ಗುರು ಪೂರ್ಣಿಮೆಯ ಪವಿತ್ರ ದಿನದ ಹಿನ್ನೆಲೆಯಲ್ಲಿ ಬೆಳಗಾವಿಯ ವಂಟಮೂರಿಯ ಶ್ರೀ ಸಾಯಿಬಾಬಾ ದೇವಾಲಯದಲ್ಲಿ ಧಾರ್ಮಿಕ ಕಾರ್ಯಕ್ರಮಗಳು ವಿಜೃಂಭಣೆಯಿಂದ ನೆರವೇರಿದವು. ಬೆಳಿಗ್ಗೆಯಿಂದಲೇ ಸಾವಿರಾರು ಸಂಖ್ಯೆಯಲ್ಲಿ ಆಗಮಿಸಿದ ಭಕ್ತಾದಿಗಳು ಸಾಯಿಬಾಬಾನ ದರ್ಶನ ಪಡೆದು ಧನ್ಯತೆ ಮೆರೆದರು.
ಸಾಂಸ್ಕೃತಿಕ ಹಾಗೂ ಧಾರ್ಮಿಕ ನಗರಿ ಬೆಳಗಾವಿಯಲ್ಲಿ ಇಂದು ಗುರು ಪೂರ್ಣಿಮೆಯ ಪಾವನ ಪರ್ವವನ್ನು ಅತ್ಯಂತ ಶ್ರದ್ಧಾ-ಭಕ್ತಿಗಳಿಂದ ಆಚರಿಸಲಾಯಿತು. ಬೆಳಗಾವಿಯ ವಂಟಮೂರಿ ಪ್ರದೇಶದಲ್ಲಿರುವ ಪ್ರಸಿದ್ಧ ಶ್ರೀ ಸಾಯಿಬಾಬಾ ಮಂದಿರದಲ್ಲಿ ಬೆಳಿಗ್ಗೆ 6:30 ರಿಂದ 7:00 ಗಂಟೆಯ ಅವಧಿಯಲ್ಲಿ ಬಾಬಾನಿಗೆ ವಿಶೇಷ ಅಭಿಷೇಕ, ಅಲಂಕಾರ, ಮಹಾಪೂಜೆ ಹಾಗೂ ಮಹಾಮಂಗಳಾರತಿ ನೆರವೇರಿಸಲಾಯಿತು. ಬೆಳಗಿನ ಜಾವದಿಂದಲೇ ಮಂದಿರಕ್ಕೆ ಹರಿದುಬಂದ ಭಕ್ತಾದಿಗಳು ದೀರ್ಘ ಸಾಲಿನಲ್ಲಿ ನಿಂತು ಬಾಬಾನ ದರ್ಶನ ಪಡೆದರು.


ಪೂಜಾ ಕಾರ್ಯಕ್ರಮದ ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದ ದೇವಾಲಯದ ಪದಾಧಿಕಾರಿ ಬಾಬು ಅರವಳ್ಳಿ ಅವರು, ಗುರು ಪೂರ್ಣಿಮೆಯ ವಿಶೇಷ ಪ್ರಯುಕ್ತ ಸಾಯಂಕಾಲ ಆಗಮಿಸುವ ಎಲ್ಲಾ ಭಕ್ತಾದಿಗಳಿಗೆ ಮಹಾಪ್ರಸಾದ ವಿನಿಯೋಗದ ವ್ಯವಸ್ಥೆ ಮಾಡಲಾಗಿದೆ ಎಂದು ತಿಳಿಸಿದರು. ಇದೇ ವೇಳೆ ಶ್ರೀ ಸಾಯಿಬಾಬಾರವರು ದೇಶದ ಸಮಸ್ತ ರೈತಕುಲಕ್ಕೆ, ಜನಸಾಮಾನ್ಯರಿಗೆ ಉತ್ತಮ ಆರೋಗ್ಯ, ಆಯುಷ್ಯ ಹಾಗೂ ಸುಖ-ಸಮೃದ್ಧಿಯನ್ನು ಕರುಣಿಸಲಿ ಎಂದು ದೇವಾಲಯದ ಪರವಾಗಿ ವಿಶೇಷ ಪ್ರಾರ್ಥನೆ ಸಲ್ಲಿಸಲಾಯಿತು.
