ತಮ್ಮ ಬಾಮೈದುನನ ಮೇಲಿನ ಇಡಿ ದಾಳಿಗೆ ಸಂಬಂಧಿಸಿದಂತೆ ತನಿಖೆಯಾಗುವವರೆಗೂ ಏನೂ ಹೇಳಲು ಸಾಧ್ಯವಿಲ್ಲ ಎಂದಿರುವ ಅವರು, ರಾಜ್ಯ ಸರ್ಕಾರಕ್ಕೆ ಸಂಬಂಧಿಸಿದ ಪ್ರಕರಣದಲ್ಲಿ ಮೊದಲಬಾರಿ ಕೇಂದ್ರದ ಸಂಸ್ಥೆ ಇಷ್ಟು ದೊಡ್ಡ ದಾಳಿ ನಡೆಸಿರುವುದು ನಮಗೂ ಕನ್ಫ್ಯೂಷನ್ ಉಂಟುಮಾಡಿದೆ ಎಂದು ಸಚಿವ ಸತೀಶ್ ಜಾರಕಿಹೊಳಿ ಅವರು ಅಚ್ಚರಿ ವ್ಯಕ್ತಪಡಿಸಿದ್ದಾರೆ.

ಇಂದು ಬೆಳಗಾವಿಯಲ್ಲಿ ಕರೆಯಲಾಗಿದ್ದ ಮಾಧ್ಯಮಗೋಷ್ಟಿಯನ್ನು ಉದ್ಧೇಶಿಸಿ ಸಚಿವ ಸತೀಶ್ ಜಾರಕಿಹೊಳಿ ಅವರು ಮಾತನಾಡಿದರು. ಬಾಮೈದುನನ ಮೇಲಿನ ಇಡಿ ರೇಡ್’ಗೆ ಸಂಬಂಧಿಸಿದಂತೆ ಸರ್ಟಿಫಿಕೇಟ್ ಕೊಡುವ ಅವಶ್ಯಕತೆಯಿಲ್ಲ. ಇದು ರಾಜಕೀಯ ಪ್ರೇರಿತವೇ ಎಂದು ಕೇಳಿದ ಪ್ರಶ್ನೆಗೆ ಸದ್ಯಕ್ಕೆ ಏನು ಹೇಳಲು ಆಗದು ಎಂದರು. ಇಲ್ಲಿಯ ವರೆಗೂ ಭ್ರಷ್ಟಾಚಾರ ಆರೋಪದ ತನಿಖೆಯನ್ನು ಮಾಡಲೂ ಲೋಕಾಯುಕ್ತ ಸೇರಿದಂತೆ ಹಲವು ಸಂಸ್ಥೆಗಳಿರುವಾಗ ಇಡಿ ಇಷ್ಟು ದೊಡ್ಡ ದಾಳಿ ನಡೆಸುವುದು ನಮಗೂ ಕನಫ್ಯೂಸ್ ಇದೆ ಎಂದರು. ರಾಜ್ಯ ಸರ್ಕಾರಕ್ಕೆ ಸಂಬಂಧಿಸಿದ ಪ್ರಕರಣವನ್ನು ಕೇಂದ್ರ ಸರ್ಕಾರ ತನಿಖೆಗೆ ಮುಂದಾಗಿರುವುದು ಆಶ್ಚರ್ಯಕರ. ತನಿಖೆಯಾಗುವ ವರೆಗೂ ಸದ್ಯಕ್ಕೆ ಏನೂ ಹೇಳಲು ಸಾಧ್ಯವಿಲ್ಲ.
ಪ್ರಕೃತಿ ವಿಕೋಪ ನಿರ್ವಹಣೆಗೆ ಸಂಬಂಧಿಸಿದಂತೆ ನೀಡಿದ ಜವಾಬ್ದಾರಿಗೆ ಸಂಬಂಧಿಸಿದಂತೆ ಕೇಳಿದ ಪ್ರಶ್ನೆಗೆ ಬರಗಾಲ ನೀರು ಇಂತಹ ಸಮಸ್ಯೆಗಳ ಬಗ್ಗೆ ಚರ್ಚಿಸಲು ಜವಾಬ್ದಾರಿ ಕೊಟ್ಟಿದ್ದಾರೆಯೇ ಹೊರತು ಜಿಲ್ಲಾ ಉಸ್ತುವಾರಿ ಎಂದಲ್ಲ. ಇನ್ನು ಸಂಪುಟ ರಚನೆಗೆ ಸಂಬಂಧಿಸಿದಂತೆ ಬರದ ಸಮಸ್ಯೆಗಳನ್ನು ನಿವಾರಿಸಲೆಂದೆ ಮೂರು ಮೂರು ಜಿಲ್ಲೆಗೆ ಓರ್ವ ಸಚಿವರನ್ನು ನೇಮಿಸಲಾಗಿದೆ. ಬೆಳಗಾವಿಯ ನೀರಿನ ಸಮಸ್ಯೆಗೆ ಸಂಬಂಧಿಸಿದಂತೆ ನಾಳೆ ಸಭೆ ನಡೆಸಲಾಗುವುದು ಎಂದರು.
ಈ ಸಂದರ್ಭದಲ್ಲಿ ವಾಯುವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯ ಉಪಾಧ್ಯಕ್ಷ ಸಂಜೀವ ಹಣುಮಣ್ಣವರ, ಜಿಲ್ಲಾ ಗ್ಯಾರಂಟಿ ಯೋಜನೆಗಳ ಸಮಿತಿಯ ಜಿಲ್ಲಾಧ್ಯಕ್ಷ ವಿನಯ್ ನಾವಲಗಟ್ಟಿ ಸೇರಿದಂತೆ ಇನ್ನುಳಿದವರು ಉಪಸ್ಥಿತರಿದ್ಧರು.
