Bellari

ನೆಹರು ಕಾಲದಿಂದ ನಾಗೇಂದ್ರ ಕಾಲದವರೆಗೆ ಕಾಂಗ್ರೆಸ್’ನಲ್ಲಿ ಭ್ರಷ್ಟಾಚಾರ ತಾಂಡವವಾಡುತ್ತಿದೆ: ಮಾಜಿ ಸಚಿವ ಶ್ರೀರಾಮುಲು ವಾಗ್ದಾಳಿ

Share

ರಾಜ್ಯ ಕಾಂಗ್ರೆಸ್ ಸರ್ಕಾರದ ಭ್ರಷ್ಟಾಚಾರ ಹಾಗೂ ಸಚಿವ ನಾಗೇಂದ್ರ ಅವರನ್ನು ಮತ್ತೆ ಮಂತ್ರಿ ಸಂಪುಟಕ್ಕೆ ಸೇರ್ಪಡೆಗೊಳಿಸಿರುವುದನ್ನು ಖಂಡಿಸಿ ಬಳ್ಳಾರಿಯಲ್ಲಿ ಮಾಜಿ ಸಚಿವ ಬಿ. ಶ್ರೀರಾಮುಲು ತೀವ್ರ ವಾಗ್ದಾಳಿ ನಡೆಸಿದ್ದಾರೆ. ಕಾಂಗ್ರೆಸ್‌ನಲ್ಲಿ ನೆಹರು ಕಾಲದಿಂದ ಆರಂಭವಾದ ಭ್ರಷ್ಟಾಚಾರ ಇಂದು ರಾಹುಲ್ ಮತ್ತು ಪ್ರಿಯಾಂಕಾ ಕಾಲದವರೆಗೂ ನದಿಯಂತೆ ಹರಿಯುತ್ತಿದೆ ಎಂದು ಅವರು ಆರೋಪಿಸಿದರು.

ಬಳ್ಳಾರಿಯಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಶ್ರೀರಾಮುಲು, ಇಂದಿರಾ ಗಾಂಧಿಯವರ ಕಾಲದಲ್ಲಿ ವಿಮಾನದಂತೆ ವೇಗವಾಗಿ ಚಲಿಸುತ್ತಿದ್ದ ಕಾಂಗ್ರೆಸ್ ಪಕ್ಷ, ಇಂದು ಭ್ರಷ್ಟಾಚಾರದಿಂದಾಗಿ ಜನರ ತಿರಸ್ಕಾರಕ್ಕೆ ಒಳಗಾಗಿ ಸೈಕಲ್ ವೇಗಕ್ಕೆ ಬಂದಿದೆ, ಶೀಘ್ರದಲ್ಲೇ ಎತ್ತಿನ ಗಾಡಿಯ ಸ್ಥಿತಿಗೆ ತಲುಪಲಿದೆ ಎಂದರು. ಮಾಜಿ ಸಚಿವ ನಾಗೇಂದ್ರ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ ಅವರು, ವಾಲ್ಮೀಕಿ ಅಭಿವೃದ್ಧಿ ನಿಗಮದ ಹಣವನ್ನು ದುರ್ಬಳಕೆ ಮಾಡಿಕೊಂಡು ಜೈಲು ಸೇರಿ ಬಂದವರನ್ನು ಮತ್ತೆ ಮಂತ್ರಿ ಮಾಡಿರುವುದು ಕಾಂಗ್ರೆಸ್ ಭ್ರಷ್ಟಾಚಾರಕ್ಕೆ ನೀಡುತ್ತಿರುವ ಬೆಂಬಲವನ್ನು ತೋರಿಸುತ್ತದೆ. 8 ಕೋಟಿ ರೂ. ಮನಿ ಲ್ಯಾಂಡ್ರಿಂಗ್ ಪ್ರಕರಣ ಸೇರಿದಂತೆ ಇಡಿ ಮತ್ತು ಸಿಬಿಐ ಆರೋಪಪಟ್ಟಿ ಸಲ್ಲಿಸಿದ್ದರೂ, ದಲಿತ ಹಾಗೂ ವಾಲ್ಮೀಕಿ ಜನಾಂಗದ ವಿದ್ಯಾರ್ಥಿಗಳ ಭವಿಷ್ಯದ ಹಣವನ್ನು ಲೂಟಿ ಮಾಡಿದವರನ್ನು ಸಚಿವರನ್ನಾಗಿ ಮಾಡಿರುವುದು ಅಕ್ಷಮ್ಯ ಅಪರಾಧ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಇದೇ ವೇಳೆ ಕೆಎಂಎಫ್ ಅಧ್ಯಕ್ಷ ಹಾಗೂ ಸಭಾಪತಿ ಬಸವರಾಜ ಹೊರಟ್ಟಿ ಅವರ ರಾಜೀನಾಮೆ ವಿಚಾರ ಪ್ರಸ್ತಾಪಿಸಿದ ಶ್ರೀರಾಮುಲು, ಡಿಕೆಶಿ ಮತ್ತು ಬಿಕೆ ಹರಿಪ್ರಸಾದ್ ಸೇರಿ ಹೊರಟ್ಟಿ ಅವರನ್ನು ಬೆದರಿಸಿ ಒತ್ತಾಯಪೂರ್ವಕವಾಗಿ ರಾಜೀನಾಮೆ ಪಡೆದಿದ್ದಾರೆ ಎಂದು ಆರೋಪಿಸಿದರು. ‘ಕೊತ್ವಾಲ್ ಮತ್ತು ಜಯರಾಜ್ ಶಿಷ್ಯಂದಿರು’ ರಾಜ್ಯದಲ್ಲಿ ರೌಡಿ ಶೈಲಿಯಲ್ಲಿ ಆಡಳಿತ ನಡೆಸುತ್ತಿದ್ದಾರೆ ಎಂದು ವಾಗ್ದಾಳಿ ನಡೆಸಿದ ಅವರು, ಸಚಿವ ನಾಗೇಂದ್ರ ರಾಜೀನಾಮೆ ನೀಡುವವರೆಗೂ ರಾಜ್ಯಸಭೆ ಹಾಗೂ ವಿಧಾನಸಭೆ ಕಲಾಪಗಳನ್ನು ನಡೆಯಲು ಬಿಡಬಾರದು ಎಂದು ಬಿಜೆಪಿ ನಾಯಕರಲ್ಲಿ ಮನವಿ ಮಾಡಿದರು. ಅಲ್ಲದೆ, ಸರ್ಕಾರದಲ್ಲಿನ ಮಂತ್ರಿ ಸ್ಥಾನದ ಗೊಂದಲಗಳನ್ನು ನೋಡಿ ವಾರಕ್ಕೊಬ್ಬ ಮಂತ್ರಿಯನ್ನು ಮಾಡಿ ಎಂದು ವ್ಯಂಗ್ಯವಾಡಿದರು.

Tags:

error: Content is protected !!