Vijaypura

ನಾಗಠಾಣ ಶಾಲೆಯ ಹಳೆಯ ವಿದ್ಯಾರ್ಥಿಗಳಿಂದ ಗುರುವಂದನಾ ಕಾರ್ಯಕ್ರಮ

Share

ವಿಜಯಪುರ: ಅಕ್ಷರ ಕಲಿಸಿದ ಗುರುಗಳಿಗೆ ವಂದನೆ ಸಲ್ಲಿಸಬೇಕು ಜೊತೆಗೆ ಹಳೆಯ ಶಾಲೆಯ ಸ್ನೇಹಿತರನ್ನು ಭೇಟಿಯಾಗಬೇಕು, ಅನ್ನೋದು ಪ್ರತಿಯೊಬ್ಬ ವಿದ್ಯಾರ್ಥಿಯ ಕನಸಾಗಿರುತ್ತದೆ. ಆ ಕನಸನ್ನು ನನಸು ಮಾಡೋದು ಅಷ್ಟು ಸುಲಭವಲ್ಲ. ಎಲ್ಲರನ್ನೂ ಒಟ್ಟಾಗಿ ಸೇರಿಸಿ, ಎಲ್ಲಾ ಶಿಕ್ಷಕರನ್ನು ಒಗ್ಗೂಡಿಸಿ ಒಂದೇ ವೇದಿಕೆ ಮೇಲೆ ಸನ್ಮಾನಿಸೋದು ಅತ್ಯಂತ ಕಷ್ಟಕರವಾದ ಕೆಲಸ. ಆದರೆ ಪ್ರಯತ್ನ ಪಟ್ಟರೆ ಅದು ಕೂಡ ಸಾಧ್ಯ ಎಂಬುವುದನ್ನು ತಾಲ್ಲೂಕಿನ ನಾಗಠಾಣ ಗ್ರಾಮದ ಸರ್ಕಾರಿ ಪ್ರೌಢ ಶಾಲೆಯ ಹಳೆಯ ವಿದ್ಯಾರ್ಥಿಗಳು ಮಾಡಿ ತೋರಿಸಿದ್ದಾರೆ.

ಮೂರು ತಿಂಗಳ ಪರಿಶ್ರಮದಿಂದ ಕೈಗೂಡಿದ ಗುರುವಂದನಾ ಕಾರ್ಯಕ್ರಮ:

ಸುಮಾರು ಮೂರು ತಿಂಗಳ ಶ್ರಮ, ಪ್ರತಿದಿನ ಮಿಟೀಂಗ್‌ ಮಾಡಿ ಹೇಗಾದರೂ ಕಾರ್ಯಕ್ರಮ ಮಾಡಲೇಬೇಕು ಪಾಠ ಕಲಿಸಿದ ಶಿಕ್ಷಕರಿಗೆ ಗುರುವಂದನೆ ಸಲ್ಲಿಸಲೇಬೇಕು ಎಲ್ಲಾ ಹಳೆಯ ವಿದ್ಯಾರ್ಥಿಗಳನ್ನು ಒಂದೆಡೆ ಸೇರಿಸಲೇಬೇಕು ಎನ್ನುವ ಹಠ ಎಲ್ಲರದ್ದಾಗಿತ್ತು. ಇಂದಿನ ಸಾಮಾಜಿಕ ಜಾಲತಾಣದ ಮೂಲಕ ಎಲ್ಲರನ್ನೂ ಹುಡುಕುವ ಪ್ರಯತ್ನ ಮಾಡಿ, ಒಬ್ಬೊಬ್ಬರನ್ನೆ ವಾಟ್ಸ್‌ಪ್‌ ಗ್ರೂಪ್‌ ಮೂಲಕ ಸೇರ್ಪಡೆ ಮಾಡೋಕೆ ಶುರುವಾಯಿತು. ಆ ವಾಟ್ಸ್‌ಪ್ ಗ್ರೂಪ್‌ನಲ್ಲಿ 150ಕ್ಕೂ‌ ಅಧಿಕ ಹಳೆಯ ವಿದ್ಯಾರ್ಥಿ‌ ಹಾಗೂ ವಿದ್ಯಾರ್ಥಿನಿಯರು ಸೇರಿಕೊಂಡರು. ಬಳಿಕ ಅನಿಸಿದ್ದು ಇನ್ನೇನು ಬೇಕು ಕಾರ್ಯಕ್ರಮ ಮಾಡೋಕೆ ಧೈರ್ಯ ಬಂದಾಯಿತು ಅಂದುಕೊಂಡು ಶಿಕ್ಷಕರನ್ನು ಹುಡುಕುವ ಕೆಲಸಕ್ಕೆ ಕೈಹಾಕಿ, ಶಿಕ್ಷಕರನ್ನ ಸೇರಿಸಿ ‘ಗುರುವಂದನಾ ಜೊತೆಗೆ ಸ್ನೇಹ ಸಮ್ಮಿಲನ’ ಹೆಸರಿನ್ನಿಟ್ಟು ಕಾರ್ಯಕ್ರಮದ ನಡೆಸುವಲ್ಲಿ ಯಶಸ್ವಿಯಾಗಿದ್ದಾರೆ.

