State

ಸಚಿವ ಬಿ. ನಾಗೇಂದ್ರ ರಾಜೀನಾಮೆಗೆ ಆಗ್ರಹ: ಕಪ್ಪು ಟೀ ಶರ್ಟ್ ಧರಿಸಿ ಬಿಜೆಪಿ-ಜೆಡಿಎಸ್ ಪ್ರತಿಭಟನೆ, ಮಾರ್ಷಲ್‌ಗಳ ಜೊತೆ ವಾಗ್ವಾದ!

Share

ಸಚಿವ ಬಿ.ನಾಗೇಂದ್ರ ರಾಜೀನಾಮೆಗೆ ಆಗ್ರಹಿಸಿ ಬಿಜೆಪಿ-ಜೆಡಿಎಸ್ ಶಾಸಕರು ಇಂದು ಶಾಸಕರ ಭವನದ ಆವರಣದಲ್ಲಿರುವ ಶ್ರೀ ವಾಲ್ಮೀಕಿ ಮಹರ್ಷಿಗಳ ಪ್ರತಿಮೆ ಬಳಿ ಕಪ್ಪು ಟೀ ಶರ್ಟ್ ಧರಿಸಿ ಪ್ರತಿಭಟನೆ ನಡೆಸಿದರು. ಬಳಿಕ ವಿಧಾನಸೌಧಕ್ಕೆ ಪಾದಯಾತ್ರೆ ಮೂಲಕ ಆಗಮಿಸಿದರು.
ವಿಧಾನಸಭೆ ಮೊಗಸಾಲೆಯೊಳಗೆ ಹೋಗುವಾಗ ಮಾರ್ಷಲ್ಗಳು ಕಪ್ಪು ಟೀ ಶರ್ಟ್ ಧರಿಸಿದ್ದ ಶಾಸಕರನ್ನು ತಡೆಯಲು ಯತ್ನಿಸಿದರು. ಪ್ರತಿಪಕ್ಷ ಶಾಸಕರು ಹಾಗೂ ಮಾರ್ಷಲ್ಗಳ ಮಧ್ಯೆ ಮಾತಿನ ಚಕಮಕಿ ನಡೆಯಿತು. ನಂತರ ಟೀ ಶರ್ಟ್ ಧರಿಸಿಯೇ ಒಟ್ಟಾಗಿ ಒಳಗೆ ನುಗ್ಗಿದರು.
ಈ ಸಂದರ್ಭದಲ್ಲಿ ಮಾತನಾಡಿದ ವಿಪಕ್ಷ ನಾಯಕ ಆರ್.ಅಶೋಕ್, ನಾಗೇಂದ್ರ ಅವರನ್ನು ಸಂಪುಟಕ್ಕೆ ಸೇರಿಸಿಕೊಂಡು ಎಸ್‌ಟಿ ವರ್ಗಕ್ಕೆ ಅಪಮಾನ ಮಾಡಲಾಗಿದೆ. ನಿಗಮದ ಅಧಿಕಾರಿ ಚಂದ್ರಶೇಖರ್ ಅವರು ಆತ್ಮಹತ್ಯೆ ಮಾಡಿಕೊಂಡರು. ಡೆತ್‌ ನೋಟ್‌ನಲ್ಲಿ ಸಚಿವ ಮೌಖಿಕ ಸೂಚನೆಯ ಮೇರೆಗೆ ಹಣ ವರ್ಗಾವಣೆ ಮಾಡಲಾಗಿದೆ ಎಂದಿದ್ದಾರೆ. ಡೆತ್ ನೋಟ್ ಪ್ರಮುಖ ಸಾಕ್ಷಿ, ಪ್ರಮುಖ ದಾಖಲೆ. ಹಣ ವರ್ಗಾವಣೆ ಆಗಿರುವ ಬಗ್ಗೆ ಯೂನಿಯನ್ ಬ್ಯಾಂಕ್ ಚೆಕ್ ಇದೆ. ಅಂಗೈ ಹುಣ್ಣಿಗೆ ಕನ್ನಡಿ ಬೇಕಿಲ್ಲ. ಯಾವ್ಯಾವ ಅಕೌಂಟ್ಗಳಿಗೆ ಈ ಹಣ ಹೋಗಿದೆ ಅಂತಲೂ ದಾಖಲೆ ಇದೆ ಎಂದರು. ನಾವು ಕಾಂಗ್ರೆಸ್ನವರಿಗೆ ಉತ್ತರ ಕೊಡಬೇಕಿಲ್ಲ. ಜನರಿಗೆ ಉತ್ತರ ಕೊಡಬೇಕು. ನಮ್ಮ ಹೋರಾಟದ ಬಿಸಿ ಕಾಂಗ್ರೆಸ್ನವರಿಗೆ ತಟ್ಟಿದೆ. ಅದಕ್ಕಾಗಿ ಮುಖ್ಯಮಂತ್ರಿಗಳು ಪ್ರತಿಭಟನೆ ಮಾಡುತ್ತಿದ್ದಾರಂತೆ. ಎಲ್ಲಾದರೂ ಸಿಎಂ ಪ್ರತಿಭಟನೆ ಮಾಡುವುದನ್ನು ನೋಡಿದ್ದೀರಾ? ಎಂದು ಟೀಕಿಸಿದರು.

