂದ ಬೆಳಗಾವಿ ಕಾಳಿ ಅಂಬ್ರಾಯಿಯಲ್ಲಿನ ಸಂಘದ ಸಭಾಭವನದಲ್ಲಿ ಮಂಗಳವಾರ ಜರುಗಿದ ಪಾಲಕರಿಲ್ಲದ ಮತ್ತು ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಪ್ರೋತ್ಸಾಹಧನ ಹಾಗೂ ಅಗತ್ಯ ಪುಸ್ತಕ ವಿತರಣೆ ಸಮಾರಂಭದಲ್ಲಿ ಸನ್ಮಾನ ಸ್ವೀಕರಿಸಿ ಮಾತನಾಡಿದ ಅವರು, ಬೆಳಗಾವಿಯಂತಹ ದೊಡ್ಡ ಜಿಲ್ಲೆಯಲ್ಲಿ ವಿಶ್ವಕರ್ಮ ಸಮಾಜದ ಬಡ, ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಯಾವುದೇ ತೊಂದರೆಯಾಗದಂತೆ ವಿಶ್ವಕರ್ಮ ವಿದ್ಯಾವರ್ಧಕ ಸಂಘ ಉತ್ತಮ ಕಾರ್ಯ ಮಾಡುತ್ತಿದೆ ಎಂದು ಶ್ಲಾಘಿಸಿದರು.


ಸಂಘದ ಅಧ್ಯಕ್ಷ ಪ್ರಭಾಕರ ಬಡಿಗೇರ ಮಾತನಾಡಿ, ಪ್ರತಿ ವರ್ಷವೂ ಪ್ರತಿಭಾ ಪುರಸ್ಕಾರದ ಜತೆಗೆ, ಪಾಲಕರಿಲ್ಲದ ಮತ್ತು ಬಡ ವಿದ್ಯಾರ್ಥಿಗಳ ಓದಿಗೆ ಸಹಾಯಧನ ನೀಡುತ್ತ ಬಂದಿದ್ದೇವೆ. ಈ ಸಲವೂ ಅರ್ಹ ವಿದ್ಯಾರ್ಥಿಗಳು ಅರ್ಜಿ ಸಲ್ಲಿಸುವಂತೆ ಕೇಳಿದ್ದೇವು. ನಿರೀಕ್ಷೆಗೂ ಮೀರಿ ವಿದ್ಯಾರ್ಥಿಗಳು ಸಹಾಯ ಯಾಚಿಸಿದ್ದರು. ಹೀಗಾಗಿ, ಸಂಘದ ಕಾರ್ಯದ ಜತೆಗೆ ಅನೇಕ ದಾನಿಗಳು ಸಹ ಕೈ ಜೋಡಿಸಿ ಈ ಕಾರ್ಯವನ್ನು ಯಶಸ್ವಿಗೊಳಿಸಿದ್ದಾರೆ. ಸಂಘದ ಸಭಾಭವನ ಸದಾಕಾಲ ಚಟುವಟಿಕೆಯಿಂದಿರಬೇಕೆಂಬ ಉದ್ದೇಶದಿಂದ ಶಟಲ್ ಬಾಡ್ಮಿಂಟನ್ ಕೋಟ್ ಸಹ ಆರಂಭಿಸುತ್ತಿದ್ದೇವೆ ಎಂದು ಹೇಳಿದರು.
ಸಮಾರಂಭಕ್ಕೂ ಮುಂಚೆ ಮಹಿಳಾ ಪದಾಧಿಕಾರಿಗಳಿಂದ ಅಧಿಕ ಮಾಸದ ಪ್ರಯುಕ್ತ ಸಾಮೂಹಿಕ ವಿಷ್ಣು ಸಹಸ್ರನಾಮ ಮತ್ತು ಲಲಿತಾ ಸಹಸ್ರನಾಮ ಪಾರಾಯಣ ಹಾಗೂ ಉಡಿ ತುಂಬುವ ಕಾರ್ಯಕ್ರಮ ಜರುಗಿತು.

ರಾಜೀವ ಪಂಡಿತ, ದತ್ತಾ ಅಂಬೇವಾಡಿಕರ, ಮೌನೇಶ ದೇಶನೂರ, ಪ್ರದೀಪ ಪತ್ತಾರ, ಮೋಹನ ಬಡಿಗೇರ, ಎಂ.ಕೆ.ಬಡಿಗೇರ, ಮುರಳಿ ಸುತಾರ, ಪತ್ರಿಕಾ ಛಾಯಾಗ್ರಾಹಕ ಪಿ.ಕೆ.ಬಡಿಗೇರ, ಪತ್ರಕರ್ತ ಡಿ.ವಿ.ಕಮ್ಮಾರ ವೇದಿಕೆಯಲ್ಲಿದ್ದರು.
ಜಿ.ಎಸ್.ಸೋನಾರ ಸ್ವಾಗತಿಸಿದರು. ರಾಮಕೃಷ್ಣ ಬಡಿಗೇರ ಕಾರ್ಯಕ್ರಮ ನಿರೂಪಿಸಿದರು. ಗೋಪಾಲ ಪಂಚಾಳ ವಂದಿಸಿದರು.
