ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ಸಂಸ್ಥೆಯು ಬೆಳಗಾವಿಯ ಜೈನ್ ಹೆರಿಟೇಜ್ ಶಾಲೆಯಲ್ಲಿ ವಿಶ್ವ ಪರಿಸರ ದಿನಾಚರಣೆ ಅಂಗವಾಗಿ ಹಮ್ಮಿಕೊಂಡಿದ್ದ ಪ್ರತಿಷ್ಠಿತ “ಗೋಲ್ಡನ್ ಆರೋ ಪ್ರಶಸ್ತಿ ಪ್ರದಾನ ಸಮಾರಂಭ-2026” ಅತ್ಯಂತ ಯಶಸ್ವಿಯಾಗಿ ನೆರವೇರಿತು. ಪರಿಸರ ಸಂರಕ್ಷಣೆಯ ಜಾಗೃತಿಯೊಂದಿಗೆ ಜಿಲ್ಲೆಯ ನೂರಕ್ಕೂ ಹೆಚ್ಚು ಸಾಧಕ ವಿದ್ಯಾರ್ಥಿಗಳಿಗೆ ಈ ಕಾರ್ಯಕ್ರಮದಲ್ಲಿ ಅತ್ಯುನ್ನತ ಪ್ರಶಸ್ತಿ ನೀಡಿ ಗೌರವಿಸಲಾಯಿತು.
“ಪ್ರಕೃತಿಯಿಂದ ಪ್ರೇರಿತ – ಭವಿಷ್ಯಕ್ಕಾಗಿ ಹವಾಮಾನ” ಎಂಬ ಪರಿಕಲ್ಪನೆಯಡಿ ನಡೆದ ಈ ಕಾರ್ಯಕ್ರಮದಲ್ಲಿ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಪ್ರತಿನಿಧಿ ಹಾಗೂ ಜಿಲ್ಲಾ ನ್ಯಾಯಾಧೀಶರಾದ ಶ್ರೀ ಕೆ. ಎನ್. ಶಿವಕುಮಾರ್ ಅವರು ಮುಖ್ಯ ಅತಿಥಿಗಳಾಗಿ ಪಾಲ್ಗೊಂಡಿದ್ದರು. ಜೈನ್ ಹೆರಿಟೇಜ್ ಶಾಲೆಯ ಕಬ್ಸ್ ಮತ್ತು ಬುಲ್ಬುಲ್ಸ್ ವಿದ್ಯಾರ್ಥಿಗಳು ಔಷಧೀಯ ಸಸ್ಯಗಳು, ಸೀಡ್ ಬಾಲ್ ಹಾಗೂ ಕಾಂಪೋಸ್ಟ್ ಪಿಟ್ ಒಳಗೊಂಡ ಆಕರ್ಷಕ


ಪ್ರದರ್ಶನವನ್ನು ಪ್ರಸ್ತುತಪಡಿಸಿ, ಪರಿಸರ ಸಂರಕ್ಷಣೆಯ ಸವಾಲುಗಳಿಗೆ ಸರಳ ಪರಿಹಾರಗಳನ್ನು ಆತ್ಮವಿಶ್ವಾಸದಿಂದ ವಿವರಿಸಿದರು. ಶಾಲೆಯ ಆವರಣದಲ್ಲಿ ಗಿಡ ನೆಡುವ ಅಭಿಯಾನ ಹಾಗೂ ಪರಿಸರ ಜಾಗೃತಿ ಪ್ರದರ್ಶನವನ್ನು ಆಯೋಜಿಸುವ ಮೂಲಕ ಭವಿಷ್ಯದ ಪೀಳಿಗೆಗೆ ಪ್ರಕೃತಿಯನ್ನು ಉಳಿಸುವ ದೃಢ ಸಂಕಲ್ಪವನ್ನು ವಿದ್ಯಾರ್ಥಿಗಳು ತೋರ್ಪಡಿಸಿದರು.

ಕಾರ್ಯಕ್ರಮದ ಪ್ರಮುಖ ಆಕರ್ಷಣೆಯಾಗಿ ಬೆಳಗಾವಿ ಜಿಲ್ಲೆಯ ಒಟ್ಟು 120 ಕಬ್ಸ್ ಮತ್ತು ಬುಲ್ಬುಲ್ಸ್ ವಿದ್ಯಾರ್ಥಿಗಳಿಗೆ ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ನ ಅತ್ಯುನ್ನತ ಗೌರವವಾದ “ಗೋಲ್ಡನ್ ಆರೋ ಪ್ರಶಸ್ತಿ 2026” ಅನ್ನು ನೀಡಿ ಸನ್ಮಾನಿಸಲಾಯಿತು. ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಯ (KSPCB) ಹಿರಿಯ ಅಧಿಕಾರಿಗಳಾದ ಶ್ರೀ ಗೋಪಾಲ್ ಕೃಷ್ಣ ಸಾಂತಂಗಿ, ಪರಿಸರ ಅಧಿಕಾರಿ ಶ್ರೀ ಹನುಮಂತಪ್ಪ, ವಿಜ್ಞಾನಿ ಡಾ. ಪಾಟೀಲ್ ಹಾಗೂ ಬಿ.ಎಸ್.ಜಿ ಅಧಿಕಾರಿಗಳಾದ ಶ್ರೀ ವಿಠ್ಠಲ್ ಎಸ್.ಬಿ. ಮತ್ತು ಶ್ರೀ ರಾಜಕುಮಾರ್ ಕೆ. ಗೌರವಾನ್ವಿತ ಅತಿಥಿಗಳಾಗಿ ಭಾಗವಹಿಸಿ ವಿದ್ಯಾರ್ಥಿಗಳ ನಾಯಕತ್ವ ಹಾಗೂ ಪರಿಸರ ಕಾಳಜಿಯನ್ನು ಶ್ಲಾಘಿಸಿದರು. ಶಾಲೆಯ ಪ್ರಾಂಶುಪಾಲರಾದ ಶ್ರೀಮತಿ ರೋಹಿಣಿ ಕೆ. ಬಿ., ಮುಖ್ಯ ಆಡಳಿತಾಧಿಕಾರಿ

ಶ್ರೀಮತಿ ಅಮೀ ದೋಷಿ ಮಾರ್ಗದರ್ಶನ ನೀಡಿದ್ದು, ಕಾರ್ಯಕ್ರಮದ ಯಶಸ್ಸಿಗೆ ಶ್ರಮಿಸಿದ ಶಿಕ್ಷಕರಾದ ಶ್ರೀಮತಿ ಪಲ್ಲವಿ ನಾಡಕರ್ಣಿ ಮತ್ತು ಶ್ರೀ ಸಾಗರ್ ಅವರ ಸಮರ್ಪಣಾ ಭಾವದ ಸೇವೆಯನ್ನು ಆಡಳಿತ ಮಂಡಳಿ ಮುಕ್ತಕಂಠದಿಂದ ಪ್ರಶಂಸಿಸಿತು