ಇದೇ ವೇಳೆ ಮಾತನಾಡಿದ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ‌.ವಿಜಯೇಂದ್ರ, ನಾಗೇಂದ್ರ ರಾಜೀನಾಮೆ ಪಡೆಯದೆ ಭ್ರಷ್ಟಾಚಾರಿಗಳನ್ನು ರಕ್ಷಣೆ ಮಾಡಲು ತಾವು ಇರುವುದು ಎಂದು ಕಾಂಗ್ರೆಸ್ ಸಾಬೀತು ಮಾಡಿದೆ. ವಾಲ್ಮೀಕಿ ನಿಗಮದ ಹಣ ಲೂಟಿ ಮಾಡುವಾಗ ನಿಮಗೆ ದಲಿತರ ಹಣ ಅಂತಾ ನೆನಪಾಗಿಲ್ವಾ ನಾಗೇಂದ್ರ ಅವರೇ? ಸಬೂಬು ಬಿಟ್ಟು ನಾಗೇಂದ್ರ ಅವರನ್ನು ಕೈ ಬಿಡಬೇಕು. ಇಂದು ಮಾಜಿ ಸಿಎಂ ಸಿದ್ಧರಾಮಯ್ಯ ಕೂಡ ಮಾತಾಡಬೇಕು. ಕೈ ಬಿಟ್ಟ ಸಚಿವರನ್ನು ಮತ್ತೆ ಕ್ಯಾಬಿನೆಟ್ಗೆ ತೆಗೆದುಕೊಂಡಿದ್ದಾರೆ ಅಂದರೆ ಅಂತಹ ಬದಲಾವಣೆ ಏನಾಗಿತ್ತು? ರಾಜ್ಯದ ಜ್ವಲಂತ ಸಮಸ್ಯೆ ಬಗ್ಗೆ ಚರ್ಚೆ ಆಗಬೇಕು ಅಂತಾದರೆ ರಾಜೀನಾಮೆ ಪಡೆಯಿರಿ. ಮುಖ್ಯಮಂತ್ರಿಗಳೇ ಇಂದು ಪ್ರತಿಭಟನೆ ಮಾಡುತ್ತಿದ್ದಾರೆ. ಕಾಂಗ್ರೆಸ್ಗೆ ಮಾನ, ಮರ್ಯಾದೆ ಇದ್ದರೆ ರಾಜೀನಾಮೆ ಪಡೆಯಬೇಕು. ಸದನ ಮುಗಿದ ಬಳಿಕವೂ ಪ್ರತಿಭಟನೆ ಮುಂದುವರೆಯುತ್ತದೆ ಎಂದು ಆಗ್ರಹಿಸಿದರು.

Tags:

error: Content is protected !!