ಗುರು ಶಿಷ್ಯರ ಸಂಭ್ರಮದ ಸಮಾಗಮ :

2001 ರಿಂದ 2003ರವರೆಗೆ ಎಂಟನೇ ತರಗತಿಯಿಂದ ಹತ್ತನೇ ತರಗತಿಯವರೆಗೆ ಒಂದೇ ಶಾಲೆಯಲ್ಲಿ ವ್ಯಾಸಂಗ ಮಾಡಿದ ವಿದ್ಯಾರ್ಥಿಗಳನ್ನು ಸೇರಿಸಿ ‘ಗುರುವಂದನಾ ಹಾಗೂ ಸ್ನೆಹ ಸಮ್ಮಿಲನ’ ಹೆಸರಿನಲ್ಲಿ ಒಂದೊಳ್ಳೆ ವೇದಿಕೆಯನ್ನು ನಿರ್ಮಿಸಿ ಕಾರ್ಯಕ್ರಮವನ್ನು ನಡೆಸಲಾಯಿತು. ಕಾರ್ಯಕ್ರಮದಲ್ಲಿ 100ಕ್ಕೂ ಹೆಚ್ಚು ವಿದ್ಯಾರ್ಥಿಗಳು, ಬಹುತೇಕ ಎಲ್ಲಾ ಶಿಕ್ಷಕರು ಭಾಗಿಯಾಗಿದ್ದರು. ಭಾನುವಾರದಂದು ನಗರದಲ್ಲಿ ಇಂತಹದೊಂದು ಅದ್ಭುತವಾದ ಕಾರ್ಯಕ್ರಮ ಜರುಗಿತು. ಹಳೆಯ ವಿದ್ಯಾರ್ಥಿಗಳು ಎಲ್ಲರನ್ನೂ ಕಂಡು ಒಂದು ಸಾರಿ ಆಶ್ಚರ್ಯವಾಗಿದ್ದಂತೂ ಸುಳ್ಳಲ್ಲ. ಒಬ್ಬೊಬ್ಬರ ಮುಖದ ಚಹರೆ ಬದಲಾಗಿದೆ. ಅಂತಹವರನ್ನ ಪತ್ತೆ ಮಾಡಿ ಅವರವರ ಹೆಸರನ್ನು ಹೇಳಿಕೊಂಡು ಪರಿಚಯ ಮಾಡಿಕೊಂಡ ಪರಿ ಇದೆಲ್ಲವೂ ಕೂಡ ಹಾರುವ ಹಕ್ಕಿಗೆ ರೆಕ್ಕೆ ಪುಕ್ಕ ಬಂದಂತಾಗಿತ್ತು.

ಕಾರ್ಯಕ್ರಮದ ಆರಂಭದಲ್ಲಿ ಅಕ್ಷರಗಳನ್ನು ಕಲಿಸುವ ಜೊತೆಗೆ ವಿದ್ಯಾರ್ಥಿಗಳ ನಡೆ-ನುಡಿಯನ್ನು ತಿದ್ದಿ ಜೀವನವನ್ನು ರೂಪಿಸಲು ಮಾರ್ಗದರ್ಶನ ಮಾಡಿದ ಅರಿವಿನ ಗುರುಗಳನ್ನು ವಿದ್ಯಾರ್ಥಿಗಳು ಪುಷ್ಪವೃಷ್ಟಿಗರೆದು ಕಾರ್ಯಕ್ರಮಕ್ಕೆ ಹಳೆಯ ವಿದ್ಯಾರ್ಥಿಗಳು ಸ್ವಾಗತಿಸಿ ಬರಮಾಡಿಕೊಂಡಿದ್ದು ಬಹಳ ವಿಶೇಷವಾಗಿತ್ತು. ಈ ಸಂದರ್ಭದಲ್ಲಿ ಶಾಲೆಯ ಶಿಕ್ಷಕರು ಹಾಗೂ ವಿದ್ಯಾರ್ಥಿಗಳು ಶಾಲೆಯ ಅನುಭವವನ್ನು ಹಂಚಿಕೊಂಡರು.
ನಿವೃತ್ತ ಉಪನ್ಯಾಸಕಿಯರಾದ ಶ್ರೀಮತಿ ಎಂ.ಎಂ.ಬಿರಾದಾರ ರವರು ಮಾತನಾಡಿ, ಶಾಲೆಯ ಹಳೆಯ ವಿದ್ಯಾರ್ಥಿಗಳು ಹಮ್ಮಿಕೊಂಡಿರುವ ಗುರುವಂದನಾ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದು ತಮಗೆ ಅಪಾರ ಸಂತಸ ತಂದಿದೆ ಎಂದು ಹರ್ಷ ವ್ಯಕ್ತಪಡಿಸಿದರು. ಕಲಿಕೆ ನಿರಂತರ ಪ್ರಕ್ರಿಯೆಯಾಗಿದ್ದು ಎಲ್ಲರೂ ತಮ್ಮ ಮಕ್ಕಳಿಗೆ ಉತ್ತಮ ಶಿಕ್ಷಣ ಒದಗಿಸುವ ಮೂಲಕ ಆರೋಗ್ಯ ಪೂರ್ಣ ಸಮಾಜವನ್ನು ನಿರ್ಮಾಣ ಮಾಡುವಂತೆ ಅವರು ಮನವಿ ಮಾಡಿದರು.ಜೀವನದ ಎಲ್ಲಾ ಕಷ್ಟಗಳಿಗೆ ಆದರ್ಶಪ್ರಿಯ ಶಿಕ್ಷಕರ ಹಾಗೂ ಸ್ನೇಹಿತರ ಸಲಹೆ ಸಹಕಾರಗಳು ನಮ್ಮಗಳ ಅಭಿವೃದ್ಧಿ ಪರ ಬೆಳವಣಿಗೆಗೆ ಪೂರಕವಾಗಿರುತ್ತವೆ.’ಎಂದು ಹೇಳಿದರು.

