ಬೆಳಗಾವಿ ನಗರದಲ್ಲಿ ಸಿಸಿಬಿ ಪೊಲೀಸರು ಭರ್ಜರಿ ಕಾರ್ಯಾಚರಣೆ ನಡೆಸಿದ್ದಾರೆ. ಕೆಎಸ್ಆರ್ಟಿಸಿ ಹಳೆ ಬಸ್ ನಿಲ್ದಾಣದ ಬಳಿ ಮಾದಕ ವಸ್ತು ಮಾರಾಟಕ್ಕೆ ಯತ್ನಿಸುತ್ತಿದ್ದ ಆರೋಪಿಯನ್ನು ಖೆಡ್ಡಾಕ್ಕೆ ಕೆಡವಲಾಗಿದ್ದು, ಲಕ್ಷಾಂತರ ರೂಪಾಯಿ ಮೌಲ್ಯದ ಹೆರಾಯಿನ್ ಜಪ್ತಿ ಮಾಡಲಾಗಿದೆ.
ಬೆಳಗಾವಿ ನಗರದ ಕೆಎಸ್ಆರ್ಟಿಸಿ ಹಳೆ ಪಾರ್ಕಿಂಗ್ ಹತ್ತಿರದ ಇಂದಿರಾ ಕ್ಯಾಂಟೀನ್ ಪಕ್ಕದಲ್ಲಿ ಸಾರ್ವಜನಿಕ ಸ್ಥಳದಲ್ಲಿ ಹೆರಾಯಿನ್ ಮಾರಾಟ ಮಾಡಲು ಯತ್ನಿಸುತ್ತಿದ್ದ ಗಂಗಾಧರ ನಗರದ ನಿವಾಸಿ ರಾಘವೇಂದ್ರ ಗೋಪಾಲ ಮುರ್ಕಟನಾಳ (36) ಎಂಬಾತನನ್ನು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ. ಸಿಸಿಬಿ ವಿಭಾಗದ ಪಿಐ ಶ್ರೀ ಮಂಜುನಾಥ ನಾಯಕ ಹಾಗೂ ಸಿಬ್ಬಂದಿ ನಡೆಸಿದ ಈ ಮಿಂಚಿನ ದಾಳಿಯಲ್ಲಿ ಆರೋಪಿತನಿಂದ ಒಟ್ಟು 9 ಲಕ್ಷ ರೂಪಾಯಿ ಮೌಲ್ಯದ 45.18 ಗ್ರಾಂ ಹೆರಾಯಿನ್, ರೆಡ್ಮಿ ಮೊಬೈಲ್ ಮತ್ತು ನಗದನ್ನು ವಶಪಡಿಸಿಕೊಳ್ಳಲಾಗಿದೆ. ಜಪ್ತಿಯಾದ ಒಟ್ಟು ಸ್ವತ್ತುಗಳ ಮೌಲ್ಯ 9,00,500 ರೂಪಾಯಿಗಳಾಗಿದ್ದು, ಈ ಸಂಬಂಧ ಬೆಳಗಾವಿಯ ಮಾರ್ಕೆಟ್ ಪೊಲೀಸ್ ಠಾಣೆಯಲ್ಲಿ ಎನ್ಡಿಪಿಎಸ್ ಕಾಯ್ದೆಯಡಿ ಪ್ರಕರಣ ದಾಖಲಿಸಿ ತನಿಖೆ ಮುಂದುವರಿಸಲಾಗಿದೆ.

