Belagavi

ಶರಣರ ವಚನಗಳೇ ವೈದ್ಯ ವಿಜ್ಞಾನದ ಸಾಕ್ಷಿ: ಬೆಳಗಾವಿಯಲ್ಲಿ ಡಾ. ಭವ್ಯಾ ಸಂಪಗಾರ ಪ್ರತಿಪಾದನೆ

Share

1. ವಚನ ಸಾಹಿತ್ಯದಲ್ಲಿ ಅಡಗಿದೆ ಆಳವಾದ ವೈದ್ಯ ವಿಜ್ಞಾನ
2. ಬೆಳಗಾವಿಯಲ್ಲಿ ಲಿಂಗಾಯತ ಕ್ಷೇಮಾಭಿವೃದ್ಧಿ ಸಂಘದಿಂದ ಜಯಂತಿ ಆಚರಣೆ
3. ಶರಣರ ಜ್ಞಾನಕ್ಕೆ ಗೌರವ ನೀಡಲು ಡಾ. ಭವ್ಯಾ ಸಂಪಗಾರ ಕರೆ
4. ಸಾಧಕ ವಿದ್ಯಾರ್ಥಿಗಳಿಗೆ ಸನ್ಮಾನ ಹಾಗೂ ‘ಆಯ್ದಕ್ಕಿ ಲಕ್ಕಮ್ಮ’ ನಾಟಕ ಪ್ರದರ್ಶನ

12ನೇ ಶತಮಾನದ ಶರಣರ ವಚನಗಳು ಕೇವಲ ಆಧ್ಯಾತ್ಮಿಕ ದರ್ಶನಗಳಲ್ಲ, ಅವುಗಳಲ್ಲಿ ವೈದ್ಯ ವಿಜ್ಞಾನದ ಆಳವಾದ ಅಧ್ಯಯನ ಅಡಗಿದೆ ಎಂದು ಡಾ. ಭವ್ಯಾ ಸಂಪಗಾರ ತಿಳಿಸಿದ್ದಾರೆ. ಬೆಳಗಾವಿಯ ಲಿಂಗಾಯತ ಕ್ಷೇಮಾಭಿವೃದ್ಧಿ ಸಂಘದ ವತಿಯಿಂದ ನಡೆದ ಬಸವ ಜಯಂತಿ ಕಾರ್ಯಕ್ರಮದಲ್ಲಿ ಅವರು ಈ ಕುರಿತು ಉಪನ್ಯಾಸ ನೀಡಿದರು. ಪೂಜ್ಯ ತಾಯಂದಿರ ಸಾನ್ನಿಧ್ಯದಲ್ಲಿ ನಡೆದ ಈ ಕಾರ್ಯಕ್ರಮದಲ್ಲಿ ಸಾಧಕರಿಗೆ ಸನ್ಮಾನ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಿದವು.

