• ಬೆಳಗಾವಿಯಲ್ಲಿ ವಿಶ್ವಮಾಂಗಲ್ಯ ಸಭೆಯ ಮಾತೃ ಸಮಾಗಮ
• ತೇಜಸ್ವಿನಿ ಅನಂತ ಕುಮಾರ್ ಅವರಿಂದ ಕಾರ್ಯಕ್ರಮ ಉದ್ಘಾಟನೆ
• ಪರಂಪರೆ ಮತ್ತು ಪ್ರಗತಿಯ ಅಪೂರ್ವ ತ್ರಿವೇಣಿ ಸಂಗಮ
• ಸಂಸ್ಕಾರ ಹಾಗೂ ಸಾಮರ್ಥ್ಯ ವೃದ್ಧಿಗೆ ವಿಶೇಷ ಒತ್ತು

ಬೆಳಗಾವಿಯಲ್ಲಿ ಇಂದು ವಿಶ್ವಮಾಂಗಲ್ಯ ಸಭೆಯ ಕರ್ನಾಟಕ ಪ್ರಾಂತದ ‘ಮಾತೃ ಸಮಾಗಮ’ ಕಾರ್ಯಕ್ರಮವು ಅತ್ಯಂತ ವಿಜೃಂಭಣೆಯಿಂದ ಜರುಗಿತು. ಸಮಾಜದ ಪ್ರಗತಿಯಲ್ಲಿ ಮಹಿಳೆಯರ ಪಾತ್ರ ಮತ್ತು ಪರಂಪರೆಯ ಮಹತ್ವವನ್ನು ಈ ಸಮಾವೇಶವು ಎತ್ತಿ ಹಿಡಿಯಿತು.
ಬೆಳಗಾವಿಯ ಕೆ.ಎಲ್.ಎಸ್. ಗೋಗಟೆ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿಯಲ್ಲಿ ಇಂದು ವಿಶ್ವಮಾಂಗಲ್ಯ ಸಭೆಯ ಕರ್ನಾಟಕ ಪ್ರಾಂತದ ‘ಮಾತೃ ಸಮಾಗಮ’ ಕಾರ್ಯಕ್ರಮವು ಅತ್ಯಂತ ವಿಜೃಂಭಣೆಯಿಂದ ಜರುಗಿತು. ಸಂಸ್ಕಾರ, ಸಾಮರ್ಥ್ಯ, ಸದಾಚಾರ ಮತ್ತು ಸೇವೆಯ ಧ್ಯೇಯವಾಕ್ಯದೊಂದಿಗೆ ನಡೆದ ಈ ಉದ್ಘಾಟನಾ ಸತ್ರವನ್ನು ಖ್ಯಾತ ಸಾಮಾಜಿಕ ಕಾರ್ಯಕರ್ತೆ ತೇಜಸ್ವಿನಿ ಅನಂತ ಕುಮಾರ್ ಅವರು ಉದ್ಘಾಟಿಸಿದರು. ಈ ಸಂದರ್ಭದಲ್ಲಿ ಮಾತನಾಡಿದ ಅವರು, ಸಂಪ್ರದಾಯ ಮತ್ತು ಪ್ರಗತಿಯ ನಡುವೆ ಸಮತೋಲನ ಕಾಯ್ದುಕೊಳ್ಳುವಲ್ಲಿ ಮಾತೃಶಕ್ತಿಯ ಕೊಡುಗೆ ಅಪಾರ ಎಂದು ಬಣ್ಣಿಸಿದರು. ಕಾರ್ಯಕ್ರಮದಲ್ಲಿ ವಿಶ್ವಮಾಂಗಲ್ಯ ಸಭೆಯ ರಾಷ್ಟ್ರೀಯ ಮಾರ್ಗದರ್ಶಕ ಪ್ರಶಾಂತ್ ಹರತಾಳಕರ್, ರಾಷ್ಟ್ರೀಯ ಸಹ ಸಂಘಟನಾ ಮಂತ್ರಿ ಗಾಯತ್ರಿ ಲೋಮಟೆ ಹಾಗೂ ಕೆ.ಎಲ್.ಎಸ್ ಸಂಸ್ಥೆಯ ಅಧ್ಯಕ್ಷ ರಾಜೇಂದ್ರ ಬೆಳಗಾಂವಕರ್ ಅತಿಥಿಗಳಾಗಿ ಭಾಗವಹಿಸಿದ್ದರು. ಬೆಳಗಾವಿ ಘಟಕದ ಅಧ್ಯಕ್ಷೆ ರಶ್ಮಿ ಜೋಗದಂಡ ಹಾಗೂ ಉಪಾಧ್ಯಕ್ಷೆ ಸಂಧ್ಯಾ ಶಾನಭಾಗ್ ಅವರ ನೇತೃತ್ವದಲ್ಲಿ ನಡೆದ ಈ ಸಮಾವೇಶವು, ಭಾರತೀಯ ಸಂಸ್ಕೃತಿಯ ಪರಿಪಕ್ವತೆಯನ್ನು ಸಾರುವಲ್ಲಿ ಯಶಸ್ವಿಯಾಯಿತು.

