• ಮನೆಗಳ್ಳತನ ತಡೆಯಲು ಪೊಲೀಸರ ಮಾಸ್ಟರ್ ಪ್ಲಾನ್.
• ಬೆಳಗಾವಿ ಜನರ ರಕ್ಷಣೆಗೆ ಕೆಎಸ್ಪಿ ಆಪ್.
• ಬೀಗ ಹಾಕಿದ ಮನೆಗೆ ಪೊಲೀಸ್ ಕಾವಲು.
• ನಿಮ್ಮ ಸುರಕ್ಷತೆಗೆ ಈಗ ಖಾಕಿ ಭದ್ರತೆ.

ಬೆಳಗಾವಿ ಜಿಲ್ಲೆಯಲ್ಲಿ ಮನೆಗಳ್ಳತನ ತಡೆಯಲು ಪೊಲೀಸ್ ಇಲಾಖೆ ಈಗ ಹೊಸ ಮಾಸ್ಟರ್ ಪ್ಲಾನ್ ರೂಪಿಸಿದೆ. ನೀವು ಫ್ಯಾಮಿಲಿ ಜೊತೆ ಟೂರ್ ಹೋಗ್ತಿದ್ದೀರಾ? ಹಾಗಾದ್ರೆ ಇನ್ಮುಂದೆ ಕಳ್ಳರ ಭಯ ಬೇಡ, ನಿಮ್ಮ ಮನೆಯ ನಿಗಾ ವಹಿಸಲಿದ್ದಾರೆ! ಈ ಕುರಿತು ಎಸ್ಪಿ ರಾಮರಾಜನ್ ಅವರು ನೀಡಿದ ಪ್ರಮುಖ ಮಾಹಿತಿ ಇಲ್ಲಿದೆ.
ಬೆಳಗಾವಿ ಜಿಲ್ಲೆಯಲ್ಲಿ ಇತ್ತೀಚಿನ ದಿನಗಳಲ್ಲಿ ಹೆಚ್ಚುತ್ತಿರುವ ಮನೆಗಳ್ಳತನ ಪ್ರಕರಣಗಳಿಗೆ ಬ್ರೇಕ್ ಹಾಕಲು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ. ಎಸ್ಪಿ ರಾಮರಾಜನ್ ಅವರು ಹೊಸ ಅಭಿಯಾನಕ್ಕೆ ಚಾಲನೆ ನೀಡಿದ್ದಾರೆ. ಜನರು ಪ್ರವಾಸಕ್ಕೆ ಅಥವಾ ಶುಭ ಸಮಾರಂಭಗಳಿಗೆ ಮನೆಗೆ ಬೀಗ ಹಾಕಿ ತೆರಳುವಾಗ ಕಡ್ಡಾಯವಾಗಿ ಸ್ಥಳೀಯ ಪೊಲೀಸರಿಗೆ ಮಾಹಿತಿ ನೀಡಬೇಕು ಎಂದು ಅವರು ಮನವಿ ಮಾಡಿದ್ದಾರೆ. ಹೀಗೆ ಮಾಹಿತಿ ನೀಡುವ ಮೂಲಕ ಸಾರ್ವಜನಿಕರು ತಮ್ಮ ಆಸ್ತಿಪಾಸ್ತಿಗಳ ರಕ್ಷಣೆಗೆ ಪೊಲೀಸರೊಂದಿಗೆ ಕೈಜೋಡಿಸಬಹುದಾಗಿದೆ. ವಿಶೇಷವಾಗಿ ‘ಕೆ.ಎಸ್.ಪಿ’ (KSP) ಮೊಬೈಲ್ ಅಪ್ಲಿಕೇಷನ್ ಬಳಸಿ ಜನರು ತಮ್ಮ ಅನುಪಸ್ಥಿತಿಯ ಬಗ್ಗೆ ಮಾಹಿತಿ ನೀಡಿದರೆ, ಆಯಾ ವ್ಯಾಪ್ತಿಯ ಬೀಟ್ ಪೊಲೀಸರು ನಿಮ್ಮ ಮನೆಗಳ ಮೇಲೆ ವಿಶೇಷ ನಿಗಾ ಇಡಲಿದ್ದಾರೆ. ಪಟ್ಟಣ ಪ್ರದೇಶಗಳಲ್ಲಿ ಬೀಟ್ ವ್ಯವಸ್ಥೆಯನ್ನು ಮತ್ತಷ್ಟು ಬಲಪಡಿಸಲಾಗಿದ್ದು, ಪೊಲೀಸರ ನಿರಂತರ ಗಸ್ತಿನಿಂದ ಅಪರಾಧ ಚಟುವಟಿಕೆಗಳನ್ನು ತಡೆಯಲು ಸಾಧ್ಯವಾಗುತ್ತದೆ. ಕಳ್ಳತನ ನಡೆದ ಮೇಲೆ ದೂರು ನೀಡುವುದಕ್ಕಿಂತ, ಕಳ್ಳತನವಾಗದಂತೆ ಮುನ್ನೆಚ್ಚರಿಕೆ ವಹಿಸುವುದು ಉತ್ತಮ ಎಂದು ಎಸ್ಪಿ ಈ ಸಂದರ್ಭದಲ್ಲಿ ತಿಳಿಸಿದ್ದಾರೆ.

