* ಸಮಯ ಪ್ರಜ್ಞೆ ಮರೆತ ಸಬ್ ರಿಜಿಸ್ಟ್ರಾರ್ ರೇಣುಕಾ.
* ಕಚೇರಿಯೊಳಗೆ ಏಜೆಂಟರದ್ದೇ ಆಧಿಪತ್ಯ.
* ಕಾಯುವ ಸ್ಥಿತಿಯಲ್ಲಿ ದೂರದ ಊರಿನ ಜನರು.
* ಅಧಿಕಾರಿಗಳ ನಡೆಗೆ ಸಾರ್ವಜನಿಕರ ಆಕ್ರೋಶ.

ಖಾನಾಪೂರದ ಉಪ ನೋಂದಣಾಧಿಕಾರಿ ಹಾಗೂ ವಿವಾಹ ನೋಂದಣಾಧಿಕಾರಿ ಕಚೇರಿ ಈಗ ಏಜೆಂಟರ ಅಡ್ಡೆಯಾಗಿ ಬದಲಾಗಿದೆಯೇ ಎಂಬ ಅನುಮಾನ ಕಾಡತೊಡಗಿದೆ. ಅಧಿಕಾರಿ ರೇಣುಕಾ ವಕ್ಕುದ ಅವರು ಸಮಯಕ್ಕೆ ಸರಿಯಾಗಿ ಕಚೇರಿಗೆ ಬಾರದೆ ಜನರನ್ನು ಕಾಡಿಸುತ್ತಿದ್ದರೆ, ಇತ್ತ ಅಧಿಕಾರಿಗಳಿಗಿಂತ ಮೊದಲೇ ಏಜೆಂಟರು ಕಚೇರಿಯಲ್ಲಿ ಬೀಡುಬಿಟ್ಟಿರುವುದು ಸಾರ್ವಜನಿಕರ ಕೆಂಗಣ್ಣಿಗೆ ಗುರಿಯಾಗಿದೆ.
ಖಾನಾಪೂರದ ಸಬ್ ರಿಜಿಸ್ಟ್ರಾರ್ ಕಚೇರಿಯಲ್ಲಿ ಸಮಯ ಪಾಲನೆ ಎಂಬುದು ಮರೀಚಿಕೆಯಾಗಿದೆ. ಉಪ ನೋಂದಣಾಧಿಕಾರಿ ರೇಣುಕಾ ವಕ್ಕುಂದ ಅವರು ನಿಗದಿತ ಸಮಯಕ್ಕೆ ಕಚೇರಿಗೆ ಹಾಜರಾಗದೆ ಸಾರ್ವಜನಿಕರನ್ನು ಗಂಟೆಗಟ್ಟಲೆ ಕಾಯಿಸುತ್ತಿದ್ದಾರೆ. ಆದರೆ ಅಚ್ಚರಿಯ ಸಂಗತಿಯೆಂದರೆ, ಅಧಿಕಾರಿಗಳು ಬರುವ ಮೊದಲೇ ಕಚೇರಿಯೊಳಗೆ ಏಜೆಂಟರು ಪ್ರತ್ಯಕ್ಷರಾಗಿ ತಮ್ಮ ವ್ಯವಹಾರಗಳನ್ನು ಆರಂಭಿಸಿರುತ್ತಾರೆ. ಸರ್ಕಾರಿ ಕಚೇರಿಯಲ್ಲಿ ಜನಸಾಮಾನ್ಯರಿಗಿಂತ ಏಜೆಂಟರಿಗೇ ಮೊದಲ ಆದ್ಯತೆ ಸಿಗುತ್ತಿರುವುದು ಹಲವು ಸಂಶಯಗಳಿಗೆ ದಾರಿ ಮಾಡಿಕೊಟ್ಟಿದೆ.
ದೂರದ ಹಳ್ಳಿಗಳಿಂದ ನೋಂದಣಿ ಕಾರ್ಯಗಳಿಗಾಗಿ ಬರುವ ಜನರು ಅಧಿಕಾರಿಯ ಬರುವಿಕೆಗಾಗಿ ಬಿಸಿಲಿನಲ್ಲಿ ಕಾಯುವಂತಾಗಿದೆ. ಕಚೇರಿಯ ಈ ಅವ್ಯವಸ್ಥೆಯ ಕುರಿತು ತಹಶೀಲ್ದಾರ್ ಹಾಗೂ ಜಿಲ್ಲಾ ನೋಂದಣಾಧಿಕಾರಿಗಳು ತಕ್ಷಣ ಗಮನಹರಿಸಬೇಕೆಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ. ಅಧಿಕಾರಿಗಳು ಸರಿಯಾದ ಸಮಯಕ್ಕೆ ಕಚೇರಿಗೆ ಬರುವಂತೆ ಸೂಚಿಸುವುದರ ಜೊತೆಗೆ, ಕಚೇರಿಯೊಳಗೆ ಏಜೆಂಟರ ಹಾವಳಿಗೆ ಕಡಿವಾಣ ಹಾಕಲು ಸೂಕ್ತ ಕ್ರಮ ಕೈಗೊಳ್ಳಬೇಕೆಂದು ನಾಗರಿಕರು ಆಗ್ರಹಿಸಿದ್ದಾರೆ.
