ಇಂದು ನಾವು ನಮ್ಮ ಸಂಸ್ಕೃತಿ , ಧರ್ಮವನ್ನು ರಕ್ಷಿಸಿ ಉಳಿಸಿಕೊಳ್ಳಬೇಕಾದರೆ ನಮ್ಮ ಮಕ್ಕಳಿಗೆ ಉತ್ತಮ ಆಚಾರ- ವಿಚಾರ ಪ್ರದಾನ ಮಾಡಬೇಕು. ಇದರ ಜೊತೆಗೆ ಧಾರ್ಮಿಕ ಸಂಸ್ಕಾರ ಶಿಬಿರಗಳ ಮೂಲಕ ಧರ್ಮ ರಕ್ಷಣೆ ಮಾಡಲು ಸಾಧ್ಯ ಎಂದು ಹಿರಿಯ ನ್ಯಾಯವಾದಿ ರವಿರಾಜ ಪಾಟೀಲ ಅವರು ಇಂದಿಲ್ಲಿ ಹೇಳಿದರು.

ಬೆಳಗಾವಿಯ ಅನಗೋಳದಲ್ಲಿನ ಶ್ರೀ ಆದಿನಾಥ ಸಾಂಸ್ಕೃತಿಕ ಭವನದಲ್ಲಿ ಜೈನ ಆಗಮ ಮಿಷನ ವತಿಯಿಂದ ಹಮ್ಮಿಕೊಳ್ಳಲಾದ 10 ನೇ ಜೈನ ಧಾರ್ಮಿಕ ಶಿಕ್ಷಣ ಶಿಬಿರದ ಉದ್ಘಾಟನಾ ಸಮಾರಂಭಕ್ಕೆ ಮುಖ್ಯ ಅತಿಥಿಗಳಾಗಿ ಆಗಮಿಸಿ ಮಾತನಾಡಿದ ಅವರು, ಮಕ್ಕಳಲ್ಲಿ ಧಾರ್ಮಿಕ ಸಂಸ್ಕಾರಗಳನ್ನು ಬೆಳೆಸುವುದು ಪಾಲಕರ ಕರ್ತವ್ಯವಾಗಿದೆ. ಪಾಲಕರು ಸಹ ತಮ್ನ ಕರ್ತವ್ಯ ವನ್ನು ಪಾಲಿಸಬೇಕು.ಕಳೆದ ಹತ್ತು ವರ್ಷಗಳಿಂದ ಅನಗೋಳ ಭಾಗದ ಜೈನ ಸಮಾಜ ಬಾಂಧವರು ಇಂತಹ ಧಾರ್ಮಿಕ ಶಿಬಿರಗಳನ್ನು ನಡೆಸುತ್ತ ಬಂದಿದ್ದು ಅನಗೋಳ ಶ್ರಾವಕರ ಕಾರ್ಯ ಶ್ಲಾಘನೀಯವಾಗಿದೆ ಎಂದರು.

ಸಮಾರಂಭದ ಸಾನಿಧ್ಯ ವಹಿಸಿದ್ದ ಆಚಾರ್ಯ ಶ್ರಿ ಧರ್ಮಸೇನ ಮುನಿಗಳು ಆರ್ಶಿವಚನ ನೀಡುತ್ತ, ಇಂದಿನ ಮಕ್ಕಳಲ್ಲಿ ಮೊಬೈಲ್ ಗೀಳು ಹೆಚ್ಚುತ್ತಿದೆ. ಮನೆಯಲ್ಕಿ ಮಕ್ಕಳು ಮೊಬೈಲ್ ಬಳಸುವದನ್ನು ತಡೆಯುವ ಜವಾಬ್ದಾರಿ ಪಾಲಕರ ಮೇಲಿದೆ. ಮಕ್ಕಳು ಯಾವುದೇ ದುಶ್ಚಟಗಳಿಗೆ ಬಲಿಯಾಗಬಾರದು ಈ ಬಗ್ಗೆಯೂ ಪಾಲಕರು ಕಾಳಜಿ ವಹಿಸಬೇಕೆಂದು ಅವರು ತಿಳಿಸಿದರು.
ಶ್ರೀಮತಿ ಸುಧಾತಾಯಿ ಬಾಳಾಸಾಹೇಬ ಪಾಟೀಲ ಮತ್ತು ಶ್ರೀಮತಿ ಪಲ್ಲವಿ ಸಚಿನ ಪಾಟೀಲ ಅವರು ಶಿಬಿರವನ್ನು ಉದ್ಘಾಟಿಸಿದರು.
ಶಿಬಿರಾರ್ಥಿಗಳಿಗೆ ಬಿ.ಟಿ.ಪಾಟೀಲ ಸನ್ಸ ವತಿಯಿಂದ ಧಾರ್ಮಿಕ ಪಠ್ಯ ಪುಸ್ತಕಗಳನ್ನು ವಿತರಿಸಲಾಯಿತು.
ವೇದಿಕೆ ಮೇಲೆ ರಾಜು ಹನಮಣ್ಣವರ, ರಾಜು ಬೆಂಢಿಗೇರಿ, ಧನಪಾಲ ಪಾಟೀಲ ಉಪಸ್ಥಿತರಿದ್ದರು . ಅನೇಕಾಂತ ಶಾಸ್ತ್ರಿ ಮತ್ತು ಮಿಥುನ ಶಾಸ್ತ್ರಿ ಇವರು ಧಾರ್ಮಿಕ ಶಿಕ್ಷಣ ಶಿಬಿರಾರ್ಥಿಗಳಿಗೆ ಬೋಧನೆ ಮಾಡಿದರು.
ಈ ಸಂದರ್ಭದಲ್ಲಿ ಅನಗೋಳ ಸಮಸ್ತ ಜೈನ ಸಮಾಜ ಬಾಂಧವರು ಹೆಚ್ಚಿನ ಸಂಖ್ಯೆಯಲ್ಲಿ ಉಪಸ್ಥಿತರಿದ್ದರು.