ಈ ವೇಳೆ ಮಾತನಾಡಿದ ಕೆ.ಎಲ್.ಎಸ್ ಸಂಸ್ಥೆಯ ಅಧ್ಯಕ್ಷ ರಾಜೇಂದ್ರ ಬೆಳಗಾಂವಕರ ಅವರು, ಆಧುನಿಕ ಯುಗದಲ್ಲಿ ವಿದ್ಯಾರ್ಥಿಗಳು ಪ್ರತ್ಯಕ್ಷವಾಗಿ ವರ್ಗದಲ್ಲಿ ಕುಳಿತಿದ್ದರೂ ಸಹ ಅವರ ಚಿತ್ತ ಮಾತ್ರ ಬೇರೆಡೆಯಿರುತ್ತದೆ. ಮೊಬೈಲ್ ಗೀಳಿ ಅತ್ಯಂತ ಕಠಿಣವಾಗಿ ಅಂಟಿಕೊಂಡಿರುತ್ತದೆ. ಆದರೇ, ಮಕ್ಕಳಲ್ಲಿ ಏಕಾಗ್ರತೆ ಮತ್ತು ನಮ್ಮ ಸಂಸ್ಕೃತಿಯನ್ನು ಬೆಳೆಸುವ ಕಾರ್ಯವನ್ನು ಒಂದು ಸವಾಲಾಗಿ ತಾಯಂದಿರು ತೆಗೆದುಕೊಳ್ಳಬೇಕು. ಯುವಪೀಳಿಗೆಗಳಲ್ಲಿ ಸವಾಲುಗಳನ್ನು ಎದುರಿಸಿ ಜೀವನದಲ್ಲಿ ಮುನ್ನುಗುವ ಆತ್ಮಸ್ಥೈರ್ಯವನ್ನು ಬೆಳೆಸಬೇಕಿದೆ ಎಂದರು.
ಇದೇ ವೇಳೆ ಸಾಧಕರನ್ನು ಸನ್ಮಾನಿಸಲಾಯಿತು. ಈ ವೇಳೆ ರತ್ನಪ್ರಭಾ ಬೆಲ್ಲದ, ಪುಷ್ಪಾ ಜೋಗದಂಡ, ಮಾಧುರಿ ಶಾನಭಾಗ, ರಾಧಿಕಾ ಕುಲಕರ್ಣಿ, ಡಾ. ಸೋನಾಲಿ ಸರನೋಬತ್, ಅರುಂಧತಿ ಸುಂಠನಕರ, ಜ್ಯೋತ್ಸ್ನಾ ಪೈ, ಸಾನಿಕಾ ಸಾವಂತ, ಅನುರಾಧಾ ದೇಶಪಾಂಡೆ, ಗೀತಾ ಪೈ, ಪ್ರಿಯಂಕಾ ಕೆಳಕರ, ಇನ್ನುಳಿದವರು ಭಾಗಿಯಾಗಿದ್ಧರು.
