ವರ್ಷಗಳಿಂದ ಹಳ್ಳ-ಕೊಳ್ಳ ಬಿದ್ದು ಹದಗೆಟ್ಟಿದ್ದ ರಸ್ತೆಗಳಿಗೆ ಕೊನೆಗೂ ಮುಕ್ತಿ ಸಿಕ್ಕಿದೆ. ಬೆಳಗಾವಿ ಉತ್ತರ ಮತಕ್ಷೇತ್ರದ ಅಮನ್ ನಗರದ ಎಚ್ಕೆಎಂಸಿ ಕಾಲೋನಿಯ ನಿವಾಸಿಗಳ ದಶಕಗಳ ಕನಸನ್ನು ಶಾಸಕ ಆಸೀಫ್ ಸೇಠ್ ನನಸು ಮಾಡಿದ್ದಾರೆ. ಸುಸಜ್ಜಿತ ರಸ್ತೆ ನಿರ್ಮಾಣದಿಂದಾಗಿ ಸ್ಥಳೀಯರು ಈಗ ನಿಟ್ಟುಸಿರು ಬಿಡುವಂತಾಗಿದೆ.


ಬೆಳಗಾವಿಯ ಅಮನ್ ನಗರದ ಎಚ್ಕೆಎಂಸಿ ಕಾಲೋನಿಯಲ್ಲಿ ಕೈಗೊಳ್ಳಲಾದ ರಸ್ತೆಗಳ ಅಭಿವೃದ್ಧಿ ಕಾರ್ಯವು ಸಾರ್ವಜನಿಕರ ಮೆಚ್ಚುಗೆಗೆ ಪಾತ್ರವಾಗಿದೆ. ಈ ಹಿಂದೆ ಇಲ್ಲಿನ ರಸ್ತೆಗಳು ತೀವ್ರವಾಗಿ ಹಾನಿಗೊಳಗಾಗಿದ್ದು, ಸಂಚಾರಕ್ಕೆ ಅಯೋಗ್ಯವಾಗಿದ್ದವು. ಈ ಸಮಸ್ಯೆಯಿಂದಾಗಿ ಸ್ಥಳೀಯರು ಮತ್ತು ವಾಹನ ಸವಾರರು ಪ್ರತಿದಿನ ತೀವ್ರ ತೊಂದರೆ ಅನುಭವಿಸುತ್ತಿದ್ದರು. ಆದರೆ, ಶಾಸಕ ಆಸಿಫ್ (ರಾಜು) ಸೇಠ್ ಅವರ ನೇತೃತ್ವದಲ್ಲಿ ನಡೆದ ವಿಶೇಷ ಮೂಲಸೌಕರ್ಯ ಸುಧಾರಣಾ ಯೋಜನೆಯಡಿ ಈಗ ರಸ್ತೆಗಳ ಚಿತ್ರಣವೇ ಬದಲಾಗಿದೆ. ನೂತನವಾಗಿ ನಿರ್ಮಾಣಗೊಂಡಿರುವ ಈ ರಸ್ತೆಗಳು ಸುಗಮ ಸಾರಿಗೆ, ಸುರಕ್ಷಿತ ಸಂಚಾರ ಹಾಗೂ ಕಾಲೋನಿಯ ಒಟ್ಟಾರೆ ರೂಪುರೇಷೆಯನ್ನು ಬದಲಾಯಿಸುವಲ್ಲಿ ಪ್ರಮುಖ ಪಾತ್ರ ವಹಿಸಿವೆ.


ಈ ಕಾಮಗಾರಿಗಳು ಆರಂಭವಾಗುವ ಮುನ್ನವೇ ಯುವ ನಾಯಕ ಅಮಾನ್ ಸೇಠ್ ಅವರು ಖುದ್ದಾಗಿ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದರು. ಸ್ಥಳೀಯ ನಿವಾಸಿಗಳೊಂದಿಗೆ ಸುದೀರ್ಘ ಚರ್ಚೆ ನಡೆಸಿ, ಅವರ ದೂರು ಹಾಗೂ ರಸ್ತೆಗಳ ವಾಸ್ತವ ಸ್ಥಿತಿಯನ್ನು ಮನಗಂಡಿದ್ದರು. ನಾಗರಿಕರ ಬೇಡಿಕೆಗೆ ತಕ್ಷಣ ಸ್ಪಂದಿಸಿ, ದೀರ್ಘಕಾಲದ ನಾಗರಿಕ ಸಮಸ್ಯೆಗಳಿಗೆ ಶಾಶ್ವತ ಪರಿಹಾರ ಕಂಡುಕೊಳ್ಳುವ ನಿಟ್ಟಿನಲ್ಲಿ ಈ ಅಭಿವೃದ್ಧಿ ಕಾಮಗಾರಿಗಳನ್ನು ಕೈಗೆತ್ತಿಕೊಳ್ಳಲಾಯಿತು. ಮಳೆಗಾಲದಲ್ಲಿ ಎದುರಾಗುತ್ತಿದ್ದ ದೊಡ್ಡ ಗಂಡಾಂತರದಿಂದ ಈಗ ಮುಕ್ತಿ ಸಿಕ್ಕಿದೆ ಎಂದು ನಿವಾಸಿಗಳು ಶಾಸಕರಿಗೆ ಧನ್ಯವಾದ ಅರ್ಪಿಸಿದ್ದಾರೆ. ಈ ಯೋಜನೆಯು ಕ್ಷೇತ್ರದ ಸಮಗ್ರ ಮತ್ತು ಸಮತೋಲಿತ ಅಭಿವೃದ್ಧಿಗೆ ಸಾಕ್ಷಿಯಾಗಿದೆ.

