ಹಳೆ ವೈಷಮ್ಯದ ಹಿನ್ನೆಲೆ ಯುವಕನೊಬ್ಬನನ್ನು ನಿರ್ಜನ ಪ್ರದೇಶಕ್ಕೆ ಕರೆಸಿ ಮಾರಕಾಸ್ತ್ರಗಳಿಂದ ಹಲ್ಲೆ ನಡೆಸಿ ಕೊಲೆ ಮಾಡಿರುವ ಘಟನೆ ಬೆಳಗಾವಿ ತಾಲೂಕಿನ ಹುಂಚ್ಯಾನಟ್ಟಿ ಗ್ರಾಮದ ಹೊರವಲಯದಲ್ಲಿ ನಡೆದಿದೆ.

ಮಜಗಾಂವ ಗ್ರಾಮದ ರಾಹುಲ್ ತಳವಾರ (22) ಮೃತ ಯುವಕನಾಗಿದ್ದಾನೆ. ಹಣ ನೀಡುವುದಾಗಿ ಹೇಳಿ ಆರೋಪಿಗಳು ರಾಹುಲ್ ಅವರನ್ನು ಹುಂಚ್ಯಾನಟ್ಟಿ ಗ್ರಾಮದ ಸಮೀಪದ ನಿರ್ಜನ ಪ್ರದೇಶಕ್ಕೆ ಕರೆಸಿಕೊಂಡು ತಲ್ವಾರ್ ನಿಂದ ಭೀಕರವಾಗಿ ಕೊಚ್ಚಿ ಕೊಲೆ ಮಾಡಿದ್ದಾರೆ.
ಮಂಜುನಾಥ ಶೀತಿಮನಿ ಸೇರಿದಂತೆ ಏಳು-ಎಂಟು ಜನರು ಸೇರಿ ರಾಹುಲ್ ಮೇಲೆ ತಲ್ವಾರಿನಿಂದ ದಾಳಿ ನಡೆಸಿದ್ದಾರೆ. ತಲೆ ಹಾಗೂ ಕೈ ಭಾಗಗಳಿಗೆ ಗಂಭೀರ ಗಾಯಗಳಾಗಿದ್ದು, ತಕ್ಷಣ ಅವರನ್ನು ಬಿಮ್ಸ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ರಾಹುಲ್ ಮೃತಪಟ್ಟಿದ್ದಾರೆ.
ಹಳೆ ದ್ವೇಷವೇ ಕೊಲೆಗೆ ಕಾರಣ ಎನ್ನಲಾಗುತ್ತಿದ್ದು, ಘಟನೆಯ ಕುರಿತು ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