ನೀವೃತ್ತ ಮುಖ್ಯ ಗುರುಗಳಾದ ಶ್ರೀ ವ್ಹಿ.ಎಸ್.ನಾಯಕ್ ಮಾತನಾಡಿ, ನಾಗಠಾಣ ಗ್ರಾಮದ ಸರ್ಕಾರಿ ಪ್ರೌಢ ಶಾಲೆಯಲ್ಲಿ ಸಾವಿರಾರು ವಿದ್ಯಾರ್ಥಿಗಳು ಶಿಕ್ಷಣ ಪಡೆದು ಉತ್ತಮ ಜೀವನವನ್ನು ರೂಪಿಸಿಕೊಂಡಿದ್ದಾರೆ, ಮಕ್ಕಳಿಗೆ ಗುಣಾತ್ಮಕ ಶಿಕ್ಷಣ ನೀಡುವ ಜೊತೆಗೆ ಅವರಿಗೆ ಆಸಕ್ತಿಯಿರುವ ಕ್ಷೇತ್ರದಲ್ಲಿ ಸಾಧನೆ ಮಾಡಲು ನೆರವಾಗಬೇಕೆಂದು ಕಿವಿಮಾತು ಹೇಳಿದರು.ಉಪನ್ಯಾಸಕಿ ಶ್ರೀಮತಿ ಜಿ.ಬಿ.ಕಟ್ಟಿ ಮಾತನಾಡಿ, ಹುಟ್ಟು ಸಾವುಗಳ ಮಧ್ಯೆ,ಶಿಕ್ಷಕ ವಿದ್ಯಾರ್ಥಿಗಳ ಬಾಂಧವ್ಯ ಗಟ್ಟಿಗೊಳ್ಳಲು ನಮ್ಮ ಬೋಧನೆಯ ಪರಿಣಾಮವೇ ಕಾರಣ ಎಂದು ಹೇಳಿದರು.

ಗುರುವಂದನಾ ಕಾರ್ಯಕ್ರಮದಲ್ಲಿ ಮುಖ್ಯ ಗುರುಗಳಾದ ಸಿ.ಎ.ರುದ್ರಗೌಡ ಹಾಗೂ ಎಸ್.ಎಂ.ಹಡಪದ, ಹೆಚ್.ಎಸ್.ಮೆಟಗಾರ ಎಲ್.ಟಿ.ಮುಲ್ಲಾ, ಪ್ರ.ರೇ.ಮೆಂಚ್ ಶಿಕ್ಷಕರು ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದರು. ಕಾರ್ಯಕ್ರಮದಲ್ಲಿ ಎನ್.ಎಸ್.ಕೋರಿಶೆಟ್ಟಿ, ಎಸ್.ಎಸ್.ಬಿಜ್ಜರಗಿ, ಎಂ.ಎಸ್.ಕೋಳಕೋರ, ಸಿ.ಆಯ್.ದ್ಯಾವಪೂರ, ಎ.ಎಂ.ಮಠ, ಆರ್.ಎಂ.ಡೆಂಗಿ, ಎಂ.ಬಿ.ಪಾಟೀಲ್, ಎಂ.ಬಿ.ಮಾದರ., ವಿದ್ಯಾರ್ಥಿಗಳ ಪರವಾಗಿ ಅಂಬಿಕಾ ಲಗಟಗೇರ, ಪಾಪು ರಾಠೋಡ ಅನಿಸಿಕೆ ವ್ಯಕ್ತಪಡಿಸಿದರು. ಪ್ರಶಾಂತ ಹೊಸಮನಿ ಕಾರ್ಯಕ್ರಮ ನಿರೂಪಿಸಿದರು, ಈರಣ್ಣ ಪಾಟೀಲ್ ಸ್ವಾಗತಿಸಿದರು,ಶಂಕ್ರೆಪ್ಪ ಮಸಬಿನಾಳ ವಂದಿಸಿದರು.

Tags:

error: Content is protected !!