ಕಠಿಣ ಪರಿಶ್ರಮ ಮತ್ತು ಶಿಸ್ತು ಇದ್ದರೆ ಉನ್ನತ ಸಾಧನೆ ಸಾಧ್ಯ ಎಂಬುದನ್ನು ಬೆಳಗಾವಿಯ ವೈದ್ಯರೊಬ್ಬರು ಸಾಬೀತುಪಡಿಸಿದ್ದಾರೆ. ಬೆಂಗಳೂರಿನ ರಾಜೀವ್ ಗಾಂಧಿ ಆರೋಗ್ಯ ವಿಜ್ಞಾನಗಳ ವಿಶ್ವವಿದ್ಯಾಲಯದ ಸ್ನಾತಕೋತ್ತರ ಪದವಿಯಲ್ಲಿ ಡಾ. ದರ್ಶಿನಿ ಗೋವೇಕರ್ ಚಿನ್ನದ ಪದಕ ಮುಡಿಗೇರಿಸಿಕೊಂಡಿದ್ದಾರೆ.
ಬೆಂಗಳೂರಿನ ರಾಜೀವ್ ಗಾಂಧಿ ಆರೋಗ್ಯ ವಿಜ್ಞಾನಗಳ ವಿಶ್ವವಿದ್ಯಾಲಯ (RGUHS) ಜೂನ್ 16, 2026 ರಂದು ಹಮ್ಮಿಕೊಂಡಿದ್ದ ತನ್ನ ಸ್ನಾತಕೋತ್ತರ ಪದವಿ ಕಾರ್ಯಕ್ರಮದಲ್ಲಿ, ಬೆಳಗಾವಿಯ ಹೊನಗಾದಲ್ಲಿರುವ ಡಾ. ರವಿ ಪಾಟೀಲ್ ಆಯುರ್ವೇದಿಕ್ ವೈದ್ಯಕೀಯ ಕಾಲೇಜು ಆಸ್ಪತ್ರೆ ಮತ್ತು ಸಂಶೋಧನಾ ಕೇಂದ್ರದ ಸಹಾಯಕ ಪ್ರಾಧ್ಯಾಪಕರಾದ ಡಾ. ದರ್ಶಿನಿ ಗೋವೇಕರ್ ಅವರಿಗೆ ‘ಸಂಹಿತಾ ಸಿದ್ಧಾಂತ’ ವಿಭಾಗದಲ್ಲಿ ಅತ್ಯುನ್ನತ ಚಿನ್ನದ ಪದಕ ನೀಡಿ ಗೌರವಿಸಿದೆ.

ಡಾ. ದರ್ಶಿನಿ ಅವರ ಈ ಅಸಾಧಾರಣ ಸಾಧನೆಯು ಅವರ ನಿರಂತರ ಶ್ರಮ, ಶಿಸ್ತು ಮತ್ತು ಶೈಕ್ಷಣಿಕ ಉತ್ಕೃಷ್ಟತೆಗೆ ಸಂದ ಜಯವಾಗಿದ್ದು, ಅವರ ಪೋಷಕರಿಗೆ ಮಾತ್ರವಲ್ಲದೆ ಇಡೀ ಬೆಳಗಾವಿ ಜಿಲ್ಲೆಗೆ ಅಪಾರ ಹೆಮ್ಮೆ ತಂದಿದೆ. ಈ ಐತಿಹಾಸಿಕ ಯಶಸ್ಸಿಗೆ ರವಿ ಪಾಟೀಲ್ ಹೆಲ್ತ್ ಅಂಡ್ ಎಜುಕೇಶನ್ ಸೊಸೈಟಿಯ ಅಧ್ಯಕ್ಷರಾದ ಡಾ. ರವಿ ಪಾಟೀಲ್ (MS Ortho), ಕಾಲೇಜಿನ ಪ್ರಾಶುಪಾಲರು, ಡೀನ್ ಹಾಗೂ ಡಾ. ರವಿ ಪಾಟೀಲ್ ಆಯುರ್ವೇದಿಕ್ ವೈದ್ಯಕೀಯ ಕಾಲೇಜಿನ ಸಮಸ್ತ ಸಿಬ್ಬಂದಿ ವರ್ಗದವರು ಡಾ. ದರ್ಶಿನಿ ಅವರಿಗೆ ಹೃತ್ಪೂರ್ವಕ ಅಭಿನಂದನೆಗಳನ್ನು ಸಲ್ಲಿಸಿ, ಮುಂದಿನ ಭವಿಷ್ಯಕ್ಕೆ ಶುಭ ಹಾರೈಸಿದ್ದಾರೆ.
