2016ರಲ್ಲಿ ಸಚಿವ ಎಂ.ಬಿ.ಪಾಟೀಲ ನೇತೃತ್ವದಲ್ಲಿ ಕೈಗೊಂಡ ಕೋಟಿವೃಕ್ಷ ಅಭಿಯಾನ ಅನೇಕರಿಗೆ ಸ್ಪೂರ್ತಿ ನೀಡುತ್ತಿದೆ. ವಿಜಯಪುರ ನಗರದ ವಾರ್ಡ್ ನಂ. 2ರ ಲಿಂಗೇಶ್ವರ ಸ್ವಾಮಿ ಬಡಾವಣೆಯ ಯುವಕ ಸಂತೋಷ್ ಕವಟೆಕರ್ ಅವರ ನೇತೃತ್ವದಲ್ಲಿ, ಉದ್ಯಾನವನಕ್ಕಾಗಿ ಮೀಸಲಿಟ್ಟಿದ್ದ ಜಾಗದಲ್ಲಿ 300 ಗಿಡಗಳನ್ನು ನೆಟ್ಟು, ಅವುಗಳಿಗೆ ನೀರೆರೆದು ಇಂದು ಹಚ್ಚಹಸಿರಾದ ಮರಗಳನ್ನಾಗಿ ಬೆಳೆಸಿದ್ದಾರೆ. ಪೂಜ್ಯ ಸಿದ್ದೇಶ್ವರ ಮಹಾಸ್ವಾಮೀಜಿ ಯವರು ಕೊರೊನಾ ಅವಧಿಯಲ್ಲಿ ಇಲ್ಲಿಗೆ ಆಗಮಿಸಿ ವೀಕ್ಷಿಸಿ ಸಂತಸ ವ್ಯಕ್ತಪಡಿಸಿ ಆಶೀರ್ವದಿಸಿದ್ದನ್ನು ಯುವಕರು ಸಚಿವ ಎಂ.ಬಿ.ಪಾಟೀಲ ಭೇಟಿಯ ವೇಳೆ ಸ್ಮರಿಸಿದರು. ಬಿ.ಎಸ್. ಶೆಟ್ಟಿ, ಮಲ್ಲು ನಾಲವಾರ್, ಅಜಿತ್ ಉಪಾಧ್ಯಾಯ, ಎಂ.ಎಸ್. ಗೊಂಬಿ, ಪ್ರವೀಣ್ ಕೇಶಿ, ಸಂತೋಷ್ ಅಕೋಡೆ, ಮಹಾವೀರ ಬೋಗಾರ್, ಶಿವಾನಂದ ಬೆಟಗೇರಿ ಮೊದಲಾದವರು ಈ ಹಸಿರು ಸಾಧನೆಯಲ್ಲಿ ತಮ್ಮ ಅಮೂಲ್ಯ ಕರಸೇವೆಯನ್ನು ಸಲ್ಲಿಸಿದ್ದಾರೆಂದು ಯುವಕರು ಅಭಿಮಾನದಿಂದ ತಿಳಿಸಿದರು. ಇಂತಹ ಹಸಿರು ಸೇವೆಗಳು ಮುಂದಿನ ಪೀಳಿಗೆಗೆ ಪರಿಸರ ಜಾಗೃತಿಯ ಸಂದೇಶ ಸಾರುವುದರೊಂದಿಗೆ, ಸಮಾಜದ ಪಾಲಿನ ಜವಾಬ್ದಾರಿಯನ್ನು ಸಾರ್ಥಕಗೊಳಿಸುತ್ತವೆ ಎಂದು ಸಚಿವರು ಸಂತಸ ವ್ಯಕ್ತಪಡಿಸಿದರು.