ಬೆಳಗಾವಿಯ ಸ್ಥಳೀಯ ಲಿಂಗಾಯತ ಕ್ಷೇಮಾಭಿವೃದ್ಧಿ ಸಂಘದ ವತಿಯಿಂದ ಶರಣ ವಸಂತ ಬ. ತೋರಣಗಟ್ಟಿ ವೇದಿಕೆಯಲ್ಲಿ ಏರ್ಪಡಿಸಲಾಗಿದ್ದ ಜಗಜ್ಯೋತಿ ಬಸವೇಶ್ವರ ಜಯಂತಿ ಕಾರ್ಯಕ್ರಮವು ಅತ್ಯಂತ ಅರ್ಥಪೂರ್ಣವಾಗಿ ಜರುಗಿತು. ಈ ಸಂದರ್ಭದಲ್ಲಿ “ವಚನ ಸಾಹಿತ್ಯದಲ್ಲಿ ವೈದ್ಯ ವಿಜ್ಞಾನ” ಎಂಬ ವಿಷಯದ ಕುರಿತು ಉಪನ್ಯಾಸ ನೀಡಿದ ಡಾ. ಭವ್ಯಾ ಸಂಪಗಾರ ಅವರು, 12ನೇ ಶತಮಾನದ ಶರಣರು ಖಗೋಳ, ಆರೋಗ್ಯ ಮತ್ತು ಸಮಾಜ ಶಾಸ್ತ್ರಗಳ ಬಗ್ಗೆ ಅಗಾಧ ಜ್ಞಾನ ಹೊಂದಿದ್ದರು. “ಕಾಯವಿದ್ದು ಕಾಬುದು ವಿಜ್ಞಾನ, ಜೀವವಿದ್ದು ಕಾಬುದು ಸುಜ್ಞಾನ” ಎಂಬ ವಚನವು ಶರಣರಿಗೆ ವೈದ್ಯ ವಿಜ್ಞಾನದ ಮೇಲಿದ್ದ ಹಿಡಿತಕ್ಕೆ ಸಾಕ್ಷಿಯಾಗಿದೆ. ಪಾಶ್ಚಿಮಾತ್ಯರ ಕೊಡುಗೆಗಳನ್ನು ಸಂಭ್ರಮಿಸುವ ನಾವು, ನಮ್ಮದೇ ಶರಣರ ಜ್ಞಾನವನ್ನು ನಿರ್ಲಕ್ಷಿಸಿರುವುದು ವಿಷಾದನೀಯ ಎಂದು ಹೇಳಿದರು.
ಪೂಜ್ಯ ವಾಗ್ದೇವಿ ತಾಯಿಯವರು ಆಶೀರ್ವಚನ ನೀಡಿ, ‘ಅಗ್ಘವನಿ ಪತ್ರೆ’ಯ ಮಹತ್ವ ವಿವರಿಸುತ್ತಾ, ಮನುಷ್ಯ ತನ್ನನ್ನು ತಾನು ತಿಳಿಯುವುದರ ಜೊತೆಗೆ ಪ್ರಕೃತಿಯ ಪತ್ರೆಯಂತಹ ಸಸ್ಯಗಳನ್ನು ಬಳಸುವ ಮೂಲಕ ಉತ್ತಮ ಆರೋಗ್ಯ ಹೊಂದಬೇಕು ಎಂದರು. ಪೂಜ್ಯ ಕುಮುದಿನಿ ತಾಯಿಯವರು ವಚನ ಗಾಯನದ ಮೂಲಕ ಗಮನ ಸೆಳೆದರು. ಇದೇ ವೇಳೆ ಬಿಇಎಂಎಸ್ ಮತ್ತು ಎಸ್‌ಎಸ್‌ಎಲ್‌ಸಿಯಲ್ಲಿ ಸಾಧನೆ ಮಾಡಿದ ವಿದ್ಯಾರ್ಥಿಗಳಿಗೆ ಸನ್ಮಾನಿಸಲಾಯಿತು ಹಾಗೂ ಸಂಘದ ಶರಣೆಯರಿಂದ ‘ಆಯ್ದಕ್ಕಿ ಲಕ್ಕಮ್ಮ’ ನಾಟಕ ಪ್ರದರ್ಶನಗೊಂಡಿತು.
ಈ ಸಮಾರಂಭದ ಅಧ್ಯಕ್ಷತೆಯನ್ನು ಎಸ್.ಜಿ. ಸಿದ್ನಾಳ ವಹಿಸಿದ್ದರು. ಸಂಘದ ಹಾದಿಯ ಬಗ್ಗೆ ಶಂಕರ ಶೆಟ್ಟಿ ವಿವರಿಸಿದರು. ಶರಣ ದಂಪತಿಗಳಾದ ವಿನೋದಾ ಕೆಂಗನಾಳ ಮತ್ತು ಶಂಕರ ಕೆಂಗನಾಳ ಷಟಸ್ಥಲ ಧ್ವಜಾರೋಹಣ ನೆರವೇರಿಸಿದರು. ವಚನ ಪ್ರಾರ್ಥನೆಯನ್ನು ಶೈಲೇಜಾ ಮುನವಳ್ಳಿ, ಸುನಿತಾ ನಂದೆಣ್ಣವರ ಮತ್ತು ತ್ರಿವೇಣಿ ಪಾಟಿಲ ನೆರವೇರಿಸಿಕೊಟ್ಟರು. ಮಹಾದೇವ ಕೊರಿ ಪರಿಚಯಿಸಿದರೆ, ಶ್ರೀಕಾಂತ್ ಶಾನವಾಡ ಸ್ವಾಗತ, ಪ್ರಾಸ್ತಾವಿಕ ಹಾಗೂ ವಂದನಾರ್ಪಣೆ ಮಾಡಿದರು. ದಾಸೋಹ ಸೇವೆಯನ್ನು ಜೆ.ಎಸ್. ನರಸಣ್ಣವರ, ಡಿ.ಜಿ. ಬಾಗೇವಾಡಿ, ಶಂಕರ ಕೆಂಗನಾಳ ಮತ್ತು ಶೈಲೇಜಾ ಮುನವಳ್ಳಿ ನೆರವೇರಿಸಿದರು.
ವೇದಿಕೆಯ ಮೇಲೆ ಮತ್ತು ಸಭೆಯಲ್ಲಿ ಕಟ್ಟಿಮನಿ, ದುಂಡಪ್ಪ ಸಂಕೇಶ್ವರ, ಮೋಹನ್ ಮುನವಳ್ಳಿ, ರುದ್ರಗೌಡರ, ಡಾ. ಮಗದುಮ, ಉಮಾ ಸಂಕೇಶ್ವರ, ಭಾರತಿ ಮಗದುಮ, ಅನುಪಮಾ ಶಾನವಾಡ, ಪ್ರೇಮಾ ಪುರಾನಿಕ ಮಠ ಸೇರಿದಂತೆ ನೂರಾರು ಶರಣ-ಶರಣೆಯರು ಉಪಸ್ಥಿತರಿದ್ದರು.

Tags:

error: Content is protected !!