ಜಿಲೆಟಿನ್ ಕಡ್ಡಿ ಪತ್ತೆಯಾದ ಸ್ಥಳದಲ್ಲಿ ಟೈಮರ್ ಸಿಕ್ಕಿರುವ ಬಗ್ಗೆ ಸಮಗ್ರ ತನಿಖೆ ನಡೆಸಲಾಗುತ್ತಿದೆ. ಈ ಪ್ರಕರಣವನ್ನು ಎನ್ಐಎ ತನಿಖೆಗೆ ಒಪ್ಪಿಸಲಾಗುವುದು ಎಂದು ಗೃಹ ಸಚಿವ ಜಿ. ಪರಮೇಶ್ವರ್ ತಿಳಿಸಿದರು.

ಬೆಂಗಳೂರು ಸದಾಶಿವನಗರದ ತಮ್ಮ ನಿವಾಸದ ಬಳಿ ಇಂದು ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, “ಕರೆ ಮಾಡಿ ಬಾಂಬ್ ಬೆದರಿಕೆ ಹಾಕಿದ್ದ ವ್ಯಕ್ತಿಯನ್ನು ಪೊಲೀಸರು ಈಗಾಗಲೇ ಬಂಧಿಸಿದ್ದು, ವಿಚಾರಣೆ ನಡೆಸುತ್ತಿದ್ದಾರೆ. ಘಟನಾ ಸ್ಥಳದಲ್ಲಿ ಪತ್ತೆಯಾದ ಜಿಲೆಟಿನ್ ಕಡ್ಡಿ ಸೇರಿದಂತೆ ಎಲ್ಲಾ ಪುರಾವೆಗಳನ್ನು ತನಿಖೆಗೆ ಒಳಪಡಿಸಲಾಗಿದೆ,” ಎಂದರು.

ಮುಂದುವರಿದು ಮಾತನಾಡಿದ ಸಚಿವರು, ಎನ್ಐಎ ಅಧಿಕಾರಿಗಳು ಸಹ ತನಿಖೆ ನಡೆಸಲು ಆಸಕ್ತಿ ತೋರಿಸಿದ್ದಾರೆ, ಹಾಗಾಗಿ ಅವರಿಗೆ ಪ್ರಕರಣವನ್ನು ಹಸ್ತಾಂತರಿಸುತ್ತೇವೆ. ಪ್ರಧಾನಮಂತ್ರಿಯವರ ಕಾರ್ಯಕ್ರಮಗಳಿಗೆ ಯಾವಾಗಲೂ ಉನ್ನತ ಮಟ್ಟದ ಭದ್ರತೆ ಇರುತ್ತದೆ. ರಾಜ್ಯ ಮತ್ತು ಕೇಂದ್ರ ಭದ್ರತಾ ಸಂಸ್ಥೆಗಳು ಸಮನ್ವಯದೊಂದಿಗೆ ಕಾರ್ಯನಿರ್ವಹಿಸುತ್ತವೆ. ಪ್ರಧಾನಿ ಬರುವ ಎರಡು ಗಂಟೆ ಮುಂಚಿತವಾಗಿಯೇ ಜಿಲೆಟಿನ್ ಕಡ್ಡಿ ಪತ್ತೆ ಹಚ್ಚಿರುವುದು ಪೊಲೀಸರ ಶ್ಲಾಘನೀಯ ಕೆಲಸ. ಈ ಘಟನೆಗೆ ಭಯೋತ್ಪಾದನಾ ಸಂಘಟನೆಗಳ ಜೊತೆ ಸಂಪರ್ಕವಿದೆಯೇ ಎಂಬ ಬಗ್ಗೆ ತನಿಖೆಯ ನಂತರವಷ್ಟೇ ಸ್ಪಷ್ಟ ಚಿತ್ರಣ ಸಿಗಲಿದೆ, ಎಂದು ಪ್ರತಿಕ್ರಿಯಿಸಿದರು.
ಶೃಂಗೇರಿಯಲ್ಲಿ ಮತ್ತೆ ರಾಜೇಗೌಡರಿಗೆ ಗೆಲುವು ವಿಚಾರವಾಗಿ ಮಾತನಾಡಿ, ನ್ಯಾಯಾಲಯ ಏನು ತೀರ್ಪು ಕೊಡುತ್ತೋ ಅದನ್ನು ನೋಡಬೇಕು. ಅಲ್ಲಿ ರಿ ಕೌಂಟ್ ಮಾಡಿದಾಗ 250 ಮತ ಹೆಚ್ಚು ಬರುತ್ತೆ ಅಂದರೆ ಏನು ಅರ್ಥ?. ಕೌಂಟಿಂಗ್ ಸರಿಯಾಗಿಲ್ಲ ಎಂದು ಅರ್ಥ ಅಲ್ವಾ?. ಅಧಿಕಾರಿಗಳ ಮೇಲೆ ಕ್ರಮ ಆಗಬೇಕಲ್ವಾ?. ಈ ಹಿಂದೆ ಕೌಂಟ್ ಮಾಡಿದ್ದು ಸರಿ ಎಂದು ಸುಪ್ರೀಂ ಕೋರ್ಟ್ ತಡೆ ನೀಡಿದೆ. ಟ್ಯಾಂಪರಿಂಗ್ ಆಗಿರೋ ದೂರಿನ ಬಗ್ಗೆ ರಾಜ್ಯ ಪೊಲೀಸರು ತನಿಖೆ ಮಾಡ್ತಿದ್ದಾರೆ. ಎಫ್ಎಸ್ಎಲ್ನಲ್ಲೂ ಚೆಕ್ ಮಾಡ್ತಾರೆ ಎಂದರು.
