ಒಂದೆಡೆ ಜನ ಕುಡಿಯುವ ನೀರಿಲ್ಲದೆ ಪರದಾಡುತ್ತಿದ್ದರೆ, ಮತ್ತೊಂದೆಡೆ ಅಧಿಕಾರಿಗಳ ಬೇಜವಾಬ್ದಾರಿತನದಿಂದಾಗಿ ನೂರಾರು ಲೀಟರ್ ನೀರು ಗಟಾರು ಪಾಲಾಗುತ್ತಿರುವ ಘಟನೆ ಬೆಳಗಾವಿಯಲ್ಲಿ ಬೆಳಕಿಗೆ ಬಂದಿದೆ. ಸಂಬಂಧಿಸಿದ ಅಧಿಕಾರಿಗಳ ನಿರ್ಲಕ್ಷ್ಯದ ವಿರುದ್ಧ ಸಾರ್ವಜನಿಕರು ತೀವ್ರ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.


ಬೆಳಗಾವಿಯ ವಡಗಾಂವ್ನ ಪಾಟೀಲ ಗಲ್ಲಿ (ಮಠ) ಪ್ರದೇಶದಲ್ಲಿ ಕಳೆದ ಜೂನ್ 7 ರಿಂದ ನಿರಂತರವಾಗಿ ಕುಡಿಯುವ ನೀರು ಪೋಲಾಗಿ ಚರಂಡಿಗೆ ಸೇರುತ್ತಿದ್ದರೂ, ಸಂಬಂಧಪಟ್ಟ ಅಧಿಕಾರಿಗಳು ಮಾತ್ರ ಕಣ್ಣು ಮುಚ್ಚಿ ಕುಳಿತಿದ್ದಾರೆ. ನಗರದ ಹಲವು ವಾರ್ಡ್ಗಳಲ್ಲಿ ಜನ ಒಂದು ಕೊಡ ನೀರಿಗಾಗಿ ಬಡಿದಾಡುತ್ತಿರುವ ಇಂತಹ ಕಠಿಣ ಪರಿಸ್ಥಿತಿಯಲ್ಲಿ, ಇಲ್ಲಿ ಎಲ್ ಆಂಡ್ ಟಿ ಕಂಪನಿಯ ತೀವ್ರ ನಿಷ್ಕಾಳಜಿಯಿಂದಾಗಿ ಅಮೂಲ್ಯವಾದ ನೀರು ಪೋಲಾಗುತ್ತಿದೆ. ಜೂನ್ 7 ರಿಂದಲೇ ಈ ಸಮಸ್ಯೆ ಆರಂಭವಾಗಿದ್ದರೂ ಇತ್ತ ತಿರುಗಿಯೂ ನೋಡದ ಅಧಿಕಾರಿಗಳ ನಡೆಗೆ ಸ್ಥಳೀಯ ನಿವಾಸಿಗಳು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಇನ್ನಾದರೂ ಸಂಬಂಧಪಟ್ಟ ಅಧಿಕಾರಿಗಳಿಗೆ ಕಾಳಜಿ ಇದ್ದರೆ, ತಕ್ಷಣವೇ ಸ್ಥಳಕ್ಕೆ ಭೇಟಿ ನೀಡಿ ನೀರು ಹಾಳಾಗುವುದನ್ನು ತಡೆದು, ಬೇಜವಾಬ್ದಾರಿ ವಹಿಸಿದವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕೆಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.

