Vijaypura

ಡಿವೈಡರ್‌ಗೆ ಗುದ್ದಿದ ಕ್ರೆಟಾ ಕಾರು; ತಾಯಿ-ಇಬ್ಬರು ಪುತ್ರರ ದುರ್ಮರಣ

Share

ರಾಷ್ಟ್ರೀಯ ಹೆದ್ದಾರಿ–50ರ ವಿಜಯಪುರ ಜಿಲ್ಲೆಯ ಮನಗೂಳಿ ಸಮೀಪ ಕ್ರೆಟಾ ಕಾರು ಡಿವೈಡರ್‌ಗೆ ಡಿಕ್ಕಿ ಹೊಡೆದ ಪರಿಣಾಮ ತಾಯಿ ಹಾಗೂ ಇಬ್ಬರು ಪುತ್ರರು ಮೃತಪಟ್ಟಿರುವ ದಾರುಣ ಘಟನೆ ನಡೆದಿದೆ. ಮೃತರನ್ನು ಸತ್ಯವೇಣಿ (38), ಪುತ್ರರಾದ ಹರಿವೆಂಕಟರಾಮ್ (20) ಹಾಗೂ ಜಶ್ವಂತ್ (18) ಎಂದು ಗುರುತಿಸಲಾಗಿದೆ. ಕುಟುಂಬದ ಮುಖ್ಯಸ್ಥ ರಾಘವೇಂದ್ರ (41) ಗಂಭೀರವಾಗಿ ಗಾಯಗೊಂಡಿದ್ದು, ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.

ಕಾರಟಗಿಯಿಂದ ಶಿರಡಿಗೆ ತೆರಳುತ್ತಿದ್ದ ವೇಳೆ KA-33 N-4689 ಸಂಖ್ಯೆಯ ಕ್ರೆಟಾ ಕಾರು ಅಪಘಾತಕ್ಕೀಡಾಗಿದೆ. ಕಾರನ್ನು 20 ವರ್ಷದ ಹರಿವೆಂಕಟರಾಮ್ ಚಲಾಯಿಸುತ್ತಿದ್ದನು. ಶಿರಡಿ ಯಾತ್ರೆಗೆ ತೆರಳುವ ಹಿನ್ನೆಲೆಯಲ್ಲಿ ಕುಟುಂಬದವರು ರಾತ್ರಿ ಇಡೀ ನಿದ್ದೆಗೆಟ್ಟು ಪ್ರಯಾಣದ ಸಿದ್ಧತೆ ಮಾಡಿಕೊಂಡಿದ್ದರು. ನಿದ್ದೆ ಮಂಪರಿನಲ್ಲಿ ವೇಗವಾಗಿ ಕಾರು ಚಲಾಯಿಸಿದ್ದೇ ಅಪಘಾತಕ್ಕೆ ಕಾರಣವಾಗಿರಬಹುದು ಎಂದು ಪ್ರಾಥಮಿಕ ತನಿಖೆಯಲ್ಲಿ ಶಂಕಿಸಲಾಗಿದೆ. ಘಟನೆಯ ಮಾಹಿತಿ ತಿಳಿಯುತ್ತಿದ್ದಂತೆ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಈ ಸಂಬಂಧ ಮನಗೂಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರಿದಿದೆ.

Tags:

error: Content is protected !!